ಉತ್ತಮ ಆರಂಭ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಲಭ್ಯವಾಗಿದ್ದರೂ ಇಬ್ಬರು ಆರಂಭಿಕರು ಕೂಡ ಅತ್ಯಂತ ಸಮರ್ಥರು ಎಂಬುದರಲ್ಲಿ ಅನುಮಾನವಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಎಲ್ ರಾಹುಲ್ ಖಾಯಂ ನಾಯಕನಾಗಿ ಕಣಕ್ಕಿಳಿಯುತ್ತಿದ್ದರೆ ಶಿಖರ್ ಧವನ್ ಅದ್ಭುತ ಫಾರ್ಮ್ನಲ್ಲಿದ್ದರೂ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಧವನ್ ಮತ್ತೊಮ್ಮೆ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ. ಭಾರತದ ಈ ಆರಂಭಿಕರಿಬ್ಬರೂ ಮುಂದಿನ ಎರಡು ಪಂದ್ಯಗಳಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ನೀಡಬೇಕಿದೆ. ಹಾಗಾದಲ್ಲಿ ಮಾತ್ರ ತಂಡದ ಗೆಲುವಿಗೆ ಪೂರಕವಾಗಬಹುದು.
ಮಧ್ಯಮ ಕ್ರಮಾಂಕದ ಆಟಗಾರರಿಂದ ನೆರವು
ಟೆಸ್ಟ್ ಸರಣಿಯ ನಂತರ ಭಾರತದ ಮಧ್ಯಮ ಕ್ರಮಾಂಕದ ವೈಫಲ್ಯ ಏಕದಿನ ಸರಣಿಯಲ್ಲಿಯೂ ಮುಂದುವರಿದಿದೆ. ಇದು ತಂಡದ ಮ್ಯಾನೇಜ್ಮೆಂಟ್ಗೆ ತಲೆನೋವಾಗಿದೆ. ರಿಷಭ್ ಪಂತ್ ನಾಲ್ಕನೇ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದರೂ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫಲವಾದರು. ಶ್ರೇಯಸ್ ಐಯ್ಯರ್ ಕೂಡ ಮೊದಲ ಪಂದ್ಯದಲ್ಲಿ ವಿಫಲವಾದರು. ಇನ್ನು ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ವೆಂಕಟೇಶ್ ಐಯ್ಯರ್ ಕೂಡ ಮೊದಲ ಪಂದ್ಯದಲ್ಲಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಎಲ್ಲಾ ಆಟಗಾರರು ಕೂಡ ತಮ್ಮ ಮೇಲಿನ ನಿರೀಕ್ಷೆಯನ್ನು ಉಳಿಸಿಕೊಳ್ಳಬೇಕಿದೆ.
ದೊಡ್ಡ ಜೊತೆಯಾಟ
ಟೀಮ್ ಇಂಡಿಯಾದ ಆಟಗಾರರಿಂದ ದೊಡ್ಡ ಜೊತೆಯಾಟ ನೀಡಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಯಾರಾದರೂ ಒಬ್ಬ ಆಟಗಾರ ನೆಲಕಚ್ಚಿ ನಿಂತು ಆಡಿದರೂ ಆತನಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಬೆಂಬಲ ದೊರೆಯುತ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸಂದರ್ಭದಲ್ಲಿಯೂ ಭಾರತಕ್ಕೆ ಇದು ದೊಡ್ಡ ಹಿನ್ನಡೆಯುಂಟು ಮಾಡಿತ್ತು. ಇದೀಗ ಏಕದಿನ ಸರಣಿಯಲ್ಲಿಯೂ ಇದು ಮುಂದುವರಿದಂತೆ ಭಾಸವಾಗುತ್ತಿದೆ. ಮೊದಲ ಪಂದ್ಯದಲ್ಲಿ ಧವನ್ ಹಾಗೂ ಕೊಹ್ಲಿಯಿಂದ ಉತ್ತಮ ಜೊತೆಯಾಟ ಬಂತಾದರೂ ಅದರ ಪ್ರಯೋಜನ ತಂಡಕ್ಕೆ ದೊರೆಯುವ ಮುನ್ನವೇ ಈ ಜೋಡಿಯನ್ನು ಆಫ್ರಿನ್ ಬೌಲರ್ಗಳು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಭಾರತ ಜೊತೆಯಾಟದತ್ತಲೂ ತನ್ನ ಚಿತ್ತ ನೆಡಬೇಕಿದೆ.
ಎದುರಾಳಿಯ ಜೊತೆಯಾಟ ಮುರಿಯುವುದು ಅನಿವಾರ್ಯ
ಇನ್ನು ಭಾರತ ತಂಡ ಅದ್ಭುತವಾದ ಬೌಲರ್ಗಳಿಂದ ಕೂಡಿದ ತಂಡ ಎಂಬುದಲ್ಲಿ ಅನುಮಾನವಿಲ್ಲ. ಆದರೆ ಕ್ರೀಸ್ನಲ್ಲಿ ನೆಲೆಯೂರಿದ ಬಳಿಕ ಆಟಗಾರರನ್ನು ಔಟ್ ಮಾಡಲು ಭಾರತದ ಬೌಲರ್ಗಳು ವಿಫಲವಾಗುತ್ತಿದ್ದಾರೆ. ಅದರಲ್ಲೂ ಅಗ್ರ ಕ್ರಮಾಂಕದ ಆಟಗಾರರು ನೆಲಕಚ್ಚಿ ನಿಂತರೆ ಆ ಆಟಗಾರರನ್ನು ಬೇರ್ಪಡಿಸಲು ತಂಡ ಹರಸಾಹಸ ಪಡುತ್ತದೆ. ಟೆಸ್ಟ್ ಸರಣಿಯ ಅಂತಿಮ ಎರಡು ಪಂದ್ಯಗಳ ಎರಡು ಇನ್ನಿಂಗ್ಸ್ನಲ್ಲಿಯೂ ಭಾರತ ಈ ವಿಚಾರದಲ್ಲಿ ಎಡವಿತ್ತು. ಇದೀಗ ಏಕದಿನ ಸರಣಿಯಲ್ಲಿಯೂ ಅದು ಮುಂದುವರಿದಿದೆ. ಟೀಮ್ ಇಂಡಿಯಾದ ಬೌಲಿಂಗ್ ಪಡೆ ಇದಕ್ಕಾಗಿ ಯೋಜನೆಯನ್ನು ರೂಪಿಸಿ ಯಶಸ್ವಿಯಾದರೆ ಮಾತ್ರವೇ ಸರಿ ಗೆಲುವಿಗೆ ಅವಕಾಶವಿದೆ.