ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಸೀಮಿತ ಓವರ್ಗಳ ತಂಡ ಶ್ರೀಲಂಕಾದಲ್ಲಿದ್ದು ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಕಠಿಣ ತರಬೇತಿಯ ಮಧ್ಯೆ ತಂಡದ ಆಟಗಾರರು ಸಾಕಷ್ಟು ಉತ್ತಮ ಸಮಯಗಳನ್ನು ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್ ಹಾಗೂ ಋತುರಾಜ್ ಗಾಯಕ್ವಾಡ್ ಅವರ ಸಂಭಾಷಣೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿರುವ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಈ ವಿಡಿಯೋದಲ್ಲಿ ಕನ್ನಡವನ್ನು ಮಾತನಾಡುವ ಜೊತೆಗೆ ಋತುರಾಜ್ ಗಾಯಕ್ವಾಡ್ಗೆ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡಿದ್ದಾರೆ. ಋತುರಾಜ್ ಗಾಯಕ್ವಾಡ್ ಕೂಡ ಕೆಲ ಮರಾಠಿ ಶಬ್ಧಗಳನ್ನು ಕೃಷ್ಣಪ್ಪ ಗೌತಮ್ಗೆ ಹೇಳಿಕೊಟ್ಟಿದ್ದಾರೆ. ಇಬ್ಬರ ನಡುವಿನ ಸಂವಾದ ಅಭಿಮಾನಿಗಳಿಗೆ ಖುಷಿ ನೀಡಿದೆ.
Presenting The Language Exchange with #TeamIndia's @gowthamyadav88 & @Ruutu1331 😎 😎 - by @28anand & @ameyatilak
— BCCI (@BCCI) July 8, 2021
Banter ✅
Laughter ✅
Cricket sledges ✅
Watch all the fun unfold here🎥 👇 #SLvINDhttps://t.co/IzMvjxlfYa pic.twitter.com/C422D6GMdQ
ಕೃಷ್ಣಪ್ಪ ಗೌತಮ್ ಹಾಗೂ ಋತುರಾಜ್ ಗಾಯಕ್ವಾಡ್ ತಮ್ಮ ತಮ್ಮ ಮಾತೃಭಾಷೆಯ ಕೆಲ ಶಬ್ಧಗಳನ್ನು ಪರಸ್ಪರರಿಗೆ ಹೇಳಿಕೊಟ್ಟಿದ್ದಾರೆ. ಜೊತೆಗೆ ಇಬ್ಬರು ಆಟಗಾರರು ಕೂಡ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯನ್ನು ತಪ್ಪದೆ ವೀಕ್ಷಿಸುವಂತೆ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್ಗಳ ಸರಣಿಗೆ ಸಾಕಷ್ಟು ಯುವ ಆಟಗಾರರ ಅವಕಾಶವನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ಆರು ಆಟಗಾರರು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನ ಕರೆಯನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಭಾರತದ ಯುವ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ. ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಾಹರ್, ಚೇತನ್ ಸಕರಿಯಾ, ನವದೀಪ್ ಸೈನಿ.