ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ತಂಡ ಸೇರುವುದು ಯಾವಾಗ?
ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಕಾಣೆಯಾಗಿರುವ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ವಿಶ್ರಾಂತಿಗೆಂದು ತಂಡದಿಂದ ಹೊರಗುಳಿದಿದ್ದಾರೆ. ಇಬ್ಬರಿಗೂ ಸಹ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ನೀಡಿದ ಸಲಹೆ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದಿರುವ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಈ ಇಬ್ಬರೂ ಸಹ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ವಾಪಸ್ ತಂಡ ಸೇರಲಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೀಗೆ ವಿಶ್ರಾಂತಿಗೆಂದು ತಂಡದಿಂದ ಹೊರ ನಡೆದಿರುವ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಪಂದ್ಯಕ್ಕೂ ಕೂಡ ಅಲಭ್ಯರಾಗಿದ್ದಾರೆ.
ಕೆಎಲ್ ರಾಹುಲ್ ಭಾಗವಹಿಸುವಿಕೆ ಅನುಮಾನ!
ರೋಹಿತ್ ಶರ್ಮಾ ನಾಯಕತ್ವದಲ್ಲಿ ಉಪನಾಯಕನಾಗಿದ್ದ ಕೆಎಲ್ ರಾಹುಲ್ ಗಾಯದ ಸಮಸ್ಯೆಗೊಳಗಾಗಿರುವ ಕಾರಣ ಶ್ರೀಲಂಕಾ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದಾರೆ. ಸದ್ಯ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿರುವ ಕೆಎಲ್ ರಾಹುಲ್ ಸಂಪೂರ್ಣವಾಗಿ ಚೇತರಿಸಿಕೊಂಡರೆ ಮಾತ್ರ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ವಾಪಸ್ ಟೀಮ್ ಇಂಡಿಯಾ ಸೇರುವ ಸಾಧ್ಯತೆಗಳಿವೆ. ಇಲ್ಲದೇ ಇದ್ದರೆ ಕೆಎಲ್ ರಾಹುಲ್ ಸಂಪೂರ್ಣ ಫಿಟ್ ಆಗುವವರೆಗೂ ತಂಡ ಸೇರುವುದು ಅನುಮಾನವಾಗಿದೆ.
ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಕತೆಯೇನು?
ಒಂದೆಡೆ ಕೆಎಲ್ ರಾಹುಲ್ ಅವರದ್ದು ಗಾಯದ ಸಮಸ್ಯೆಯಾದರೆ, ಮತ್ತೊಂದೆಡೆ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರದ್ದು ಕೂಡ ಇದೇ ಕತೆ. ಫಿಟ್ನೆಸ್ ಕಳೆದುಕೊಂಡಿರುವ ಈ ಇಬ್ಬರೂ ಆಟಗಾರರು ಸಹ ಸಂಪೂರ್ಣವಾಗಿ ಫಿಟ್ ಆದರೆ ಮಾತ್ರ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಅಕ್ಷರ್ ಪಟೇಲ್ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗುವ ಸಾಧ್ಯತೆಗಳು ಹೆಚ್ಚಿದ್ದು, ರವಿಚಂದ್ರನ್ ಅವರ ಭಾಗವಹಿಸುವಿಕೆ ಫಿಟ್ನೆಸ್ ಆಧಾರದ ಮೇಲೆ ನಿಂತಿದ್ದು ಇನ್ನೂ ನಿಖರತೆ ಸಿಕ್ಕಿಲ್ಲ.