ಭಾರತ ಪ್ರವಾಸ ಕೈಗೊಂಡಿರುವ ಶ್ರಿಲಂಕಾ ಟೀಮ್ ಇಂಡಿಯಾ ವಿರುದ್ಧ ೩ ಪಂದ್ಯಗಳ ಟಿ ಟ್ಟೆಂಟಿ ಸರಣಿ ಹಾಗೂ ೨ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದೆ. ಮೊದಲಿಗೆ ಇತ್ತಂಡಗಳ ನಡುವೆ ನಡೆದ ೩ ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋತ ಶ್ರೀಲಂಕಾ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದೆ. ಇತ್ತ ಶ್ರೀಲಂಕಾ ವಿರುದ್ಧದ ಈ ಗೆಲುವಿನ ಮೂಲಕ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿರುವ ಟೀಮ್ ಇಂಡಿಯಾ ಸದ್ಯ ಶ್ರೀಲಂಕಾ ವಿರುದ್ಧ ಆರಂಭವಾಗಿರುವ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದೆ. ಹೌದು, ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಷಿಯೇಷನ್ ಕ್ರೀಡಾಂಗಣದಲ್ಲಿ ಮಾರ್ಚ್ ೪ರಂದು ಆರಂಭವಾದ ಮೊದಲ ಟೆಸ್ಟ್ ಪಂದ್ಯ ಮೂರನೇ ದಿನವೇ ಮುಕ್ತಾಯಗೊಂಡಿದ್ದು ಟೀಮ್ ಇಂಡಿಯಾ ಇನ್ನಿಂಗ್ಸ್ ಸಹಿತ ೨೨೨ ರನ್ ಅಂತರದ ಗೆಲುವನ್ನು ದಾಖಲಿಸಿದೆ.
ದ್ವಿಶತಕದ ಹೊಸ್ತಿಲಲ್ಲಿ ರೋಹಿತ್ ಡಿಕ್ಲೇರ್ ಘೋಷಿಸಲು ಇವರೇ ಕಾರಣ: ಸ್ವತಃ ಸತ್ಯ ಬಾಯ್ಬಿಟ್ಟ ಜಡೇಜಾ!
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸಿನಲ್ಲಿ ೮ ವಿಕೆಟ್ ನಷ್ಟಕ್ಕೆ ೫೭೪ ರನ್ ಗಳಿಸಿದರೆ, ಶ್ರೀಲಂಕಾ ಮೊದಲನೇ ಇನ್ನಿಂಗ್ಸಿನಲ್ಲಿ ೧೭೪ಕ್ಕೆ ಆಲ್ಔಟ್ ಆಯಿತು ಹಾಗೂ ೪೦೦ ರನ್ ಅಂತರದ ಬೃಹತ್ ಅಂತರದ ಹಿನ್ನಡೆಯನ್ನು ಅನುಭವಿಸಿತು. ಈ ಮೂಲಕ ಫಾಲೋಆನ್ ನಿಯಮಕ್ಕೆ ಒಳಗಾದ ಶ್ರೀಲಂಕಾ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿ ೧೭೮ಕ್ಕೆ ಆಲ್ಔಟ್ ಆಗಿ ೨೨೨ ರನ್ ಅಂತರದ ಸೋಲನ್ನು ಅನುಭವಿಸಿತು. ಇನ್ನು ಈ ಪಂದ್ಯದಾದ್ಯಂತ ಟೀಮ್ ಇಂಡಿಯಾದ ರವೀಂದ್ರ ಜಡೇಜಾ ಅಬ್ಬರಿಸಿದರು. ಮೊದಲ ಇನ್ನಿಂಗ್ಸಿನಲ್ಲಿ ೧೭೫ ರನ್ ಕಲೆಹಾಕಿದ ರವೀಂದ್ರ ಜಡೇಜಾ, ಶ್ರೀಲಂಕಾದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ೫ ವಿಕೆಟ್ ಪಡೆದರು ಹಾಗೂ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ೪ ವಿಕೆಟ್ ಪಡೆದರು. ಹೀಗೆ ಉತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಐಪಿಎಲ್ 2022: 10 ತಂಡ, 2 ಗುಂಪು, 58 ದಿನ, 70 ಪಂದ್ಯಗಳು; ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ ಪ್ರಕಟ
ಒಂದೆಡೆ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿದರೆ ಮತ್ತೊಂದೆಡೆ ರವಿಚಂದ್ರನ್ ಅಶ್ವಿನ್ ಕೂಡ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ ದೊಡ್ಡ ದಾಖಲೆಯೊಂದರಲ್ಲಿ ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ವಿಶೇಷ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಹೌದು, ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಯಲ್ಲಿ ಕಪಿಲ್ ದೇವ್ ಅವರನ್ನು ಹಿಂದಿಕ್ಕಿರುವ ರವಿಚಂದ್ರನ್ ಅಶ್ವಿನ್ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾ ವಿರುದ್ಧದ ಈ ಟೆಸ್ಟ್ ಪಂದ್ಯದ ನಂತರ ರವಿಚಂದ್ರನ್ ಅಶ್ವಿನ್ ೪೩೬ ಟೆಸ್ಟ್ ವಿಕೆಟ್ ಹೊಂದಿದ್ದರೆ, ಕಪಿಲ್ ದೇವ್ ೪೩೪ ವಿಕೆಟ್ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೂ ೬೧೯ ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
Those days of practice and debates at the TNCA academy will stay with me forever. Thank you @wvraman 🙏 https://t.co/h3UoED9xrq
— Ashwin 🇮🇳 (@ashwinravi99) March 6, 2022
ಹೀಗೆ ವಿಶೇಷ ದಾಖಲೆಯಲ್ಲಿ ಕಪಿಲ್ ದೇವ್ ಅವರನ್ನು ಹಿಂದಿಕ್ಕಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ಹಲವಾರು ಕ್ರಿಕೆಟಿಗರು ಹಾಗೂ ಹಿರಿಯ ಕ್ರಿಕೆಟಿಗರು ಶುಭಾಶಯಗಳನ್ನು ಕೋರಿದ್ದು, ಈ ಶುಭಾಶಯಗಳಿಗೆ ಟ್ವಿಟರ್ ಮೂಲಕ ಸ್ಪಂದಿಸಿರುವ ರವಿಚಂದ್ರನ್ ಅಶ್ವಿನ್ ತಮಿಳು ನಾಡು ಕ್ರಿಕೆಟ್ ಅಕಾಡೆಮಿಯಲ್ಲಿನ ತನ್ನ ಹಳೆಯ ದಿನಗಳನ್ನು ನೆನೆದಿದ್ದಾರೆ. ತಮಿಳುನಾಡು ಕ್ರಿಕೆಟ್ ಅಕಾಡೆಮಿಯಲ್ಲಿನ ಆ ದಿನಗಳು ಮತ್ತು ಚರ್ಚೆಗಳು ತನ್ನ ಮನಸ್ಸಿನಲ್ಲಿ ಎಂದಿಗೂ ಶಾಶ್ವತವಾಗಿ ನೆಲೆಸಿರಲಿದೆ ಎಂದು ಬರೆದುಕೊಂಡಿರುವ ರವಿಚಂದ್ರನ್ ಅಶ್ವಿನ್ ಕೋಚ್ ವೂರ್ಕೆರಿ ವೆಂಕಟ ರಾಮನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Thank you so much Paijee. A text message from you made my day even sweeter🤩 https://t.co/fXuueGBICH
— Ashwin 🇮🇳 (@ashwinravi99) March 6, 2022
ಇದೇ ವಿಷಯಕ್ಕಾಗಿ ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರೂ ಕೂಡ ರವಿಚಂದ್ರನ್ ಅಶ್ವಿನ್ ಅವರಿಗೆ ಶುಭಾಶಯವನ್ನು ಕೋರಿದ್ದು ಕಪಿಲ್ ದೇವ್ ಅವರನ್ನು ಈ ದಾಖಲೆಯಲ್ಲಿ ಹಿಂದಿಕ್ಕಿರುವುದು ಒಂದು ಅದ್ಭುತವಾದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಸಚಿನ್ ಅವರ ಈ ಶುಭಾಶಯಕ್ಕೆ ಪ್ರತಿಕ್ರಿಯಿಸಿರುವ ರವಿಚಂದ್ರನ್ ಅಶ್ವಿನ್ ನಿಮ್ಮಿಂದ ಈ ಸಂದೇಶ ಬಂದದ್ದು ಈ ದಿನವನ್ನು ಮತ್ತಷ್ಟು ಸಿಹಿಯನ್ನಾಗಿಸಿದೆ ಎಂದು ಬರೆದುಕೊಂಡಿದ್ದಾರೆ.