ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ಸೋಲು ಗೆಲುವಿನ ರುಚಿ ಕಂಡಿದೆ. ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆರಂಭಿಕನಾಗಿ ರೋಹಿತ್ ಶರ್ಮಾ ಜೊತೆಗೆ ಸೂರ್ಯಕುಮಾರ್ ಯಾದವ್ ಕಣಕ್ಕಿಳಿದಿರುವ ಬಗ್ಗೆ ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಉತ್ತಮ ಫಾರ್ಮ್ನಲ್ಲಿದ್ದ ಸೂರ್ಯಕುಮಾರ್ ಯಾದವ್ ಆರಂಭಿಕನಾಗಿ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇದು ಆಟಗಾರನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಇದೀಗ ಆಕಾಶ್ ಚೋಪ್ರ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಿಮ್ಮಲ್ಲಿ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಅವರಂತಾ ಆರಂಭಿಕ ಆಟಗಾರರು ಇರುವಾಗ ಸೂರ್ಯಕುಮಾರ್ ಯಾದವ್ ಅವರ ಆತ್ಮವಿಶ್ವಾಸದ ಜೊತೆಗೆ ಯಾಗೆ ಆಟವಾಡುತ್ತಿದ್ದೀರಿ. ಅವರು ಈಗ ಜೀಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾಗಿಯಾಗುವುದಿಲ್ಲ. ಏಷ್ಯಾ ಕಪ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.
ಭಾರತ vs ವಿಂಡೀಸ್: 2ನೇ ಟಿ20 ಪಂದ್ಯ ಗೆದ್ದ ವಿಂಡೀಸ್: ರೋಚಕ ಸೆಣೆಸಾಟದಲ್ಲಿ ಎಡವಿದ ಭಾರತ
ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ ಮ್ಯಾನೇಜ್ಮೆಂಟ್ನ ಗೊಂದಲಕಾರಿ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. "ಈಗ ರಿಷಬ್ ಪಂತ್ ಆರಂಭಿಕ ಆಟಗಾರನಾ ಅಥವಾ ಮಧ್ಯಮಕ್ರಮಾಂಕದ ಆಟಗಾರನಾ ಎಂಬುದು ಸ್ಪಷ್ಟವಿಲ್ಲ. ಈ ಮಧ್ಯೆ ಮಧ್ಯಮಕ್ರಮಾಂಕದಲ್ಲಿ ಆಡುತ್ತಿದ್ದ ಸೂರ್ಯಕುಮಾರ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲಾಗಿದೆ" ಎಂದು ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ರೀತಿಯ ಅಭಿಪ್ರಾಯವನ್ನು ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಕೂಡ ವ್ಯಕ್ತಪಡಿಸಿದ್ದರು. ಭಾರತ ತಂಡದ ಆರಂಭಿಕನಾಗ ಸೂರ್ಯಕುಮಾರ್ ಯಾದವ್ ಅವರನ್ನು ಯಾವ ಕಾರಣಕ್ಕಾಗಿ ಕಣಕ್ಕಿಳಿಸಲಾಗಿದೆ ಎಂಬುದು ಗೊಂದಲಕಾರಿಯಾಗಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದ ಆಟಗಾರನನ್ನು ಆರಂಭಿಕನಾಗಿ ಕಣಕ್ಕಿಳಿಸುವ ಅಗತ್ಯವೇನಿತ್ತು ಎಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ. "ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಅದ್ಭುತ ಆಟಗಾರ. ಟಿ20 ವಿಶ್ವಕಪ್ನಲ್ಲಿ ಅವರು ನಾಲ್ಕನೇ ಕ್ರಮಾಂಕದಲ್ಲಿಯೇ ಕಣಕ್ಕಿಳಿಯಬೇಕು. ಅವರನ್ನು ಆರಂಭಿಕನಾಗಿ ಯಾಕೆ ಕಣಕ್ಕಿಳಿಸುತ್ತಿದ್ದೀರಿ? ಆರಂಭಿಕನಾಗಿ ಯಾರಾದರೂ ಬೇಕೆಂದಿದ್ದರೆ ಶ್ರೇಯಸ್ ಐಯ್ಯರ್ ಅವರನ್ನು ಕೈಬಿಡಿ ಇಶಾನ್ ಕಿಶನ್ಗೆ ಅವಕಾಶ ನೀಡಿ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್.
ಮುಂದುವರಿದು ಮಾತನಾಡಿದ ಶ್ರೀಕಾಂತ್ ಸೂರ್ಯಕುಮಾರ್ ಅವರಂತಾ ಆಟಗಾರರ ಭವಿಷ್ಯವನ್ನು ಹಾಳುಮಾಡಬೇಡಿ ಎಂದು ಶ್ರೀಕಾಂತ್ ಎಚ್ಚರಿಸಿದ್ದಾರೆ. "ನಾನು ಹೇಳುತ್ತಿರುವುದು ಸರಳವಾದ ವಿಷಯ. ಸೂರ್ಯಕುಮಾರ್ ರೀತಿಯ ಆಟಗಾರನ ಭವಿಷ್ಯವನ್ನು ಹಾಳು ಮಾಡಬೇಡಿ. ದಯವಿಟ್ಟು ಅದನ್ನು ಮಾಡದಿರಿ. ಒಂದೆರಡು ವೈಫಲ್ಯದ ಬಳಿಕ ಆತ ತನ್ನ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳಬಹುದು. ಕ್ರಿಕೆಟ್ ಎಂಬುದು ಆತ್ಮವಿಶ್ವಾಸದ ಆಟ" ಎಂದು ಮಾಜಿ ಕ್ರಿಕೆಟಿಗ ಶ್ರೀಕಾಂತ್ ಹೇಳೀಕೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ ಎರಡನೇ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದರು. ಸೈಂಟ್ ಕಿಟ್ಸ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 11 ರನ್ಗಳನ್ನಷ್ಟೇ ಗಳಿಸಿ ವಿಕೆಟ್ ಒಪ್ಪಿಸಿದರು.
ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದ ಕಾರಣ ಐದು ಪಂದ್ಯಗಳ ಟಿ20 ಸರಣಿ ಈಗ ಸಮಬಲದಲ್ಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಸರಣಿಯಲ್ಲಿ ಮೇಲುಗೈ ಸಾಧಿಸಲು ಯಶಸ್ವಿಯಾಗಿತ್ತು. ಆದರೆ ಎರಡನೇ ಪಂದ್ಯವನ್ನು ಆತಿಥೇಯ ತಂಡ ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ. ಇಂದು ಐದು ಪಂದ್ಯಗಳ ಸರಣಿಯಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದ್ದು ಮತ್ತೆ ಸರಣಿಯಲ್ಲಿ ಯಾರು ಮು್ನನಡೆ ಕಾಯ್ದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.