ರಿಷಭ್ ಪಂತ್ ಬ್ಯಾಟಿಂಗ್ ಕ್ರಮಾಂಕದ ಕುರಿತು ಕಿಡಿಕಾರಿದ ಕೈಫ್
ಕಳೆದ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ರಿಷಭ್ ಪಂತ್ ಅವರನ್ನು ಆರಂಭಿಕ ಆಟಗಾರನನ್ನಾಗಿ ಕಣಕ್ಕಿಳಿಸಲಾಗಿತ್ತು. ಇನ್ನು ಅನಾರೋಗ್ಯದ ಕಾರಣ ವಿಂಡೀಸ್ ವಿರುದ್ಧದ ಈ ಸರಣಿಗೂ ಕೆಎಲ್ ರಾಹುಲ್ ಅಲಭ್ಯರಾಗುರುವ ಕಾರಣ ರಿಷಭ್ ಪಂತ್ ಆರಂಭಿಕನಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಮಧ್ಯಮ ಕ್ರಮಾಂಕದ ಆಟಗಾರನಾದ ಸೂರ್ಯಕುಮಾರ್ ಯಾದವ್ ಅವರನ್ನು ಆರಂಭಿಕನನ್ನಾಗಿ ಕಣಕ್ಕಿಳಿಸಿದರು. ಈ ಕುರಿತು ಇದೀಗ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರತಿಕ್ರಿಯಿಸಿದ್ದು ಪಂತ್ ಅವರಿಗೆ ಐದಾರು ಪಂದ್ಯಗಳಲ್ಲಾದರೂ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶವನ್ನು ನೀಡಬೇಕಿತ್ತು, ಕೇವಲ ಒಂದೆರಡು ಪಂದ್ಯಗಳಲ್ಲಿ ಅವಕಾಶ ನೀಡಿ ದಿಢೀರ್ ಬದಲಾವಣೆ ಮಾಡುವುದು ಸರಿಯಲ್ಲ, ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಏನು ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಕೈಫ್ ಕಿಡಿಕಾರಿದ್ದಾರೆ.
ಸೂರ್ಯಕುಮಾರ್ ಯಾದವ್ ಆರಂಭಿಕನಾಗುವುದು ಸರಿಯಲ್ಲ
ಇನ್ನೂ ಮುಂದುವರೆದು ಮಾತನಾಡಿರುವ ಮೊಹಮ್ಮದ್ ಕೈಫ್ ಸೂರ್ಯಕುಮಾರ್ ಯಾದವ್ ಏನಿದ್ದರೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಫಿನಿಶಿಂಗ್ ಮಾಡಬೇಕು, ಈಗ ಮಾತ್ರವಲ್ಲ ವಿರಾಟ್ ಕೊಹ್ಲಿ ತಂಡಕ್ಕೆ ಬಂದ ನಂತರವೂ ಕೂಡ ಸೂರ್ಯಕುಮಾರ್ ಯಾದವ್ ಅವರ ಕೆಲಸವೇ ಅದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಂಡದೊಳಗೆ ಏನಾಗುತ್ತಿದೆ?
ಒಂದೆಡೆ ಸೂರ್ಯಕುಮಾರ್ ಯಾದವ್ ಅವರನ್ನು ಆರಂಭಿಕನನ್ನಾಗಿ ಕಣಕ್ಕಿಳಿಸುತ್ತಿದ್ದಾರೆ, ರಿಷಭ್ ಪಂತ್ ಅವರನ್ನು ಕೂಡ ಆರಂಭಿಕನನ್ನಾಗಿ ಕಣಕ್ಕಿಳಿಸಿದ್ದಾರೆ, ಮತ್ತೊಂದೆಡೆ ತಂಡದಲ್ಲಿ ಆರಂಭಿಕ ಇಶಾನ್ ಕಿಶನ್ ಬೆಂಚ್ ಕಾಯುತ್ತಿದ್ದಾರೆ, ಅಸಲಿಗೆ ತಂಡದೊಳಗೆ ಏನು ನಡೆಯುತ್ತಿದೆ, ಅವರ ತಂತ್ರವೇನು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಕೈಫ್ ಕಿಡಿಕಾರಿದ್ದಾರೆ.