ಇನ್ನೂ ಚೇತರಿಕೆ ಬೇಕಿತ್ತು
ಇತ್ತೀಚೆಗಷ್ಟೇ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಸರಣಿಗಳಿಗೂ ಅಲಭ್ಯರಾಗಿದ್ದ ಕೆಎಲ್ ರಾಹುಲ್ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ನಡೆದ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ಭಾಗವಹಿಸಿರಲಿಲ್ಲ. ಐಪಿಎಲ್ ಮುಕ್ತಾಯವಾದ ನಂತರ ಗಾಯದ ಸಮಸ್ಯೆ ಹಾಗೂ ಇತ್ತೀಚಿಗಷ್ಟೆ ಕೊರೋನಾ ಸೋಂಕಿಗೆ ಒಳಗಾಗಿ ಬಳಲಿದ್ದ ಕೆಎಲ್ ರಾಹುಲ್ ಅವರನ್ನು ಮುಂಬರುವ ಏಷ್ಯಾಕಪ್ ಟೂರ್ನಿಯವರೆಗೂ ಚೇತರಿಸಿಕೊಳ್ಳಲು ಬಿಡದೇ ಈ ರೀತಿ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡಿ ನಾಯಕನ ಸ್ಥಾನವನ್ನು ನೀಡಿದ್ದು ತಪ್ಪು ನಿರ್ಣಯ ಎನ್ನಬಹುದು.
ನಾಯಕತ್ವದಿಂದ ಧವನ್ ತೆಗೆದುಹಾಕಿದ್ದು ತಪ್ಪು
ಇನ್ನು ಸರಿಯಾಗಿ ಚೇತರಿಸಿಕೊಳ್ಳದ ಕೆಎಲ್ ರಾಹುಲ್ ಅವರಿಗೆ ನಾಯಕತ್ವ ನೀಡುವ ಭರದಲ್ಲಿ ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅವರ ನೆಲದಲ್ಲಿಯೇ ವೈಟ್ ವಾಷ್ ಸಾಧನೆ ಮಾಡಿದ್ದ ಶಿಖರ್ ಧವನ್ ಅವರನ್ನು ನಾಯಕತ್ವದಿಂದ ತೆಗೆದು ಹಾಕಿದ್ದು ತಪ್ಪು ನಿರ್ಣಯ ಎನ್ನಬಹುದು. ಟೆಸ್ಟ್ ಹಾಗೂ ಟಿ ಟ್ವೆಂಟಿ ಮಾದರಿಗಳಿಂದ ಬಹುತೇಕ ದೂರ ಸರಿದಿರುವ ಶಿಖರ್ ಧವನ್ ಅವರಿಗೆ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಅವಕಾಶ ಲಭಿಸುತ್ತಿದ್ದು, ಈ ವೆಸ್ಟ್ ಇಂಡೀಸ್ ಸರಣಿ ಮಾತ್ರವಲ್ಲದೆ ಈ ಹಿಂದೆ ಕೊರೋನಾ ಸಂದರ್ಭದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗಲೂ ಧವನ್ ನಾಯಕನಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಹೀಗೆ ತಂಡವನ್ನು ನಾಯಕನಾಗಿ ಮುನ್ನಡೆಸಲು ಅರ್ಹನಾಗಿರುವ ಶಿಖರ್ ಧವನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಬಾರದಿತ್ತು.
ಕೆಎಲ್ ರಾಹುಲ್ ಇನ್ನೂ ಸಮರ್ಥ ನಾಯಕನಲ್ಲ
ಇನ್ನು ಕೆಎಲ್ ರಾಹುಲ್ ನಾಯಕನಾಗಿ ಟೀಂ ಇಂಡಿಯಾವನ್ನು 3 ಏಕದಿನ ಪಂದ್ಯಗಳು ಹಾಗೂ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುನ್ನಡೆಸಿದ್ದಾರೆ. ಹೀಗೆ ಕಡಿಮೆ ಪಂದ್ಯಗಳಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರೂ ಸಹ ಈ ಎಲ್ಲಾ ಪಂದ್ಯಗಳಲ್ಲಿಯೂ ತಂಡ ಸೋಲನ್ನು ಅನುಭವಿಸಿದೆ. ಹೀಗಾಗಿ ಕೆಎಲ್ ರಾಹುಲ್ ಅಂತರರಾಷ್ಟ್ರೀಯ ಮಟ್ಟದಲ್ಲಿ ತಂಡವನ್ನು ಮುನ್ನಡೆಸಲು ಇನ್ನೂ ಸಹ ಸಮರ್ಥನಾದ ನಾಯಕನಾಗಿ ರೂಪುಗೊಂಡಿಲ್ಲ ಎಂದು ಹೇಳಬಹುದು. ಈ ಕಾರಣದಿಂದಾಗಿ ಈ ಸರಣಿಯಲ್ಲಿ ಕೆ ಎಲ್ ರಾಹುಲ್ ಉಪನಾಯಕನಾಗಿ ಶಿಖರ್ ಧವನ್ ನಾಯಕನಾಗಿದ್ದರೆ ಉತ್ತಮ ಆಯ್ಕೆಯಾಗುತ್ತಿತ್ತು ಎನ್ನಬಹುದು.