ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲು ಎರಡು ತಂಡಗಳು ಕೂಡ ಸಂಪೂರ್ಣವಾಗಿ ಸಿದ್ಧವಾಗಿದೆ. ಕೆಎಲ್ ರಾಹುಲ್ ನೇತೃತ್ವದಲ್ಲಿ ಭಾರತ ತಂಡ ಈ ಸರಣಿಯನ್ನು ಆಡುತ್ತಿದ್ದು ಜಿಂಬಾಬ್ವೆ ನೆಲದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಸರಣಿಯ ಮೂಲಕ ಗಾಯದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಕಮ್ಬ್ಯಾಕ್ ಮಾಡುತ್ತಿದ್ದು ನಾಯಕನಾಗಿ ತಂಡವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನೂ ಹೊತ್ತಿದ್ದಾರೆ.
ಪಂದ್ಯದ ಮುನ್ನಾದಿನ ಮಾಧ್ಯಮಗಳೊಂದಿಗೆ ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದು ಈ ಸಂದರ್ಭದಲ್ಲಿ ತಮ್ಮ ನಾಯಕತ್ವದ ವಿಚಾರವಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನಾಯಕತ್ವದಲ್ಲಿ ತಾನಿನ್ನೂ ಸಾಕಷ್ಟು ದೂರ ಸಾಗಬೆಕಿದ್ದು ಹೆಚ್ಚಿನ ಅನುಭವ ಪಡೆದುಕೊಳ್ಳಬೇಕಿದೆ. ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಅವರಂತವರೊಂದಿಗೆ ಹೋಲಿಕೆ ಮಾಡಿಕೊಳ್ಳಲು ಬಯಸುವುದಿಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ.
PAK vs NED: ನೆದರ್ಲೆಂಡ್ಸ್ ವಿರುದ್ಧ ವಿಶ್ವದಾಖಲೆ ಮಾಡಿದ ಬಾಬರ್ ಅಜಮ್
ಭವಿಷ್ಯದ ನಾಯಕನಾಗುವ ಸ್ಪರ್ಧೆಯಲ್ಲಿ ರಾಹುಲ್: ಕೆಎಲ್ ರಾಹುಲ್ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎನಿಸಿಕೊಂಡಿರುವ ಕ್ರಿಕೆಟಿಗ. ಜಿಂಬಾಬ್ವೆ ವಿರುದ್ಧದ ಸರಣಿಯ್ಲಲಿ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿರುವ ಅವರಿಗೆ ಈ ಸರಣಿಯ ಮೂಲಕ ಎರಡನೇ ಬಾರಿಗೆ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಂತಾಗಿದೆ. ಇದಕ್ಕೂ ಮುನ್ನ ಈ ವರ್ಷಾರಂಭದಲ್ಲಿ ದಕ್ಷಿಣ ಆಪ್ರಿಕಾ ಪ್ರವಾಸ ಕೈಗೊಂಡಿದ್ದಾಗ ಟೆಸ್ಟ್ ಸರಣಿಯ ಒಂದು ಪಂದ್ಯದಲ್ಲಿ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರೆ ಏಕದಿನ ಸರಣಿಯಲ್ಲಿ ಸಂಪೂರ್ಣವಾಗಿ ನಾಯಕತ್ವ ವಹಿಸಿಕೊಂಡಿದ್ದರು. ರೋಹಿತ್ ಶರ್ಮಾ ಗಾಯದ ಕಾರಣ ಈ ಸರಣಿಯಿಂದ ಹೊರಗುಳಿದ ಪರಿಣಾಮವಾಗಿ ರಾಹುಲ್ಗೆ ಈ ಅವಕಾಶ ಕೂಡಿ ಬಂದಿತ್ತು.
ನಾಯಕನಾಗಿ ರಾಹುಲ್ ಸಾಧನೆ ನೀರಸ: ಆದರೆ ನಾಯಕನಾಗಿ ಕೆಎಲ್ ರಾಹುಲ್ ಅವರ ಸಾಧನೆ ಈ ಅಲ್ಪಾವಧಿಯಲ್ಲಿ ನೀರಸವಾಗಿದೆ ಎಂಬುದು ನಿಜ. ನಾಯಕನಾಗಿ ಮುನ್ನಡೆಸಿರುವ ನಾಲ್ಕು ಪಂದ್ಯದಲ್ಲಿಯೂ ರಾಹುಲ್ ಸೋಲು ಅನುಭವಿಸಿದ್ದಾರೆ. ಇದರಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ಸೇರಿದೆ. ಇನ್ನು ಐಪಿಎಲ್ನಲ್ಲಿ ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿ ನಿರಾಸೆ ಅನುಭವಿಸಿದ್ದರು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿ ಪ್ಲೇಆಫ್ ಹಂತದವರೆಗೆ ತಂಡವನ್ನು ಕೊಂಡೊಯ್ದಿದ್ದರು.
ಧೋನಿ, ರೋಹಿತ್ ಜೊತೆ ಹೋಲಿಸಿಕೊಳ್ಳಲಾರೆ: ಈ ಸಂದರ್ಭದಲ್ಲಿ ತಾಳ್ಮೆಯಿಂದ ತಂಡವನ್ನು ಮುನ್ನಡೆಸುವ ಕಾರಣಕ್ಕೆ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಜೊತೆಗೆ ಹೋಲಿಸಿ ಪ್ರಶ್ನೆಗಳು ರಾಹುಲ್ಗೆ ಬಂದವು. ಆದರೆ ಈ ಸಂದರ್ಭದಲ್ಲಿ ರಾಹುಲ್ "ತಾನು ಯಾರೊಂದಿಗೂ ವೈಯಕ್ತಿಕವಾಗಿ ಹೋಲಿಸಿಕೊಳ್ಳಲು ಬಯಸುವುದಿಲ್ಲ. ಆ ಇಬ್ಬರು ಮಾಡಿರುವ ಸಾಧನೆಯ ಕಾರಣದಿಂದಾಗಿ ನಾನು ಅವರೊಂದಿಗೆ ನನ್ನನ್ನು ಯಾವಾಗಲೂ ಹೋಲಿಸಿಕೊಳ್ಳುವುದಿಲ್ಲ. ಅವರ ಸಾಧನೆ ಬಹಳಷ್ಟು ಶ್ರೇಷ್ಠವಾಗಿದೆ. ಅವರ ಸಾಲಿಗೆ ಬೇರೆ ಯಾರೂ ಕೂಡ ಸೇರಲಾರರು ಎಂಬುದು ನನ್ನ ಭಾವನೆ" ಎಂದಿದ್ದಾರೆ ಕೆಎಲ್ ರಾಹುಲ್.
ನಾಯಕನಾಗಿ ನಾನಿನ್ನೂ ಕಿರಿಯ: ಮುಂದುವರಿದು ಮಾತನಾಡಿದ ಕೆಎಲ್ ರಾಹುಲ್ "ನನ್ನ ಪ್ರಕಾರ ನಾನಿನ್ನು ಕೂಡ ನಾಯಕನಾಗಿ ಕಿರಿಯವನು. ನಾಯಕನಾಗಿ ಇದು ನನ್ನ ಎರಡನೇ ಸರಣಿಯಾಗಿದೆ. ಧೋನಿ ಹಾಗೂ ರೋಹಿತ್ ನಾಯಕತ್ವದಲ್ಲಿ ನಾನು ಆಡಿದ ಅನುಭವ ಹೊಂದಿದ್ದೇನೆ. ಹೀಗಾಗಿ ಖಂಡಿತವಾಗಿಯೂ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಆಟಗಾರನಾಗಿ ತಂಡದ ಪ್ರತಿಯೊಬ್ಬರಿಂದಲೂ ಸಾಕಷ್ಟು ಕಲಿಯುವುದಿದೆ" ಎಂದಿದ್ದಾರೆ ಕೆಎಲ್ ರಾಹುಲ್.
ಅದೊಂದು ತಂಡ ಮಾತ್ರ ಆಸ್ಟ್ರೇಲಿಯಾಕ್ಕಿರುವ ಅಂತಿಮ ಸವಾಲು: ಗ್ಲೆನ್ ಮೆಗ್ರಾಥ್
ಈ ಬಾರಿಯ ಐಪಿಎಲ್ ಟೂರ್ನಿಯ ಬಳಿಕ ಗಾಯಗೊಂಡಿರುವ ಕೆಎಲ್ ರಾಹುಲ್ ಸುದೀರ್ಘ ವಿಶ್ರಾಂತಿಯ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. ಸ್ಪೋರ್ಟ್ಸ್ ಹರ್ನಿಯಾ ಕಾರಣಕ್ಕೆ ರಾಹುಲ್ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಇದೀಗ ಸಂಪೂರ್ಣ ಚೇತರಿಕೆ ಕಂಡಿದ್ದು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್ಗೂ ರಾಹುಲ್ ಆಯ್ಕೆಯಾಗಿದ್ದು ಉಪನಾಯಕನ ಜವಾಬ್ಧಾರಿ ದೊರೆತಿದೆ.