ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ಐದು ದಿನಗಳು ಮಾತ್ರ. ಮುಂದಿನ ಮಂಗಳವಾರದಿಂದ ಆರು ಪಂದ್ಯಗಳ ಸೀಮಿತ ಓವರ್ಗಳ ಸರಣಿಗೆ ಚಾಲನೆ ದೊರೆಯಲಿದ್ದು ಮೊದಲಿಗೆ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗೂ ಮುನ್ನ ಭಾರತ ಕ್ರಿಕೆಟ್ ತಂಡ ಎರಡು ಅಭ್ಯಾಸ ಪಂದ್ಯದಲ್ಲಿ ಆಡಿದೆ. ಮೊದಲ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ತಂಡವನ್ನು ಭುವನೇಶ್ವರ್ ಕುಮಾರ್ ನೇತೃತ್ವದ ತಂಡ ಮಣಿಸಿತ್ತು. ಎರಡನೇ ತಂಡದಲ್ಲಿಯೂ ಶಿಖರ್ ಧವನ್ ನೇತೃತ್ವದ ತಂಡಕ್ಕೆ ಸೋಲಾಗಿದೆ.
ಈ ಅಭ್ಯಾಸ ಪಂದ್ಯದ ಸಣ್ಣ ವಿಡಿಯೋ ತುಣುಕನ್ನು ಶ್ರೀಲಂಕಾ ಕ್ರಿಕೆಟ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ತಂಡ ಭಾರತದ ಎಂದಿನ ಕಡು ನೀಲಿ ಬಣ್ಣದ ಜರ್ಸಿಯನ್ನು ತೊಟ್ಟುಕೊಂಡಿದ್ದರೆ ಬೌಲಿಂಗ್ ಮಾಡುತ್ತಿರುವ ತಂಡ ಅಭ್ಯಾಸದಲ್ಲಿ ಬಳಸುವ ಜರ್ಸಿಯನ್ನು ಧರಿಸಿ ಆಡಿದೆ.
ಒಲಿಂಪಿಕ್ಸ್ ಹತ್ತಿರದಲ್ಲಿರುವಾಗಲೇ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಭುವನೇಶ್ವರ್ ಕುಮಾರ್ ನೇತೃತ್ವದ ತಂಡದ ಪರವಾಗಿ ರತುರಾಜ್ ಗಾಯಕ್ವಾಡ್ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಆಟವನ್ನು ಪ್ರದರ್ಶಿಸಿದರು. ಋತುರಾಜ್ ಗಾಯಕ್ವಾಡ್ 75 ರನ್ಗಳನ್ನು ಬಾರಿಸಿದರೆ ಹಾರ್ದಿಕ್ ಪಾಂಡ್ಯಾ 79 ರನ್ಗಳನ್ನು ಚಚ್ಚಿದ್ದಾರೆ.
ಇನ್ನು ಇದಕ್ಕೆ ಪ್ರತಿಯಾಗಿ ಶಿಖರ್ ಧವನ್ ನೇತೃತ್ವದ ತಂಡದ ಪರವಾಗಿ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಅವರು 84 ರನ್ಗಳಿಸಿದರು. ಧವನ್ ತಮಡದಲ್ಲಿದ್ದ ಮನೀಶ್ ಪಾಂಡೆ ಕೂಡ 53 ರನ್ಗಳ ಕೊಡುಗೆಯನ್ನು ನೀಡಿದ್ದಾರೆ. ಆದರೆ ಈ ಇಬ್ಬರ ಆಟದ ಹೊರತಾಗಿಯೂ ಶಿಖರ್ ಧವನ್ ತಂಡ ಈ ಪಂದ್ಯದಲ್ಲಿ ಸೋಲು ಕಂಡಿದೆ.
ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯ ಎಲ್ಲಾ ಪಂದ್ಯಗಳು ನಡೆಯಲಿದೆ. ಶಿಖರ್ ಧವನ್ ನೇತೃತ್ವದ ಭಾರತ ತಂಡದಲ್ಲಿ ಐದು ಮಂದಿ ಅನ್ಕ್ಯಾಪ್ಡ್ ಆಟಗಾರರು ಇರುವುದು ವಿಶೇಷ. ದೇವದತ್ ಪಡಿಕ್ಕಲ್, ಚೇತನ್ ಸಕಾರಿಯಾ, ನಿತೀಶ್ ರಾಣಾ, ಕೃಷ್ಣಪ್ಪ ಗೌತಮ್ ಹಾಗೂ ಋತುರಾಜ್ ಗಾಯಕ್ವಾಡ್ ಇದೇ ಮೊದಲ ಬಾರಿಗೆ ಭಾರತೀಯ ತಂಡದ ಕರೆಯನ್ನು ಸ್ವೀಕರಿಸಿದ್ದಾರೆ.