ಪೋರ್ಟ್ ಎಲಿಜಬೆತ್, ಫೆಬ್ರವರಿ 13: ದಕ್ಷಿಣ ಆಫ್ರಿಕಾ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರರಲ್ಲಿ ಗೆದ್ದಿರುವ ಭಾರತಕ್ಕೆ ಇಂದು ನಡೆಯಲಿರುವ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡು ಇತಿಹಾಸ ನಿರ್ಮಿಸುವ ತವಕ.
ಮೊದಲ ಮೂರು ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದ ವಿರಾಟ್ ಕೊಹ್ಲಿ ಪಡೆ ನಾಲ್ಕನೇ ಪಂದ್ಯದಲ್ಲಿ ಸೋತಿದೆ. ಮಳೆ ಅಡ್ಡಿಪಡಿಸಿದ ಆ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ನೀಡಲಾದ ಪರಿಷ್ಕೃತ ಗುರಿ ದ.ಆಫ್ರಿಕಾ ಪಂದ್ಯ ಗೆಲ್ಲಲು ಕಾರಣವಾಯಿತು ಹೀಗಾಗಿ ಆ ಸೋಲು ಭಾರತ ಆಟಗಾರರ ಹುಮ್ಮಸ್ಸನ್ನೇನು ಕುಂದಿಸಿಲ್ಲ.
ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಕಳಪೆ ಫಾರ್ಮ್ ಹೊರತುಪಡಿಸಿದರೆ ಭಾರತಕ್ಕೆ ಇನ್ನಾವುದೇ ಚಿಂತೆ ಕಾಡುತ್ತಿಲ್ಲ, ಶಿಖರ್ ಧವನ್ ಉತ್ತಮ ಲಯದಲ್ಲಿದ್ದಾರೆ. ವಿರಾಟ್ ಕೊಹ್ಲಿಯಂತೂ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್ನಲ್ಲಿರುವಂತೆ ಗೋಚರಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಈಗಾಗಲೇ ಅರ್ಧ ಶತಕವೊಂದನ್ನು ದಾಖಲಿಸಿ ಮತ್ತೊಂದು ದೊಡ್ಡ ಇನ್ನಿಂಗ್ಸ್ ಆಡಲು ಕಾಯುತಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಧೋನಿ, ಹಾರ್ದಿಕ್ ಪಾಂಡ್ಯಾ, ಕೇದಾರ್ ಜಾದವ್ ಅವಶ್ಯಕತೆಗನುಗುಣವಾಗಿ ಬ್ಯಾಟ್ ಬೀಸಿರುವುದು ನಾಯಕ ಕೊಹ್ಲಿಯ ಚಿಂತೆ ದೂರ ಮಾಡಿದೆ. ಸರಣಿಯಲ್ಲಿ ಬೌಲರ್ಗಳ ಪ್ರದರ್ಶನವಂತೂ ಈ ವರೆಗಿನ ಭಾರತದ ಎಲ್ಲಾ ವಿದೇಶ ಪ್ರವಾಸಗಳಲ್ಲಿ ಅತ್ಯುತ್ತಮ ಎನ್ನುವಂತಿರುವುದು ಭಾರತದ ಸರಣಿ ಗೆಲುವಿನ ಆಸೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಆದರೆ ಈ ಪಂದ್ಯದಲ್ಲಿ ಕೇದಾರ್ ಜಾದವ್ ಗಾಯಾಳುವಾಗಿ ಅಲಭ್ಯವಾಗುವ ಸಂಭವ ಇದ್ದು, ಇದು ಕೊಹ್ಲಿ ಹಣೆಯಲ್ಲಿ ಸಣ್ಣ ಗೆರೆ ಮೂಡಿಸುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲೂ ಅವರು ಆಡುವ 11ರ ಬಳಗದಿಂದ ಹೊರಗಿದ್ದರು.
ಇನ್ನು ದ.ಆಫ್ರಿಕಾಕ್ಕೆ ಎಬಿ ಡಿವಿಲಿಯರ್ಸ್ ಮತ್ತು ಅನುಭವಿ ಬೌಲರ್ ಮಾರ್ನೆ ಮಾರ್ಕಲ್ ಮರಳಿರುವುದು ಅಲ್ಪ ನಿರಾಳ ತಂದಿದೆ. ಕಳೆದ ಪಂದ್ಯದಲ್ಲಿ ವಿಜಯ ಸಾಧಿಸಿರುವುದೂ ಕೂಡ ದ.ಆಫ್ರಿಕಾ ಭರವಸೆಯನ್ನು ಚಿಗುರಿಸಿದೆ.
ಪೋರ್ಟ್ ಬ್ಲೇರ್ ಅಂಗಳ ದ.ಆಫ್ರಿಕಾಕ್ಕೆ ಅದೃಷ್ಟದ ಪಿಚ್ ಆಗಿದ್ದು, ಅಲ್ಲಿ ದ.ಆಫ್ರಿಕಾ ಆಡಿರುವ ಬಹುತೇಕ ಪಂದ್ಯಗಳನ್ನು ಗೆದ್ದಿದೆ. ಆದರೆ ಭಾರತ ಆಡಿದ ಐದೂ ಪಂದ್ಯಗಳಲ್ಲಿ ಸೋತಿದೆ. ಭಾರತ ಇಂದಿನ ಪಂದ್ಯ ಗೆದ್ದಲ್ಲಿ ಇತಿಹಾಸ ನಿರ್ಮಾಣವಾಗುತ್ತದೆ. ಭಾರತವು ದ.ಆಫ್ರಿಕಾ ನೆಲದಲ್ಲಿ ಯಾವುದೇ ಸರಣಿ ಗೆದ್ದಿಲ್ಲ.
ಪಂದ್ಯವು ಭಾರತೀಯ ಕಾಲಮಾನ 4.30ಕ್ಕೆ ಪ್ರಾರಂಭವಾಗುತ್ತದೆ.