ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ಲೆಜೆಂಡ್ಸ್ ತಂಡ ಚಾಂಪಿಯನ್ ಆಗಿ ಮೆರೆದಿದೆ. ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಅದ್ಭುತ ಆಟವನ್ನು ಪ್ರದರ್ಶಿಸಿದ್ದು 14 ರನ್ಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ಲೆಜೆಂಡ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ವೀರೇಂದ್ರ ಸೆಹ್ವಾಗ್ ಅವರನ್ನು ತಂಡ 19 ರನ್ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ಬಳಿಕ ಬಂದ ಬದ್ರೀನಾಥ್ ತಂಡದ ಮೊತ್ತ 35 ಆಗುವಷ್ಟರಲ್ಲಿ ಫೆವಿಲಿಯನ್ ಸೇರಿಕೊಂಡರು.
ಬಳಿಕ ಕ್ರೀಸ್ನಲ್ಲಿದ್ದ ನಾಯಕ ಸಚಿನ್ ತೆಂಡೂಲ್ಕರ್ ಅವರನ್ನು ಯುವರಾಜ್ ಸಿಂಗ್ ಸೇರಿಕೊಂಡರು. ಆದರೆ ತಂಡದ ಮೊತ್ತ 78 ಆಗುವಷ್ಟರಲ್ಲಿ ಭಾರತ ಲೆಜೆಂಡ್ಸ್ ತಂಡಕ್ಕೆ ಮತ್ತೋಂದು ಆಘಾತ ನಾಯಕನ ವಿಕೆಟ್ ಕಳೆದುಕೊಳ್ಳುವ ಮೂಲಕ ಬಂದೆರಗಿತ್ತು. ಸಚಿನ್ ತೆಂಡೂಲ್ಕರ್ 30 ರನ್ಗಳಿಸಿ ಫೆವಿಲಿಯನ್ ಸೇರಿಕೊಂಡರು. ಆದರೆ ಭಾರತದ ಅಸಲಿ ಆಟ ಆ ಬಳಿಕವೇ ಶುರುವಾಗಿತ್ತು.
ಯುವರಾಜ್ ಸಿಂಗ್ ಅವರನ್ನು ಯೂಸುಫ್ ಪಠಾಣ್ ಸೇರಿಕೊಂಡು ಶ್ರೀಲಂಕಾ ಬೌಲರ್ಗಳ ಮೇಲೆ ದಂಡೆತ್ತಿ ಹೋದರು. ಸ್ಪೋಟಕ ಆಟವನ್ನು ಪ್ರದರ್ಶಿಸಿದ ಈ ಇಬ್ಬರು ಆಟಗಾರರು ಬೌಂಡರಿ ಸಿಕ್ಸರ್ ಸಿಡಿಸುತ್ತಾ ಮುನ್ನುಗ್ಗಿದರು. ಇಬ್ಬರೂ ಅರ್ಧ ಶತಕವನ್ನು ದಾಟಿದರು. ಯುವರಾಜ್ ಸಿಂಗ್ 41 ಎಸೆತಗಳಲ್ಲಿ 60 ರನ್ ಬಾರಿಸಿ ಇನ್ನಿಂಗ್ಸ್ ಅಂತ್ಯಕ್ಕೆ 10 ಎಸೆತಗಳು ಬಾಲಿ ಇರುವಾಗ ವಿಕೆಟ್ ಕಳೆದುಕೊಂಡರು. ಯೂಸುಫ್ ಪಠಾಣ್ 36 ಎಸೆತಗಳಲ್ಲಿ 62 ರನ್ ಬಾರಿಸಿ ಮಿಂಚಿದರು. ಅಂತಿಮನವಾಗಿ ಬಂದ ಇರ್ಫಾನ್ ಪಠಾಣ್ 3 ಎಸೆತಗಳಲ್ಲಿ 8 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ 4 ವಿಕೆಟ್ ಕಳೆದುಕೊಂಡು 181 ರನ್ಗಳಿಸಿತು.
ಇನ್ನು ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಲೆಜೆಂಡ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ದಿಲ್ಶನ್ ಹಾಗೂ ಜಯಸೂರ್ಯ ಜೋಡಿ ಮೊದಲ ವಿಕೆಟ್ಗೆ 62 ರನ್ಗಳ ಜೊತೆಯಾಟವನ್ನು ನೀಡಿದರು. ದಿಲ್ಶನ್ 18 ಎಸೆತಗಳಲ್ಲಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಟೀಮ್ ಇಂಡಿಯಾ ಬೌಲರ್ಗಳು ಯಶಸ್ಸು ಗಳಿಸುತ್ತಾ ಸಾಗಿದರು. ಸನತ್ ಜಯಸೂರ್ಯ 43 ರನ್ ಗಳಿಸಿ ಲಂಕಾ ಪರ ಅತಿ ಹೆಚ್ಚು ರನ್ಗಳಿಸಿದ ಆಟಗಾರ ಎನಿಸಿದರು.
ಐದನೇ ವಿಕೆಟ್ಗೆ ಜಯಸಿಂಘೆ ಹಾಗೂ ವೀರರತ್ನೆ ಭಾರತದ ಬೌಲರ್ಗಳ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಾ ಒಂದಷ್ಟು ಕಾಲ ಆತಂಕವನ್ನು ಮೂಡಿಸಿದರು. ಆದರೆ ಗೋನಿ ವೀರರತ್ನೆ ವಿಕೆಟ್ ಪಡೆಯುವ ಮೂಲಕ ಭಾರತ ಲೆಜೆಂಡ್ಸ್ ತಂಡಕ್ಕೆ ನಿರಾಳತೆ ಮೂಡಿಸಿದರು. ನಂತರ ಚಿಂತಕ ಜಯಸಿಂಘೆ ಕೂಡ ಇನ್ನಿಂಗ್ಸ್ನ ಅಂತಿಮ ಎರಡು ಎಸೆತ ಇರುವಾಗ ಫೆವಿಲಿಯನ್ ಸೇರಿದರು. ಅಂತಿಮವಾಗಿ ಶ್ರೀಲಂಕಾ ಲೆಜೆಂಡ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 167/7 ರನ್ಗಳಿಸಿ ಭಾರತದ ಲೆಜೆಂಡ್ಸ್ ತಂಡಕ್ಕೆ ಶರಣಾಯಿತು.