ಕೊಲಂಬೋ, ಸೆ. 02: ಮೂರನೇ ಟೆಸ್ಟ್ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಭಾರತದ ವೇಗಿ ಇಶಾಂತ್ ಶರ್ಮ ಹಾಗೂ ಶ್ರೀಲಂಕಾದ ವಿಕೆಟ್ಕೀಪರ್-ದಾಂಡಿಗ ದಿನೇಶ್ ಚಾಂಡಿಮಾಲ್ಗೆ ತಲಾ ಒಂದು ಪಂದ್ಯದಿಂದ ಅಮಾನತು ಗೊಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆದೇಶಿಸಿದೆ.
ಇಶಾಂತ್ ಹಾಗೂ ದಿನೇಶ್ ಅಲ್ಲದೆ ಮಾತಿನ ಚಕಮಕಿಯಲ್ಲಿ ತೊಡಗಿದ್ದ ಶ್ರೀಲಂಕಾದ ಇಬ್ಬರು ಆಟಗಾರರಾದ ಲಹಿರು ತಿರಿಮನ್ನೆ ಹಾಗೂ ಧಮ್ಮಿಕಾ ಪ್ರಸಾದ್ಗೆ ಪಂದ್ಯ ಶುಲ್ಕದಲ್ಲಿ ಶೇ.50ರಷ್ಟು ದಂಡ ವಿಧಿಸಲಾಗಿದೆ.
ಒಂದು ಪಂದ್ಯದ ಅಮಾನತು ಶಿಕ್ಷೆ ಪಡೆದಿರುವ ಇಶಾಂತ್ ಅವರು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ನ.5 ರಿಂದ ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಚಾಂಡಿಮಾಲ್ ವೆಸ್ಟ್ಇಂಡೀಸ್ನ ವಿರುದ್ಧ ನ.1 ರಂದು ಕೊಲಂಬೊದಲ್ಲಿ ನಡೆಯಲಿರುವ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವಂತಿಲ್ಲ.
ಎರಡನೆ ಟೆಸ್ಟ್ನಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಇಶಾಂತ್ಗೆ ಐಸಿಸಿ ಪಂದ್ಯ ಶುಲ್ಕ ದಲ್ಲಿ ಶೇ.65ರಷ್ಟು ದಂಡ ವಿಧಿಸಿತ್ತು. ಅಂಪೈರ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಲಂಕಾದ ತಿರಿಮನ್ನೆಗೆ ಪಂದ್ಯ ಶುಲ್ಕದಲ್ಲಿ ಶೇ.30ರಷ್ಟು ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ವೇಗಿ ಇಶಾಂತ್ ಶರ್ಮ ಅವರ ಕರಾರು ವಾಕ್ ದಾಳಿಯ ನೆರವಿನಲ್ಲಿ ಭಾರತ ಮೂರನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ 117 ರನ್ಗಳ ಭರ್ಜರಿ ಜಯ ಗಳಿಸಿದ್ದಲ್ಲದೆ ಸರಣಿಯಲ್ಲಿ ಗೆದ್ದುಕೊಂಡಿದೆ.