ಟೆಸ್ಟ್ ಸರಣಿಯಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿದೆ. ಭಾರತದಲ್ಲಿ ಸದಾ ಅಬ್ಬರಿಸುತ್ತಿದ್ದ ಟೀಮ್ ಇಂಡಿಯಾ ಇತ್ತೀಚಿನ ವರ್ಷಗಳಲ್ಲಿ ವಿದೇಶಿ ನೆಲದಲ್ಲಿ ಒಂದರ ಮೇಲೋಂದರಂತೆ ಸರಣಿ ಗೆಲುವು ದಾಖಲಿಸುತ್ತಾ ಸಾಧನೆ ಮಾಡುತ್ತಿದೆ. ಇದೀಗ ದಕ್ಷಿಣ ಆಫ್ರಿಕಾ ನೆಲದಲ್ಲಿಯೂ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.
ಆದರೆ ಟೀಮ್ ಇಂಡಿಯಾ ನೀಡುತ್ತಿರುವ ಈ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣವೂ ಇದೆ. ತಂಡದ ಪ್ರಮುಖ ಅನುಭವಿ ಆಟಗಾರರು ಉತ್ತಮ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಮಧ್ಯೆಯೂ ಭಾರತ ತಂಡ ಇಷ್ಟು ಅದ್ಭುತ ಪ್ರದರ್ಶನ ನೀಡುತ್ತಿರುವುದು ಇರ್ಫಾನ್ ಪಠಾಣ್ ಅಚ್ಚರಿಗೆ ಕಾರಣವಾಗಿದೆ.
ಏಕೆ ಹೀಗಾಯ್ತು? ಗಾಯಾಳುವಾಗಿ ಹೊರನಡೆದ ಟೀಂ ಇಂಡಿಯಾದ ಮತ್ತೋರ್ವ ಆಟಗಾರ!
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ 202 ರನ್ಗಳಿಗೆ ಆಲೌಟ್ ಆದ ಬಳಿಕ ಇರ್ಫಾನ್ ಪಠಾಣ್ ಪ್ರತಿಕ್ರಿಯೆ ನೀಡಿದ್ದಾರೆ. "ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರಹಾನೆ ಉತ್ತಮವಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅವರ ಬ್ಯಾಟಿಂಗ್ನಲ್ಲಿ ಸಾಕಷ್ಟು ಆತ್ಮವಿಶ್ವಾಸದಿಂದಿದ್ದು ಕಾಲ್ಚಲನೆ ಕೂಡ ಸಕಾರಾತ್ಮಕವಾಗಿತ್ತು. ಆದರೆ ಜೋಹಾನ್ಸ್ಬರ್ಗ್ನಲ್ಲಿ ಇಬ್ಬರು ಆಟಗಾರರು ಕೂಡ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ" ಎಂದು ಸ್ಟಾರ್ಸ್ಪೋರ್ಟ್ಸ್ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ.
"ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಇಬ್ಬರು ಕುಡ ಅನುಭವಿ ಆಟಗಾರರು. ಅವರಿಬ್ಬರು ಕೂಡ 60ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ನೀವು ಇಷ್ಟು ಪ್ರಮಾಣದಲ್ಲಿ ಟೆಸ್ಟ್ ಪಂದ್ಯಗಳನ್ನು ಭಾರತ ತಂಡಕ್ಕಾಗಿ ಆಡಿದ್ದೀರಿ ಎಂಬುದಾದರೆ ನಿಮ್ಮ ಬ್ಯಾಟಿಂಗ್ ಸರಾಸರಿ 40ಕ್ಕಿಂತ ಹೆಚ್ಚಿರಬೇಕು. ಆದರೆ ಈ ಇಬ್ಬರು ಆಟಗಾರರ ಕಳೆದ ಮೂರು ವರ್ಷಗಳ ಸರಾಸರಿಯನ್ನು ನೋಡಿದರೆ ಅದು 30ಕ್ಕಿಂತಲೂ ಕೆಳಗಿದೆ. ಇದು ಭಾರೀ ನಿರಾಸೆಗೊಳಿಸುತ್ತದೆ" ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಇನ್ನು ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಹೊರತುಪಡಿಸಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಕೂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಶತಕವನ್ನು ಸಿಡಿಸಿ ಈಗಾಗಲೇ ಎರಡು ವರ್ಷಗಳು ಕಳೆದುಹೋಗಿದೆ.
ಈ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಟೀಮ್ ಇಂಡಿಯಾದ ಪ್ರಮುಖ ಮೂವರು ಆಟಗಾರರು ಉತ್ತಮ ರನ್ಗಳಿಸಲು ವಿಫಲವಾಗುತ್ತಿದ್ದರೂ ಭಾರತ ತಂಡ ಸ್ಥಿರವಾದ ಪ್ರದರ್ಶನ ನೀಡುವುದನ್ನು ನೋಡಲು ಬಹಳ ವಿಶೇಷವೆನಿಸುತ್ತದೆ ಎಂದಿದ್ದಾರೆ. ಅಲ್ಲದೆ ರಹಾನೆ ಹಾಗೂ ಪೂಜಾರಾಗೆ ಎಚ್ಚರಿಕೆ ನೀಡಿರುವ ಪಠಾಣ್ ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಅವರು ಸ್ಥಾನವನ್ನು ತುಂಬಬಹುದು ಎಂದಿದ್ದಾರೆ.
ಕುಂತಲ್ಲಿ ಕೂರಂಗಿಲ್ಲ! ಡ್ರೆಸ್ಸಿಂಗ್ ರೂಂನಲ್ಲಿ ಬುಮ್ರಾ ಬೌಲಿಂಗ್ ಅಣಕಿಸಿದ ಕೊಹ್ಲಿ
"ಈ ಅನುಭವಿ ಆಟಗಾರರು ಉತ್ತಮ ಪ್ರದರ್ಶನವನ್ನು ಸ್ಥಿರವಾಗಿ ನೀಡಲೇ ಬೇಕಾದ ಅನಿವಾರ್ಯತೆಯಿದೆ. ಯಾಕೆಂದರೆ ಸಾಕಷ್ಟು ಪ್ರತಿಭಾವಂತ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ರಹಾನೆ ಹಾಗೂ ಪೂಜಾರ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವುದರಿಂದ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿ ಮಿಂಚಿದ ಆಟಗಾರ ಅವಕಾಶಕ್ಕಾಗು ಕಾಯುತ್ತಿದ್ದಾರೆ" ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಇನ್ನು ಜೊಹನ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ದಿನದಾಟದಲ್ಲಿ 202 ರನ್ಗಳಿಗೆ ಆಲೌಟ್ ಆಗಿದ್ದರೆ ಎರಡನೇ ದಿನ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ 229 ರನ್ಗಳಿಗೆ ಆಲೌಟ್ ಮಾಡಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 27 ರನ್ಗಳ ಮುನ್ನಡೆಯನ್ನು ಸಾಧಿಸಿದೆ.
ಟೀಮ್ ಇಂಡಿಯಾ ಆಡುವ ಬಳಗ ಹೀಗಿದೆ: ಕೆಎಲ್ ರಾಹುಲ್(ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್(ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್ನೆ(ವಿಕೆಟ್ ಕೀಪರ್), ಟೆಂಬಾ ಬವುಮಾ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಲುಂಗಿ ಎನ್ಗಿಡಿ