ವಿಶ್ವಕಪ್ಗೂ ಮುನ್ನ ವಿಂಡೀಸ್ ವಿರುದ್ಧ ಗೆಲುವು
ಇದೇ ವಿಶ್ವಕಪ್ಗೆ ಮುನ್ನ ಭಾರತ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವನ್ನು ಅದರದ್ದೇ ನೆಲದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿಯಾಗಿ ಸೋಲಿಸಿತ್ತು. ಆದರೆ ಆ ಗೆಲುವು ವೆಸ್ಟ್ ಇಂಡೀಸ್ ತಂಡದ ಒಂದು ಕೆಟ್ಟ ದಿನದ ಕಾರಣ ಭಾರತಕ್ಕೆ ದಕ್ಕಿತು ಎಂದು ವಿಮರ್ಶಿಸಲಾಗಿತ್ತು. ಆದರೆ ವಿಶ್ವಕಪ್ನಲ್ಲಿ ಭಾರತ ಫೈನಲ್ ಪಂದ್ಯವೂ ಸೇರಿದಂತೆ ವೆಸ್ಟ್ ಇಂಡೀಸ್ ತಂಡವನ್ನು ಎರಡು ಪಂದ್ಯಗಳಲ್ಲಿ ಸೋಲಿಸಿ ಇದು ತನ್ನ ಸ್ವಂತ ಸಾಮರ್ಥ್ಯದ ಗೆಲುವು ಎಂದು ಸಾರಿ ಹೇಳಿತ್ತು.
ಲೀಗ್ನಲ್ಲಿ ವಿಂಡೀಸ್ ತಂಡಕ್ಕೆ ಮಣ್ಣು ಮುಕ್ಕಿಸಿದ್ದ ಭಾರತ
1983ರ ಪಂದ್ಯದಲ್ಲಿ ಭಾರತ ಮೊದಲಿಗೆ ವೆಸ್ಟ್ ಇಂಡೀಸ್ ತಂಡವನ್ನು ಲೀಗ್ ಹಂತದಲ್ಲಿ ಎದುರಿಸಿತ್ತು. ಈ ಪಂದ್ಯದಲ್ಲಿ ಭಾರತದ ತಂಡ ಯಶ್ಪಾಲ್ ಶರ್ಮಾ ಅವರ 89ರನ್ಗಳ ಅಮೂಲ್ಯ ಕೊಡುಗೆ ಸಂದೀಪ್ ಪಾಟೀಲ್ ಉಪಯುಕ್ತ ಆಟದಿಂದ ನಿಗದಿತ 60 ಓವರ್ಗಳಲ್ಲಿ 262 ರನ್ಗಳ ಸವಾಲನ್ನು ನೀಡಿತ್ತು. ಆದರೆ ಇದನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 228ರನ್ ಗಳಿಸಿ ಭಾರತಕ್ಕೆ ಶರಣಾಗಿತ್ತು. ಈ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಭೀತು ಪಡಿಸಿತ್ತು. ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಕೂಡ ಸುಲಭವಾಗಿ ಸೋಲಿಸಿತ್ತು.
ಸತತ ಗೆಲುವಿನ ಬಳಿಕ ಆಘಾತ
ಮೊದಲೆರಡು ಪಂದ್ಯಗಳಲ್ಲಿ ಗೆಲುವನ್ನು ಕಂಡ ಭಾರತ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಡವಿತ್ತು. ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮತ್ತೊಂದು ಲೀಗ್ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡಕ್ಕೆ ಶರಣಾಗಿತ್ತು. ಈ ಮೂಲಕ ಭಾರತ ಟೂರ್ನಿಯಿಂದ ಹೊರ ಬೀಳುವ ಆತಂಕಕ್ಕೆ ಒಳಗಾಗಿತ್ತು. ಭಾರತ ಮುಂದಿನ ಹಂತಕ್ಕೇರಬೇಕಾದರೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು.
ಕಪಿಲ್ ದೇವ್ ಐತಿಹಾಸಿಕ 175 ರನ್
ಸೆಮಿ ಫೈನಲ್ ಹಂತಕ್ಕೇರಬೇಕಾದರೆ ಲೀಗ್ ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ತಂಡವನ್ನು ಸೋಲಿಸಲೇಬೇಕಿತ್ತು. ಜಿಂಬಾಬ್ವೆಯನ್ನು ಮೊದಲು ಎದುರಿಸಿದ ಭಾರತ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿತ್ತು. ಕೇವಲ 17 ರನ್ಗೆ ಭಾರತ ತನ್ನ 5 ವಿಕೆಟ್ ಕಳೆದುಕೊಂಡಿತ್ತು. ಭಾರತದ ಎಲ್ಲಾ ಪ್ರಮುಖ ಆಟಗಾರರು ಫೆವಿಲಿಯನ್ ಸೇರಿಕೊಂಡಿದ್ದರು. ಆದರೆ ಆಗ ಭಾರತದ ಆಪತ್ಭಾಂದವನಂತೆ ಯಾರೂ ಊಹಿಸಲು ಸಾಧ್ಯವಾಗದಂತೆ ಮೇಲಕ್ಕೆತ್ತಿದ್ದರು ಕಪಿಲ್ ದೇವ್. 138 ಎಸೆತಗಳಲ್ಲಿ ಕಪಿಲ್ ಅಂದು ಭರ್ಜರಿ 175 ರನ್ ಚಚ್ಚಿದ್ದರು. ಈ ಮೂಲಕ ಭಾರತ 8 ವಿಕೆಟ್ ಕಳೆದುಕೊಂಡು 266 ರನ್ಗಳನ್ನು ಪೇರಿಸಿತ್ತು. ಭಾರತದ ತಂಡದ ನಾಯಕ ಕಪಿಲ್ದೇವ್ ಏಕದಿನ ವೃತ್ತಿ ಬದುಕಿನಲ್ಲಿ ಸಿಡಿಸಿದ ಏಕೈಕ ಶತಕ ಇಂತಾ ಅನಿವಾರ್ಯ ಮತ್ತು ಒತ್ತಡದ ಸಂದರ್ಭದಲ್ಲಿ ಬಂದಿತ್ತು!
ಕಪಿಲ್ ಮ್ಯಾಜಿಕ್ ನಂತರ ಭಾರತವನ್ನು ಹಿಡಿಯುವವರೆ ಇಲ್ಲ!
ಕಪಿಲ್ದೇವ್ ಅಂದು ಸಿಡಿಸಿದ ಶತಕ ಏಕದಿನ ಕ್ರಿಕೆಟ್ ಇತಿಹಾಸ ಕಂಡ ಅದ್ಭುತ ಶತಕಗಳಲ್ಲಿ ಒಂದಾಗಿತ್ತು. ಆ ಪಂದ್ಯದಲ್ಲಿ ಗೆಲುವನ್ನು ಕಂಡ ಬಳಿಕ ಆಸ್ಟ್ರೇಲಿಯಾ ತಂಡಕ್ಕೂ ಸೋಲಿನ ರುಚಿ ತೋರಿಸಿ ಸೆಮಿಫೈನಲ್ ಹಂತಕ್ಕೇರಿತ್ತು. ಮುಂದೆ ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸುಲಭವಾಗಿ ಸೋಲಿಸಿತ್ತು. ಇಂಗ್ಲೆಂಡ್ ನೀಡಿದ್ದ 214 ರನ್ಗಳ ಸವಾಲನ್ನು ಭಾರತ ನಾಲ್ಕು ವಿಲೆಟ್ ಕಳೆದುಕೊಂಡು ಗುರಿ ತಲುಪಿತ್ತು.
ಐತಿಹಾಸಿಕ ಕ್ಷಣಕ್ಕೆ ಲಾರ್ಡ್ಸ್ ಸಾಕ್ಷಿ
1983 ವಿಶ್ವಕಪ್ನಲ್ಲಿ ಭಾರತ ಮೂರನೇ ಬಾರಿಗೆ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲು ಕಣಕ್ಕಿಳಿದಿತ್ತು. ಆದರೆ ಈ ಬಾರಿ ಹಿಂದೆಂದಿಗಿಂತಲೂ ಅತ್ಯಂತ ನಿರ್ಣಾಯಕ ಫೈನಲ್ ಪಂದ್ಯವಾಗಿತ್ತು. ಲಾರ್ಡ್ಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ವಿಂಡೀಸ್ ತಂಡವನ್ನು ಮೊದಲಿಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು ಭಾರತ ತಂಡದ ನಾಯಕ ಕಪಿಲ್ ದೇವ್. ಭಾರತದ ಬೌಲಿಂಗ್ ದಾಳಿಗೆ ಬೆದರಿದ್ದ ವೆಸ್ ಇಂಡೀಸ್ ತಂಡ 7 ಆಟಗಾರರ ಏಕಂಕಿಯ ಕೊಡುಗೆಯೊಂದಿಗೆ ಕೇವಲ 140 ರನ್ಗೆ ಆಟವನ್ನು ಮುಗಿಸಿತ್ತು. ಇದನ್ನು ಸುಲಭವಾಗಿ ಬೆನ್ನತ್ತಿದ ಭಾರತ ಅಫೂತಪೂರ್ವ ವಿಯವನ್ನು ದಾಖಲಿಸಿತ್ತು. ಈ ಮೂಲಕ ಭಾರತೀಯ ಕ್ರಿಕೆಟ್ನಲ್ಲಿ ಹೊಸದೊಂದು ಶಕೆಯನ್ನೇ ಬರೆದಿತ್ತು ಕಪಿಲ್ ದೇವ್ ಮತ್ತು ತಂಡ.