ಜೂನ್ 19ರ ಭಾನುವಾರದಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದ್ವಿಪಕ್ಷೀಯ ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.
ಇದೇ ವೇಳೆ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಯೋಚಿಸುತ್ತಿದೆ. ಜೂನ್ ಅಂತ್ಯದಲ್ಲಿ ಐರ್ಲೆಂಡ್ ವಿರುದ್ಧ ಮತ್ತು ಇಂಗ್ಲೆಂಡ್ ವಿರುದ್ಧ ಮುಂದಿನ ತಿಂಗಳು ಟಿ20 ಸರಣಿ ನಡೆಯಲಿದ್ದು, ಆ ಬಳಿಕ ಟಿ20 ವಿಶ್ವಕಪ್ಗೆ ಅಂತಿಮ ತಂಡದ ಆಯ್ಕೆ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.
ಸದ್ಯ ಉತ್ತಮ ಫಾರ್ಮ್ನಲ್ಲಿರುವ ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ ಮತ್ತು ದಿನೇಶ್ ಕಾರ್ತಿಕ್ ಅವರು ಭಾರತ ತಂಡದ ಅಂತಿಮ 15ರೊಳಗೆ ಸ್ಥಾನ ಪಡೆಯಲು ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಟಿ20 ವಿಶ್ವಕಪ್ ಆಯ್ಕೆ ಇನ್ನೂ ದೂರದಲ್ಲಿದ್ದರೂ, ಪ್ರತಿ ಸ್ಥಾನಕ್ಕೂ ಭಾರತ ತಂಡದಲ್ಲಿ ಪೈಪೋಟಿ ಇದೆ ಮತ್ತು ಸಮಸ್ಯೆಯ ಬಗ್ಗೆ ಕಳವಳವಿದೆ. ಪ್ರಮುಖ ಟೂರ್ನಿಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ, ಭಾರತವು ತಂಡದ ಸಂಯೋಜನೆಯ ಮೇಲೆ ಸ್ಥಿರವಾಗಿಲ್ಲ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳೂ ಸ್ವಲ್ಪ ಚಿಂತಿತರಾಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್ ಆಯ್ಕೆ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಭರವಸೆ ನೀಡಿದರು. ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸದಿಂದ ಭಾರತವು ತಮ್ಮ ಆದ್ಯತೆಯ ಸಂಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಗಂಗೂಲಿ ಹೇಳಿದರು.
"ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್ ಆಯ್ಕೆ ಕುರಿತು ಆಟಗಾರರ ಪ್ರದರ್ಶನ ಮತ್ತು ಫಿಟ್ನೆಸ್ ಪರಿಶೀಲಿಸುತ್ತಿದ್ದಾರೆ. ಬಹುಶಃ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸದಿಂದ ಅವರು ಕೆಲವು ಹಂತದಲ್ಲಿ ಸ್ಥಿರವಾದ ಆಟಗಾರರನ್ನು ಆಡಿಸಲು ಯೋಜಿಸಿದ್ದಾರೆ. ಅಕ್ಟೋಬರ್ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ನಾವು ಆಡುವ ಸಾಧ್ಯತೆಯಿರುವ ಆಟಗಾರರ ಪ್ರದರ್ಶನದೊಂದಿಗೆ ಪ್ರಾರಂಭಿಸಲಿದ್ದೇವೆ," ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದರು.
ಮುಂದಿನ ತಿಂಗಳು ಭಾರತವು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದ್ದು, ಆದರೆ ಅದಕ್ಕೂ ಮುನ್ನ ಭಾರತ ತಂಡ ಇದೇ ಜೂನ್ ಅಂತ್ಯದಲ್ಲಿ ಐರ್ಲೆಂಡ್ ವಿರುದ್ಧ ಇನ್ನೂ ಎರಡು ಪಂದ್ಯಗಳಿಗೆ ಅಣಿಯಾಗಬೇಕಿದೆ.
ಸದ್ಯಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಗಾಯದಿಂದ ದೂರವುಳಿದಿದ್ದಾರೆ. ಭಾರತವು ಐರ್ಲೆಂಡ್ ಸರಣಿಗೆ ಅನೇಕ ಹೊಸ ಮುಖಗಳನ್ನು ಆಯ್ಕೆ ಮಾಡಿದ್ದು, ಅಂತಿಮ ಹನ್ನೊಂದರ ಬಳಗದಲ್ಲಿ ಯಾರಿಗೆ ಆಡುವ ಅವಕಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.