ಇದು ದುರದೃಷ್ಟ ಎಂದಿದ್ಯಾಕೆ ಗೌತಮ್ ಗಂಭೀರ್
ಈ ಬಾರಿಯ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸುವ ಮೂಲಕ ವಿಶ್ವಕಪ್ನಿಂದ ಹೊರಬಿದ್ದಿತ್ತು. ಹೀಗಾಗಿ ರೋಹಿತ್ ಶರ್ಮಾ ನಾಯಕತ್ವ ಬದಲಾವಣೆಯಾಗಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಗಂಭೀರ್ ಮಾತನಾಡುತ್ತಾ ಒಂದೇ ವಿಶ್ವಕಪ್ನಲ್ಲಿ ಸೋಲು ಅನುಭವಿಸಿದ ಬಳಿಕ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದಿದ್ದಾರೆ. ನಾಯಕತ್ವವನ್ನು ಒಂದು ಐಸಿಸಿ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡುವುದು ಸರಿಯಲ್ಲ ಎಂದಿದ್ದಾರೆ ಗೌತಮ್ ಗಂಭೀರ್.
ನಾಯಕತ್ವಕ್ಕೆ ಪೃಥ್ವಿ ಶಾ ಹೆಸರು ಹೇಳಿದ್ಯಾಕೆ ಗಂಭೀರ್
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಭವಿಷ್ಯದ ನಾಯಕನ ಸ್ಥಾನಕ್ಕೆ ಮುಂಬೈ ಮೂಲದ ಆಟಗಾರ ಪೃಥ್ವಿ ಶಾ ಅತ್ಯುತ್ತಮ ಆಯ್ಕೆಯಾಗಬಲ್ಲರು ಎಂದಿದ್ದಾರೆ. ಇದಕ್ಕೆ ಅವರು ಕಾರಣವನ್ನು ಕೂಡ ನೀಡಿದ್ದಾರೆ. ಪೃಥ್ವಿ ಶಾ ಇತ್ತೀಚೆಗೆ ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗುತ್ತಿದ್ದಾರೆ. ಭಾರತದ ದ್ವಿತಿಯ ದರ್ಜೆಯ ಏಕದಿನ ಹಾಗೂ ಟಿ20 ತಂಡದಲ್ಲಿಯೂ ಅವರು ಸ್ಥಾನವನ್ನು ಪಡೆಯಲು ವಿಫಲವಾಗಿದ್ದಾರೆ. ಆದರೆ ಮೈದಾನದಲ್ಲಿ ಬ್ಯಾಟಿಂಗ್ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಅವರ ನಾಯಕತ್ವದಲ್ಲಿನ ಆಕ್ರಮಣಕಾರಿ ಮನೋಭಾವವನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ನಾಯಕನಾಗಬಲ್ಲರು ಎಂದಿದ್ದಾರೆ ಗೌತಮ್ ಗಂಭೀರ್.
ಪೃಥ್ವಿ ಶಾ ಸಾಧನೆ ಹೀಗಿದೆ
ಯುವ ಆಟಗಾರ ಪೃಥ್ವಿ ಶಾ ದೇಶೀಯ ಕ್ರಿಕೆಟ್ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರನಾಗಿದ್ದಾರೆ. 2018ರಲ್ಲಿ ಅಂಡರ್ 19 ವಿಶ್ವಕಪ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ಪೃಥ್ವಿ ಶಾ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2021ರಲ್ಲಿ ವಿಜಯ್ ಹಜಾರೆ ಟ್ರೋಫಿಯನ್ನು ಮುಂಬೈ ತಂಡವನ್ನು ಮುನ್ನಡೆಸಿದ ಶಾ ತಂಡ ಟ್ರೋಫಿ ಎತ್ತಿ ಹಿಡಿಯುವಂತೆ ಮಾಡಿದ್ದರು.
ಇನ್ನು ಪೃಥ್ವಿ ಶಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಮ್ ಇಂಡಿಯಾ ಪರವಾಗಿ 5 ಟೆಸ್ಟ್, 6 ಏಕದಿನ ಹಾಗೂ ಒಂದು ಟಿ20 ಪಂದ್ಯದಲ್ಲಿ ಪ್ರತಿನಿಧಿಸಿದ್ದಾರೆ.
ಫಿಟ್ನೆಸ್ ವಿಚಾರವಾಗಿ ಪೃಥ್ವಿ ಶಾ ಬಗ್ಗೆ ಟೀಕೆ
ಪ್ರತಿಭಾವಂತ ಆಟಗಾರ ಎನಿಸಿಕೊಂಡಿರುವ ಪೃಥ್ವಿ ಶಾ ಅವರ ಫಿಟ್ನೆಸ್ ಸಾಕಷ್ಟು ಚರ್ಚೆಗೆ ಒಳಗಾಗಿದೆ. ದೇಶೀಯ ಹಾಗೂ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡಿದರು ಕೂಡ ಪಿಟ್ನೆಸ್ ವಿಚಾರವಾಗಿ ಸಾಖಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ ಶಾ ಅಲ್ಲಿ ಸ್ಥಾನವನ್ನು ಪಡೆಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬೇಸರವನ್ನು ವ್ಯಕ್ತಪಡಿಸಿ ಪೋಸ್ಟ್ ಮಾಡಿರುವುದನ್ನು ನೆನಪಿಸಿಕೊಳ್ಳಬಹುದು.