ಲಂಡನ್, ಜೂನ್ 11: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಶಿಖರ್ ಧವನ್ ಹೆಬ್ಬೆರಳಿನ ಗಾಯದ ಸಮಸ್ಯೆಗೂ ತುತ್ತಾಗಿದ್ದು, ಅವರ ಸ್ಥಾನದಲ್ಲಿ ರಿಷಭ್ ಪಂತ್ ಅವರನ್ನು ತಂಡಕ್ಕೆ ಕೂಡಲೇ ಕರೆತನ್ನಿ ಎಂದು ಟೀಮ್ ಇಂಡಿಯಾಗೆ ಇಂಗ್ಲೆಂಡ್ನ ಮಾಜಿ ಸ್ಟಾರ್ ಬ್ಯಾಟ್ಸ್ಮನ್ ಕೆವಿನ್ ಪೀಟರ್ಸನ್ ಸಲಹೆ ನೀಡಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
"ಶಿಖರ್ ಧವನ್ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ರಿಷಭ್ ಪಂತ್ ಅವರನ್ನು ಕರೆತನ್ನಿ. ಕೆ.ಎಲ್ ರಾಹುಲ್ ಆರಂಭಿಕರಾಗಿ ಆಡಲಿ, ಪಂತ್ಗೆ ನಾಲ್ಕನೇ ಕ್ರಮಾಂಕ..'' ಎಂದು ಕೆವಿನ್ ಪೀಟರ್ಸನ್ ಟ್ವಿಟರ್ ಮೂಲಕ ತಮ್ಮ ಸಲಹೆ ತಿಳಿಸಿದ್ದಾರೆ.
ಪ್ರಸಕ್ತ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸತತ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಆರಂಭ ಪಡೆದಿರುವ ಸಂದರ್ಭದಲ್ಲಿ ಇನ್ ಫಾರ್ಮ್ ಬ್ಯಾಟ್ಸ್ಮನ್ ಗಾಯಗೊಂಡಿರುವುದು ಬಹುದೊಡ್ಡ ಆಘಾತವನ್ನೇ ತಂದೊಡ್ಡಿದೆ. ಇದೇ ವೇಳೆ ತಂಡದ ಮ್ಯಾನೇಜ್ಮೆಂಟ್ಗೂ ಕೂಡ ಹೊಸ ತಲೆ ನೋವು ಎದುರಾಗಿದೆ.
ಆಸೀಸ್ಗೂ ಗಾಯದ ಬರೆ, ಸ್ಟೊಯ್ನಿಸ್ ಬದಲಿಗೆ ಮತ್ತೊಬ್ಬ ಆಲ್ರೌಂಡರ್ ಎಂಟ್ರಿ
ಒಂದು ವೇಳೆ ಧವನ್ ಅವರನ್ನು ಅನ್ಫಿಟ್ ಎಂದು ಪರಿಗಣಿಸಿ ಅವರನ್ನು ಟೂರ್ನಿಯಿಂದ ಹೊರಗಿಟ್ಟು ಬದಲಿ ಆಟಗಾರನನ್ನು ತಂಡಕ್ಕೆ ಕರೆ ತಂದರೆ, ಟೂರ್ನಿಯ ನೀತಿ ನಿಯಮಗಳ ಅನುಸಾರ ಧವನ್ಗೆ ಮರಳಿ ಟೂರ್ನಿಯಲ್ಲಿ ಆಡುವುದು ಸಾಧ್ಯವಾಗುವುದಿಲ್ಲ.
ವರದಿಗಳ ಪ್ರಕಾರ ಧವನ್ ಅವರ ಹೆಬ್ಬೆರಳಿನ ಎಕ್ಸ್-ರೇ ನೀಡಿರುವ ವಿವರದಲ್ಲಿ ಯಾವುದೇ ರೀತಿಯ ಬಿರುಕು ಕಂಡುಬಂದಿಲ್ಲ. ಆದರೆ, ಸಿ.ಟಿ. ಸ್ಕ್ಯಾನ್ನ ವರದಿಯಲ್ಲಿ ಹೇರ್ ಲೈನ್ ಫ್ರ್ಯಾಕ್ಚರ್ ಆಗಿರುವುದು ತಿಳಿದು ಬಂದಿದೆ. ಹೀಗಾಗಿ ಹೆಚ್ಚುವರಿ ತಪಾಸಣೆ ಸಲುವಾಗಿ ಧವನ್ ಲೀಡ್ಸ್ಗೆ ಪ್ರಯಾಣ ಬೆಳೆಸಿದ್ದಾರೆ. ತಂಡ ಬದಲಿ ಆಟಗಾರನನ್ನು ಬಯಸುವುದಾದರೆ ಮೊದಲಿಗೆ ಧವನ್ ಅವರ ಗಾಯದ ಸಮಸ್ಯೆಯ ತೀವ್ರತೆ ಮತ್ತು ಅವರಿಗೆ ಚೇತರಿಸಿಕೊಳ್ಳಲು ಬೇಕಿರುವ ಸಮಯ ಎಲ್ಲವನ್ನು ಪರಿಗಣಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.
ವಿಶ್ವಕಪ್: ಇಂಡೊ-ಪಾಕ್ ಕದನಕ್ಕೂ ಮುನ್ನ ಭಾರತವನ್ನು ಕೆಣಕಿದ ಪಾಕಿಸ್ತಾನ!
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ ಒಂದಂಕಿಯ ರನ್ಗೆ ಔಟ್ ಆಗಿದ್ದ ಧವನ್, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ ಮನಮೋಹಕ ಶತಕ ಸಿಡಿಸಿದ್ದರು. ಇದು ವಿಶ್ವಕಪ್ ಟೂರ್ನಿಯಲ್ಲಿ ಧವನ್ ದಾಖಲಿಸಿದ ಮೂರನೇ ಶತಕ ಕೂಡ. ಆದರೆ, ಪಂದ್ಯದ ವೇಳೆ ಪ್ಯಾಟ್ ಕಮಿನ್ಸ್ ಅವರ ಬೌನ್ಸರ್ನಲ್ಲಿ ತಮ್ಮ ಹೆಬ್ಬೆರಳಿಗೆ ಪೆಟ್ಟು ತಿಂದಿದ್ದರು. ಹೀಗಾಗಿ ಪಂದ್ಯದಲ್ಲಿ ಧವನ್ ಕ್ಷೇತ್ರ ರಕ್ಷಣೆಗೂ ಇಳಿಯಲಿಲ್ಲ. ಅವರ ಸ್ಥಾನದಲ್ಲಿ ರವೀಂದ್ರ ಜಡೇಜಾ ಕ್ಷೇತ್ರ ರಕ್ಷಣೆಯ ಜವಾಬ್ದಾರಿ ನಿಭಾಯಿಸಿದ್ದರು.
ಟೀಮ್ ಇಂಡಿಯಾಗಾಗಿ ಹಾಟ್ ಪಿಕ್ ಪ್ರಕಟಿಸಿದ ಪೂನಮ್ ಪಾಂಡೆ!
ಭಾರತ ತಂಡ ಜೂನ್ 13ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಮುಂದಿನ ಪಂದ್ಯವನ್ನಾಡಲಿದ್ದು, ಕೆ.ಎಲ್ ರಾಹುಲ್ ಆರಂಭಿಕರಾಗಿ ಆಡುವ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.