ಕೊಲಂಬೋ, ಸೆ. 07: ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಗುಜರಾತ್ ಮೂಲದ ಮೊನಾತ್ ಸೋನಾ ನರೇಂದ್ರ ಎಂಬ 12 ವರ್ಷ ವಯಸ್ಸಿನ ಯುವ ಕ್ರಿಕೆಟರ್ ದುರಂತ ಸಾವನ್ನಪ್ಪಿದ್ದಾನೆ. ಸೆಪ್ಟೆಂಬರ್ 5ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಈ ಕ್ರಿಕೆಟಿಗ ಅಂಡರ್ 17 ತಂಡದಲ್ಲಿದ್ದು, ಟೂರ್ನಮೆಂಟ್ ಗಾಗಿ ತಂಡದ ಜೊತೆ ಶ್ರೀಲಂಕಾದ ಪಮುನುಗಾಮಕ್ಕೆ ತೆರಳಿದ್ದ. ಹೋಟೆಲ್ ನಲ್ಲಿ ತಂಗಿದ್ದ ವೇಳೆ ಮಂಗಳವಾರ ಸಂಜೆ ತಂಡದ ನಾಲ್ವರ ಜೊತೆ ಹೋಟೆಲ್ ಆವರಣದಲ್ಲಿದ್ದ ಸ್ವಿಮ್ಮಿಂಗ್ ಪೂಲ್ ಗೆ ಈಜಾಡಲು ತೆರಳಿದ್ದು, ಈ ವೇಳೆ ದುರಂತ ಸಂಭವಿಸಿದೆ.
ನೀರಿನಲ್ಲಿ ಮುಳುಗಿದ್ದ ಕ್ರಿಕೆಟಿಗನನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಗುಜರಾತ್ ನಲ್ಲಿ, ಮೊನಾತ್ ಸೋನಾ ಅವರ ತಂದೆ ನರೇಂದ್ರ ಸೋನಾ ಅವರು ಪ್ರತಿಕ್ರಿಯೆ ನೀಡಿ, ಸೆಪ್ಟೆಂಬರ್ 5ರಂದು ತಂಡದ ಕೋಚ್, ಶ್ರೀಲಂಕಾದಿಂದ ಕರೆ ಮಾಡಿ ಮಗನ ಸಾವಿನ ಸುದ್ದಿ ಕೊಟ್ಟಿದ್ದಾಗಿ ತಿಳಿಸಿದರು. ನನ್ನ ಮಗ ಒಬ್ಬ ಆಲ್ರೌಂಡರ್ ಆಗಿದ್ದು, ಟೀಂ ಇಂಡಿಯಾದಲ್ಲಿ ಆಡಬೇಕೆಂಬ ಅದಮ್ಯ ಕನಸನ್ನು ಹೊತ್ತಿದ್ದ ಎಂದು ಅವರು ತಿಳಿಸಿದರು.