ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ಧ ಈಗಾಗಲೇ 3 ಪಂದ್ಯಗಳ ಟಿ ಸರಣಿಯನ್ನು ಆಡಿ ಹೀನಾಯವಾಗಿ ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದೆ. ಹೌದು, ಭಾರತ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ ಮೊದಲಿಗೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ವಿರುದ್ಧ 3 ಪಂದ್ಯಗಳ ಟ್ವೆಂಟಿ ಸರಣಿಯನ್ನು ಆಡಿತ್ತು. ಈ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡಕ್ಕೆ ಮಣ್ಣುಮುಕ್ಕಿಸುವುದರ ಮೂಲಕ ವೈಟ್ ವಾಷ್ ಸಾಧನೆ ಮಾಡಿದೆ. ಅತ್ತ ಟಿ ಟ್ವೆಂಟಿ ಸರಣಿಯಲ್ಲಿ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿರುವ ನ್ಯೂಜಿಲೆಂಡ್ ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳುವ ಯೋಜನೆಯಲ್ಲಿತ್ತು.
ರಹಾನೆ, ಪೂಜಾರ ಇಬ್ಬರೂ ಬೇಡ: ಭಾರತ ತಂಡಕ್ಕೆ ಮತ್ತೋರ್ವ ಆಟಗಾರನ ಪದಾರ್ಪಣೆ ಬಯಸಿದ ಮಾಜಿ ಆಟಗಾರ
ಆದರೆ ಇತ್ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶ ಸಿಗದೇ ಡ್ರಾದಲ್ಲಿ ಅಂತ್ಯಗೊಂಡಿತು. ಹೌದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಹಿಡಿತ ಸಾಧಿಸಿದರೂ ಕೂಡ ಅಂತಿಮವಾಗಿ ನ್ಯೂಜಿಲೆಂಡ್ ತಂಡದ ಕೊನೆಯ ವಿಕೆಟ್ ಪಡೆಯಲಾಗದೇ ಟೀಮ್ ಇಂಡಿಯಾ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ನ್ಯೂಜಿಲೆಂಡ್ ತಂಡದ ಪರ ರಚಿನ್ ರವೀಂದ್ರ ಅಂತಿಮ ಹಂತದಲ್ಲಿ ಭಾರತೀಯ ಬೌಲರ್ಗಳು ಎಷ್ಟೇ ಕಠಿಣ ಪ್ರಯತ್ನ ನಡೆಸಿದರೂ ಕೂಡ ವಿಕೆಟ್ ಒಪ್ಪಿಸದೇ ತಂಡವನ್ನು ಸೋಲಿನ ಸುಳಿಯಿಂದ ಪಾರುಮಾಡಿದರು.
ಹೀಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು ಖಾತೆ ತೆರೆಯಲು ವಿಫಲವಾಗಿದ್ದು, ಇದೀಗ ಎರಡೂ ತಂಡಗಳು ಡಿಸೆಂಬರ್ 3ರಿಂದ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದತ್ತ ಚಿತ್ತ ನೆಟ್ಟಿವೆ. ಅದರಲ್ಲಿಯೂ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಮರಳುತ್ತಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ರಹಾನೆ, ಪೂಜಾರ ಉಳಿಸಿ ಮಯಾಂಕ್ ಹೊರಗಿಡಿ ಎಂದು ಸಲಹೆ ನೀಡಿದ ವಿವಿಎಸ್ ಲಕ್ಷ್ಮಣ್!
ಹೌದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕಾನ್ಪುರದಲ್ಲಿ ನಡೆದಿದ್ದ ಪ್ರಥಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ವಿಶ್ರಾಂತಿ ತೆಗೆದುಕೊಂಡಿದ್ದರು. ಹಾಗೂ ಇದೀಗ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾವನ್ನು ಮರಳಿ ಸೇರಿಕೊಳ್ಳಲಿರುವ ವಿರಾಟ್ ಕೊಹ್ಲಿ ನಾಯಕ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಕಳೆದ ವಾರವೇ ಮುಂಬೈ ತಲುಪಿದ್ದ ವಿರಾಟ್ ಕೊಹ್ಲಿ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ಅಭ್ಯಾಸ ನಡೆಸುತ್ತಿದ್ದರು.
ನಂತರ ಕಾನ್ಪುರ ಟೆಸ್ಟ್ ಮುಗಿದ ಬಳಿಕ ಟೀಮ್ ಇಂಡಿಯಾ ವಾಂಖೆಡೆ ಕ್ರೀಡಾಂಗಣವನ್ನು ತಲುಪಿ ಅಭ್ಯಾಸವನ್ನು ಆರಂಭಿಸಿತ್ತು. ಇನ್ನು ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಇರುವಾಗ ಮಳೆಯ ಕಾರಣದಿಂದಾಗಿ ಇತ್ತಂಡಗಳ ಆಟಗಾರರು ಅಭ್ಯಾಸಕ್ಕೆಂದು ಕಣಕ್ಕಿಳಿದಿರಲಿಲ್ಲ. ಆದರೆ ಮಧ್ಯಾಹ್ನದ ನಂತರ ಮಳೆ ಕಡಿಮೆಯಾಗಿ ಪಿಚ್ ಸರಿಹೋದ ನಂತರ ಇತ್ತಂಡಗಳ ಆಟಗಾರರು ಕೆಲಕಾಲ ಅಭ್ಯಾಸ ನಡೆಸಿದರು.
ಇದೇ ವೇಳೆ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ತರಬೇತಿ ನೀಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ವಿರಾಟ್ ಕೊಹ್ಲಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿ ಅವರಿಗೆ ಬೌಲಿಂಗ್ ಹಾಕಿದ್ದಾರೆ. ರಾಹುಲ್ ದ್ರಾವಿಡ್ ಎಸೆತ ಎಸೆತಗಳಿಗೆ ವಿರಾಟ್ ಕೊಹ್ಲಿ ಬ್ಯಾಟ್ ಬೀಸುವ ಮೂಲಕ ಅಭ್ಯಾಸ ನಡೆಸಿದ್ದಾರೆ.
ಹೀಗೆ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಕಾಂಬಿನೇಷನ್ ಅಡಿಯಲ್ಲಿ ಟೀಮ್ ಇಂಡಿಯಾ ಪಂದ್ಯವನ್ನಾಡುತ್ತಿದ್ದು ಉಳಿದ ಆಟಗಾರರು ಕೂಡ ಪಂದ್ಯಕ್ಕಾಗಿ ಕಠಿಣ ಅಭ್ಯಾಸವನ್ನು ನಡೆಸಿದ್ದಾರೆ. ವಿರಾಟ್ ಕೊಹ್ಲಿಗೆ ರಾಹುಲ್ ದ್ರಾವಿಡ್ ಬೌಲಿಂಗ್ ಹಾಕಿ ತರಬೇತಿ ನೀಡುತ್ತಿರುವ ವಿಡಿಯೋವನ್ನು ಇಂಡಿಯನ್ ಕ್ರಿಕೆಟ್ ಟೀಮ್ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು ಸಾಕಷ್ಟು ವೈರಲ್ ಆಗುತ್ತಿದೆ.