ಮೆಲ್ಬರ್ನ್, ಜನವರಿ 18: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಶುಕ್ರವಾರ (ಜನವರಿ 18) ನಡೆದ ಭಾರತ vs ಆಸ್ಟ್ರೇಲಿಯಾ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ಈ ಜಯದೊಂದಿಗೆ ಮೂರು ಪಂದ್ಯಗಳ ಈ ಏಕದಿನ ಸರಣಿ 2-1ರಿಂದ ಭಾರತದ ವಶವಾಗಿದೆ.
ಟೀಮ್ ಇಂಡಿಯಾ ಬೌಲರ್ಗಳ ಮಾರಕ ದಾಳಿ ಮತ್ತು ನಾಯಕ ಕೊಹ್ಲಿ (46 ರನ್), ಎಂಸ್ ಧೋನಿ (87) ಮತ್ತು ಕೇದಾರ್ ಜಾಧವ್ (61) ದಿಟ್ಟ ಬ್ಯಾಟಿಂಗ್ ತಂಡಕ್ಕೆ ಗೆಲುವನ್ನು ತಂದಿತು. ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ 42 ರನ್ನಿಗೆ ಬರೋಬ್ಬರಿ 6 ವಿಕೆಟ್ ಕೆಡವಿದ್ದು ಗೆಲುವಿನಲ್ಲಿ ಪ್ರಮುಖವೆನಿಸಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆಸೀಸ್ ಪೀಟರ್ ಹ್ಯಾಂಡ್ಸ್ಕಾಂಬ್ ಅರ್ಧಶತಕ (58 ರನ್) ನೆರವಿನೊಂದಿಗೆ 48.4 ಓವರ್ಗೆ ಎಲ್ಲಾ ವಿಕೆಟ್ ಕಳೆದು 230 ರನ್ ಪೇರಿಸಿತ್ತು. 231 ರನ್ ಗುರಿ ಬೆನ್ನಟ್ಟಿದ ಭಾರತ 49.2 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 234 ರನ್ ಪೇರಿಸುವುದರೊಂದಿಗೆ ಸಂಭ್ರಮಾಚರಿಸಿತು.
ಫಾರ್ಮ್ಗೆ ಮರಳಿರುವ ಧೋನಿ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಎಂಎಸ್ ಧೋನಿಗೆ ಲಭಿಸಿದೆ. ಎಂಜಿಸಿಯಲ್ಲಿ ಏಕದಿನ ಒಂದೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿರುವ ಯುಜುವೇಂದ್ರ ಚಾಹಲ್ ಪಂದ್ಯಶ್ರೇಷ್ಠರಾಗಿ ಗುರುತಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಟೆಸ್ಟ್ ಸರಣಿಯನ್ನು 2-1ರಿಂದ, ಏಕದಿನ ಸರಣಿಯನ್ನೂ 2-1ರಿಂದ ಜಯಿಸಿದಂತಾಗಿದೆ. ಮೂರು ಪಂದ್ಯಗಳ ಟಿ20 ಸರಣಿಯ ಒಂದು ಪಂದ್ಯ ಫಲಿತಾಂಶವಿಲ್ಲ ಎಂದು ಘೋಷಿಸಲ್ಪಟ್ಟರೆ ಉಳಿದೆರಡು ಪಂದ್ಯಗಳಲ್ಲಿ ಎರಡೂ ತಂಡಗಳು ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿದ್ದವು.
ಆಸೀಸ್ ತಂಡ: ಅಲೆಕ್ಸ್ ಕ್ಯಾರಿ (ವಿಕೆ), ಆರನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಜೀಯೆ ರಿಚರ್ಡ್ಸನ್, ಬಿಲ್ಲಿ ಸ್ಟ್ಯಾನ್ಲೇಕ್, ಪೀಟರ್ ಸಿಡ್ಲ್, ಆಡಮ್ ಜಂಪಾ.
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಎಂಎಸ್ ಧೋನಿ (ವಿ.ಕೆ), ಕೇದಾರ ಜಾಧವ್, ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್.