ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದ ಬಳಿಕ ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ರವಿ ಶಾಸ್ತ್ರಿ ಸರಣಿ ಗೆಲುವಿನ ಬಳಿಕ ತಾವು ಭಾವುಕರಾದ ಬಗ್ಗೆ ಹೇಳಿಕೊಂಡಿದ್ದಾರೆ.
"ನಾನು ಭಾವುಕನಾಗಿದ್ದೇನೆ. ನಾನು ಸಾಮಾನ್ಯವಾಗಿ ಕಣ್ಣೀರು ಹಾಕುವಂತಾ ವ್ಯಕ್ತಿಯಲ್ಲ ಆದರೆ ನಾನೀಗ ಭಾವುಕಗೊಂಡಿದ್ದೇನೆ" ಎಂದು ಟೀಮ್ ಇಂಡಿಯಾದ ಕೋಚ್ ರವಿ ಶಾಸತ್ರಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ತಮ್ಮ ತಂಡದ ಹುಡುಗರ ಸಾಧನೆಯ ಬಗ್ಗೆ ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.
ಭಾರತ vs ಆಸ್ಟ್ರೇಲಿಯಾ: ಗೆದ್ದಿದ್ದು ಭಾರತ, ಸದ್ದು ಮಾಡಿದ್ದು ಆರ್ಸಿಬಿ!
"ನನ್ನ ಕಣ್ಣಲ್ಲಿ ನೀರು ಹರಿಯಿತು ಯಾಕೆಂದರೆ ಇದು ನಂಬಲು ಕಷ್ಟಕರವಾದ ಸಂಗತಿ. ಇತಿಹಾಸವನ್ನು ಕೆಳಗೆ ಹಾಕಿ ಈ ಹುಡುಗರು ಸಾಧಿಸಿದ್ದು ಸರ್ವಶೇಷ್ಠವಾದ ಸರಣಿ ಗೆಲುವಾಗಿದೆ. ಕೋವಿಡ್ ಪರಿಸ್ಥಿತಿ ಹಾಗೂ ಗಾಯಗಳ ಸಮಸ್ಯೆಯಿಂದ ಬಳಲುತ್ತಿದ್ದರೂ ಹೋರಾಡಿ ಗೆದ್ದ ರೀತಿ ಅದರಲ್ಲೂ ಕೂಡ 36 ರನ್ಗಳಿಗೆ ಆಲೌಟ್ ಆದ ಬಳಿಕ ನೀಡಿದ ಪ್ರದರ್ಶನ ಯೋಚಿಸಲು ಕೂಡ ಅಸಾಧ್ಯವಾಗುವಂತದ್ದು" ಎಂದು ರವಿಶಾಸ್ತ್ರಿ ಟೀಮ್ ಇಂಡಿಯಾ ಆಟಗಾರರ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯನ್ನು ರವಿ ಶಾಸ್ತ್ರಿ ಹಿಂದಿನ ಎಲ್ಲಾ ಪ್ರವಾಸಗಳಿಗಿಂತಲೂ ಅತ್ಯಂತ ಕಠಿಣವಾದ ಸರಣಿಯಾಗಿತ್ತು ಎಂದಿದ್ದಾರೆ. "ಈ ಪ್ರವಾಸ ಹಿಂದಿನ ಎಲ್ಲಾ ಪ್ರವಾಸಗಳಿಗಿಂತಲೂ ಕಠಿಣವಾದ ಪ್ರವಾಸವಾಗಿದೆ. ಯಾವುದು ಕೂಡ ಇದರ ಸಮೀಪಕ್ಕೆ ಸುಳಿಯಲಾರದು. ಆದರೆ ಎಲ್ಲವನ್ನೂ ಇದು ಹಿಂದಕ್ಕೆ ತಳ್ಳಿದೆ" ಎಂದು ಶಾಸ್ತ್ರಿ ಹೇಳಿದರು.
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್: ಅಗ್ರ ಸ್ಥಾನಕ್ಕೇರಿದ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಸಾಕಷ್ಟು ಗಾಯದ ಸಮಸ್ಯೆಗೆ ತುತ್ತಾಯಿತು. ಬ್ರಿಸ್ಬೇನ್ನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಹನುಮ ವಿಹಾರಿ ಸೇವೆ ಕೂಡ ಅಲಭ್ಯವಾಗಿತ್ತು. ಆದರೆ ತಂಡದ ಯುವ ಆಟಗಾರರು ತೋರಿದ ಕೆಚ್ಚೆದೆಯ ಪ್ರದರ್ಶನ ಆಸ್ಟ್ರೇಲಿಯಾ ತಂಡಕ್ಕೆ ಅರಗಿಸಿಕೊಳ್ಳಲಾಗದ ಸೋಲುಣಿಸುವಲ್ಲಿ ಯಶಸ್ವಿಯಾಗಿದೆ.