ಇಂಗ್ಲೆಂಡ್ ಟೆಸ್ಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡಿ ಸುದ್ದಿಯಾಗಿದ್ದಾರೆ. ಸರಣಿಯ ಅಂತಿಮ ಘಟ್ಟಕ್ಕೆ ಬಂದಿರುವ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವ ಮೈಕಲ್ ವಾನ್ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ನೀಡಿದ ಪ್ರದರ್ಶನ ಅಸಾಮಾನ್ಯ ಎಂದಿದ್ದಾರೆ.
ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ಆಟಗಾರರಾದ ಶಾರ್ದೂಲ್ ಠಾಕೂರ್ ಹಾಗೂ ವಾಶಿಂಗ್ಟನ್ ಸುಂದರ್ 123 ರನ್ಗಳ ಜೊತೆಯಾಟವನ್ನು ನೀಡುವ ಮೂಲಕ 336 ರನ್ಗಳನ್ನು ಕಲೆ ಹಾಕಿತು. ಈ ಅದ್ಭುತ ಇನ್ನಿಂಗ್ಸ್ನ ಬಳಿಕ ಮೈಕಲ್ ವಾನ್ ಪ್ರತಿಕ್ರಿಯಿಸಿ ಈ ಮಾತುಗಳನ್ನು ಆಡಿದ್ದಾರೆ.
ನೀವೂ ಕೋಟ್ಯಾಧಿಪತಿಯಾಗಬಹುದು; ಹಣ ಗಳಿಸಲು ಇಲ್ಲಿದೆ ಸುಲಭ ದಾರಿ!
"ಸಂಪೂರ್ಣ ಶ್ರೇಯಸ್ಸು ಭಾರತಕ್ಕೆ. ಈ ಪ್ರವಾಸದಲ್ಲಿ ಅವರು ತೋರಿರುವ ವ್ಯಕ್ತಿತ್ವ ಅಸಾಮಾನ್ಯವಾಗಿದೆ. ಅದೂಕೂಡ ಅನೇಕ ಗಾಯಗಳ ಸವಾಲಿನ ಮಧ್ಯೆ. ಈ ತಂಡ ಮಾತ್ರ ಅನೇಕರು ಹೇಳುವ ಹಾಗೆ ಬೆಂಚ್ ಸಾಮರ್ಥ್ಯದಲ್ಲೂ ಬಲಿಷ್ಠವಾಗಿದೆ. ಭಾರತ ಈಗ ಅತ್ಯಂತ ಬಲಿಷ್ಠ ಆಟಗಾರರ ಬೆಂಚ್ಅನ್ನು ಹೊಂದಿದೆ" ಎಂದು ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ ಮೈಕಲ್ ವಾನ್ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಭಾರತ ಈ ಬಾರಿ ಟೆಸ್ಟ್ ಸರಣಿಯನ್ನು 0-4 ಅಂತರದಿಂದ ಸೋಲು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದರು. ಟಿ20 ಸರಣಿಗೂ ಮುನ್ನ ಇದೇ ರೀತಿ ಭವಿಷ್ಯ ನುಡಿದಿದ್ದ ಮೈಕಲ್ ವಾನ್ ಟಿ20 ಸರಣಿ ಅಂತ್ಯದ ಬಳಿಕ ಟ್ವೀಟ್ ಮಾಡಿ "ನನ್ನ ಊಹೆ ಸ್ವಲ್ಪ ತಪ್ಪಾಗಿದೆ. ಭಾರತ ಏಕದಿನ ಸರಣಿಯನ್ನು ಸೋತಿತು ಆದರೆ ಟಿ20 ಸರಣಿಯಲ್ಲಿ ಊಹೆ ಮಾಡದ ರೀತಿಯಲ್ಲಿ ಗೆಲುವು ಸಾಧಿಸಿದೆ. ಆದರೆ ಅವರು ಟೆಸ್ಟ್ ಸರಣಿಯನ್ನು ಸೋಲಲಿದ್ದಾರೆ" ಎಂದು ಮೈಕಲ್ ವಾನ್ ಟ್ವೀಟ್ನಲ್ಲಿ ಬರೆದುಕೊಂಡಿದ್ದರು.
ಅಡಿಲೇಡ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಘಾತಕರ ರೀತಿಯಲ್ಲಿ ಕುಸಿತ ಕಂಡ ನಂತರ ಭಾರತ ಟೆಸ್ಟ್ ಸರಣಿಯಲ್ಲಿ 4-0 ಅಂತರದಿಂದ ಸೋಲನ್ನು ಕಾಣಲಿದೆ ಎಂದಿದ್ದರು. ಆದರೆ ಬಾಕ್ಸಿಂಗ್ಡೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲ್ಲುವ ಮೂಲಕ ಭಾರತ ಆಸಿಸ್ಗೆ ತಿರುಗೇಟು ನೀಡಿತು. ಸಿಡ್ನಿ ಪಂದ್ಯವನ್ನು ಅದ್ಭುತವಾಗಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲೂ ಭಾರತ ಸಾಕಷ್ಟು ಪ್ರಮುಖ ಆಟಗಾರರ ಅನುಪಸ್ಥೀತಿಯಲ್ಲಿ ಶ್ರೇಷ್ಠವಾದ ಪ್ರದರ್ಶನವನ್ನು ನೀಡುವ ಮೂಲಕ ಪ್ರಶಂಸೆಗೆ ಒಳಗಾಗಿದೆ.