ತಾಯಿಯ ಮಾತಿನಿಂದ ಆತ್ಮವಿಶ್ವಾಸ
"ನಾನು ಐದು ವಿಕೆಟ್ ಪಡೆಯಲು ಸಾಧ್ಯವಾಗಿದ್ದಕ್ಕೆ ಧನ್ಯವಾದಗಳು. ತಂದೆಯ ಅಗಲಿಕೆಯ ನಂತರ ಇದು ನನಗೆ ತುಂಬಾ ಕಠಿಣವಾದ ಸಂದರ್ಭವಾಗಿದೆ. ಆದರೆ ತಾಯಿಯ ಜೊತೆಗೆ ಮಾತನಾಡಿದ ನಂತರ ನಾನು ಆತ್ಮ ವಿಶ್ವಾಸವನ್ನು ಪಡೆದುಕೊಂಡೆ. ಅಮ್ಮನ ಜೊತೆಗೆ ಫೋನ್ನಲ್ಲಿ ಮಾತನಾಡಿದ ಆ ಮಾತುಗಳಿಂದಾಗಿ ನಾನು ಮಾನಸಿಕವಾಗಿ ಬಲಿಷ್ಠನಾದೆ. ನನ್ನ ಚಿತ್ತ ತಂದೆಯ ಕನಸನ್ನು ನನಸು ಮಾಡುವಲ್ಲಿ ನೆಟ್ಟಿತು" ಎಂದು ಸಿರಾಜ್ ಪ್ರತಿಕ್ರಿಯಿಸಿದ್ದಾರೆ.
ತಂದೆ ಇದ್ದಿದ್ದರೆ ಸಂಭ್ರಮಿಸುತ್ತಿದ್ದರು
"ಭಾರತಕ್ಕಾಗಿ ಆಡಲು ಅವಕಾಶ ಸಿಕ್ಕಿರುವುದಕ್ಕೆ ದೇವರಿಗೆ ನಾನು ಧನ್ಯವಾದವನ್ನು ಸಲ್ಲಿಸುತ್ತೇನೆ. ಇದು ನನ್ನ ತಂದೆಯ ಕನಸು ಕೂಡ ಆಗಿತ್ತು. ಆವರು ಈ ಸಂದರ್ಭದಲ್ಲಿ ಇದ್ದಿದ್ದರೆ ಬಹಳ ಸಂತೋಷ ಪಡುತ್ತಿದ್ದರು. ಆದರೆ ಅವರ ಆಶಿರ್ವಾದ ನನ್ನ ಜೊತೆಗಿರುತ್ತದೆ ಎಂದು ನಾನು ಬಲ್ಲೆ. ಇಂದಿನ ನನ್ನ ಪ್ರದರ್ಶನಕ್ಕೆ ಮಾತಿಲ್ಲದಂತಾಗಿದ್ದೇನೆ" ಎಂದು ಸಿರಾಜ್ ಪ್ರತಿಕ್ರಿಯಿಸಿದ್ದಾರೆ.
ಆಸಿಸ್ ಪ್ರವಾಸ ಸಿರಾಜ್ಗೆ ಬಲು ಕಠಿಣ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದ ಸಿರಾಜ್ ಆಸಿಸ್ ಪ್ರವಾಸಕ್ಕೆ ತೆರಳಿದ್ದ ಬಳಿಕ ಕಳೆದ ನವೆಂಬರ್ ತಿಂಗಳಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ದೇಶವನ್ನು ಪ್ರತಿನಿಧಿಸುವ ಕಾರಣದಿಂದಾಗಿ ತವರಿಗೆ ಮರಳದೆ ಆಸ್ಟ್ರೇಲಿಯಾದಲ್ಲೇ ಉಳಿದು ಟೆಸ್ಟ್ ತಂಡಕ್ಕಾಗಿ ಆಡಲು ನಿರ್ಧಾರವನ್ನು ಮಾಡಿದ್ದರು. ಆಸಿಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಪ್ರೇಕ್ಷಕರಿಂದ ನಿಂದನೆಗೆ ಒಳಗಾಗಿದ್ದು ಕೂಡ ಪ್ರತಿಭಾನ್ವಿತ ವೇಗಿಗೆ ಆಘಾತ ನೀಡಿತ್ತು. ಆದರೆ ಇದಕ್ಕೆ ಸಿರಾಜ್ ತಮ್ಮ ಪ್ರದರ್ಶನದ ಮೂಲಕವೇ ತಿರುಗೇಟು ನೀಡಿದ್ದಾರೆ