ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ2ಐ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಹಿನ್ನಡೆಯ ಸಂಗತಿಯೊಂದು ಕೇಳಿ ಬಂದಿದೆ. ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಟಿ20ಐ ಸರಣಿಯ ಇನ್ನುಳಿದ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಗಾಯಕ್ಕೀಡಾಗಿದ್ದರಿಂದ ಜಡೇಜಾ ಇನ್ನುಳಿದ ಪಂದ್ಯಗಳಲ್ಲಿ ಆಡುತ್ತಿಲ್ಲ. ಜಡೇಜಾ ಬದಲಿಗೆ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್ಗಳು
ಕ್ಯಾನ್ಬೆರಾದಲ್ಲಿ ಶುಕ್ರವಾರ ಮುಕ್ತಾಯಗೊಂಡ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ಗೆಲ್ಲುವಲ್ಲಿ ಜಡೇಜಾ ಕೊಡುಗೆ ಪ್ರಮುಖವಾಗಿತ್ತು. 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಜಡೇಜಾ 23 ಎಸೆತಗಳಿಗೆ 44 ರನ್ ಕೊಡುಗೆ ನೀಡಿದ್ದರು. ಆದರೆ ಭಾರತದ ಇನ್ನಿಂಗ್ಸ್ನ ಕೊನೇ ಕ್ಷಣದಲ್ಲಿ ಜಡೇಜಾ ತಲೆಗೆ ಚೆಂಡು ಬಡಿದು ಗಾಯವಾಗಿತ್ತು.
ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಜಡೇಜಾ ಬದಲು ಯುಜುವೇಂದ್ರ ಚಾಹಲ್ ಮೈದಾನಕ್ಕಿಳಿದಿದ್ದರು. 4 ಓವರ್ ಎಸೆದಿದ್ದ ಚಾಹಲ್ 25 ರನ್ಗೆ 3 ಪ್ರಮುಖ ವಿಕೆಟ್ಗಳನ್ನು ಕೆಡವಿದ್ದರು. ಪರಿಣಾಮ ಟೀಮ್ ಇಂಡಿಯಾ ಪಂದ್ಯದಲ್ಲಿ 11 ರನ್ಗಳ ರೋಚಕ ಜಯ ಗಳಿಸಿತ್ತು.
ಜಡೇಜಾ ಬದಲಿಗೆ ಚಾಹಲ್-ವಿವಾದ, ಕನ್ಕಶನ್ ಸಬ್ ನಿಯಮವೇನು?!
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕಡೇ ಪಂದ್ಯದಲ್ಲೂ ಜಡೇಜಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿಯೇ ಭಾರತ ತಂಡ ವೈಟ್ ವಾಷ್ ಮುಖಭಂಗದಿಂದ ತಪ್ಪಿಸಿಕೊಂಡಿತ್ತು. ಆದರೆ ಸದ್ಯ ಗಾಯಕ್ಕೀಡಾಗಿರುವುದರಿಂದ ಜಡೇಜಾ ಇನ್ನುಳಿದ ಟಿ20ಐ ಪಂದ್ಯಗಳಲ್ಲಿ ಆಡುತ್ತಿಲ್ಲ. ದ್ವಿತೀಯ ಟಿ20ಐ ಡಿಸೆಂಬರ್ 6ರ ಭಾನುವಾರ ನಡೆಯಲಿದೆ.