ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ಪಾಲಿಗೆ ಭದ್ರಕೋಟೆಯಂತಿದ್ದ ಗಾಬಾ ಅಂಗಳದಲ್ಲಿ ಟೀಮ್ ಇಂಡಿಯಾ ಮಣಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಆಸಿಸ್ಗೆ ಅದರದೇ ನೆಲದಲ್ಲಿ ಸರಣಿ ಸೋಲಿನ ರುಚಿ ತೋರಿಸಿದೆ ಟೀಮ್ ಇಂಡಿಯಾ. ಅಂತಿಮ ಪಂದ್ಯದ ಗೆಲುವಿನ ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿ ಗೆಲ್ಲಲು ಪ್ರಮುಖ ಕಾರಣರಾದ ರಿಷಬ್ ಪಂತ್ ಪ್ರತಿಕ್ರಿಯಿಸಿದರು. ಈ ಸಂದರ್ಭ ನನ್ನ ಜೀವನದ ಅತ್ಯಂತ ಶ್ರೇಷ್ಠವಾದ ಕ್ಷಣವಾಗಿದೆ ಎಂದಿದ್ದಾರೆ ರಿಷಭ್ ಪಂತ್.
"ಇದು ನನ್ನ ಜೀವನದ ಶ್ರೇಷ್ಠವಾದ ಕ್ಷಣಗಳಲ್ಲಿ ಒಂದಾಗಿದೆ. ತಂಡದ ಎಲ್ಲಾ ಸಹಾಯಕ ಸಿಬ್ಬಂಧಿಗಳಿಗೂ ಹಾಗೂ ಸಹ ಆಟಗಾರರಿಗೆ ನಾನು ಚೆನ್ನಾಗಿ ಆಡದಿದ್ದರೂ ನನ್ನನ್ನು ಬೆಂಬಲಿಸಿದಕ್ಕೆ ಧನ್ಯವಾದಗಳನ್ನು ಹೇಳಲು ಸಂತಸ ಪಡುತ್ತೇನೆ" ಎಂದು ಪಂತ್ ಪಂದ್ಯದ ಮುಕ್ತಾಯದ ಬಳಿಕ ಹೇಳಿದ್ದಾರೆ.
ಗಾಬಾ ಕೋಟೆ ಬೇಧಿಸಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಟೀಮ್ ಇಂಡಿಯಾ
"ಇದೊಂದು ಕನಸಿನ ಸರಣಿಯಾಗಿದೆ. ತಂಡದ ಮ್ಯಾನೇಜ್ಮೆಂಟ್ ಯಾವಾಗಲೂ ನನಗೆ ಬೆಂಬಲವಾಗಿತ್ತು ಹಾಗೂ ಯಾವಾಗಲೂ ನೀನೋರ್ವ ಮ್ಯಾಚ್ ವಿನ್ನರ್ ಎಂದು ಬೆನ್ನು ತಟ್ಟುತ್ತಿದ್ದರು ಹಾಗೂ ತಂಡಕ್ಕಾಗಿ ಪಂದ್ಯವನ್ನು ಗೆಲ್ಲಿಸಲು ಉತ್ತೇಜಿಸುತ್ತಿದ್ದರು. ಹಾಗಾಗಿ ನಾನು ಯಾವಾಗಲೂ ಭಾರತಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡಬೇಕೆಂದು ಬಯಸುತ್ತಿದ್ದೆ. ಅದನ್ನು ಇವತ್ತು ಸಾಧಿಸಿದ್ದೇನೆ" ಎಂದು ಸಂಸತ ವ್ಯಕ್ತಪಡಿಸಿದ್ದಾರೆ.
"ಇಂದು ಪಂದ್ಯದ ಐದನೇ ದಿನವಾಗಿದ್ದು ಚೆಂಡು ಸ್ವಲ್ಪ ತಿರುವು ಪಡೆದುಕೊಳ್ಳುತ್ತಿತ್ತು. ಹಾಗಾಗಿ ನನ್ನ ಹೊಡೆತಗಳ ಆಯ್ಕೆಯಲ್ಲಿ ನಾನು ಎಚ್ಚರಿಕೆಯಿಂದ ಇರಬೇಕೆಂದು ನಾನು ಅಂದುಕೊಂಡಿದ್ದೆ" ಎಂದು ಪಂದ್ಯದ ಗೆಲುವಿನ ಬಳಿಕ ರಿಷಬ್ ಪಂತ್ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ.
ಬ್ರಿಸ್ಬೇಬ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ಅಜೇಯ 89 ರನ್ ಗಳಿಸಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಲು ಕಾರಣರಾದರು. ಈ ಮೂಲಕ ಎರಡನೇ ಇನ್ನಿಂಗ್ಸ್ನಲ್ಲಿ ಬ್ರಿಸ್ಬೇನ್ ಅಂಗಳದ ಬೃಹತ್ ಮೊತ್ತವನ್ನು ಮೀರಿ ನಿಲ್ಲಲು ಕಾರಣರಾದರು.