ತಂಡದ ಆಯ್ಕೆಯ ಸವಾಲು
ಎರಡು ಟೆಸ್ಟ್ ಪಂದ್ಯಗಳು ಕೇವಲ ಐದೂವರೆ ದಿನಗಳಲ್ಲಿ ಪೂರ್ಣಗೊಂಡಿರುವುದು, ಸ್ಪರ್ಧಾತ್ಮಕ ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಸಾಮರ್ಥ್ಯದ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಹೀಗಾಗಿ ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಸೂಕ್ತ ತಂಡದ ಆಯ್ಕೆಗೆ ಕಸರತ್ತು ನಡೆಸಿದ್ದಾರೆ.
ಲಾರ್ಡ್ಸ್ ಸೋಲು: ನಾಯಕ ಕೊಹ್ಲಿ, ಕೋಚ್ ಶಾಸ್ತ್ರಿ ಅಧಿಕಾರಕ್ಕೆ ಕತ್ತರಿ?
ರಿಷಬ್ ಪಂತ್ಗೆ ಅವಕಾಶ
ಎರಡು ಪಂದ್ಯಗಳಲ್ಲಿ ವಿಫಲರಾಗಿರುವ ವಿಕೆಟ್ ಕೀಪರ್ ದಿನೇಶ ಕಾರ್ತಿಕ್ ಸ್ಥಾನಕ್ಕೆ 20 ವರ್ಷದ ರಿಷಬ್ ಪಂತ್ ಅವರನ್ನು ಆಡಿಸುವುದು ಬಹುತೇಕ ಖಚಿತವಾಗಿದೆ. ಅನನುಭವಿಯಾದರೂ, ಅತ್ಯುತ್ತಮ ಫಾರ್ಮ್ನಲ್ಲಿರುವ ಪಂತ್, ಪಾದಾರ್ಪಣೆಯ ಪಂದ್ಯದಲ್ಲಿ ತಂಡಕ್ಕೆ ನೆರವಾಗುವ ಭರವಸೆಯಿದೆ.
ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿ ಎಂದೇ ಕರೆಯಲಕಾಗುತ್ತಿರುವ ಪಂತ್, ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಬಾರಿಸಿದ್ದರು.
ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಒಂದು ತ್ರಿಶತಕದ ಸಹಿತ 54% ಸರಾಸರಿ ಹೊಂದಿದ್ದರೂ ಪಂತ್ ಅವರಿಗೆ ಇಂಗ್ಲೆಂಡ್ನ ವೇಗದ ದಾಳಿಯನ್ನು ಎದುರಿಸುವುದು ಸುಲಭವಾಗುವುದಿಲ್ಲ.
ವಾರಕ್ಕೆ ಏಳೇದಿನ, ಹತ್ತಲ್ಲ: ಭಾರತದ ಬೆನ್ನಿಗೆ ನಿಂತ ಇಂಗ್ಲೆಂಡ್ ಕೋಚ್!
|
ಪ್ರತಿರೋಧ ತೋರುವರೇ?
ಲಾರ್ಡ್ಸ್ ಟೆಸ್ಟ್ನ ಮೊದಲ ದಿನ ಮಳೆಗೆ ಆಹುತಿಯಾದರೂ, ಕೇವಲ ಆರು ಅವಧಿಗಳಲ್ಲಿ ಪಂದ್ಯ ಮುಗಿದು ಹೋದ ಹೀನಾಯ ಸೋಲಿನ ಆಘಾತದಿಂದ ಭಾರತ ಚೇತರಿಸಿಕೊಳ್ಳಬೇಕಿದೆ.
ವಿರಾಟ್ ಕೊಹ್ಲಿ ಹೊರತುಪಡಿಸಿ ಇಂಗ್ಲೆಂಡ್ ಬೌಲರ್ಗಳಿಗೆ ಕೊಂಚ ಪ್ರತಿರೋಧ ತೋರಿದವರೆಂದರೆ ಆರ್. ಅಶ್ವಿನ್ ಮಾತ್ರ. ಉಳಿದಂತೆ ಭಾರತದ ಬ್ಯಾಟಿಂಗ್ನಲ್ಲಿ ಬಲವೇ ಇಲ್ಲದಂತಾಗಿದೆ. ಮೊದಲ ಟೆಸ್ಟ್ನಲ್ಲಿ ತೋರಿದ್ದ ಬೌಲಿಂಗ್ ಪ್ರದರ್ಶನವೂ ಎರಡನೆಯ ಟೆಸ್ಟ್ನಲ್ಲಿ ಕಂಡುಬರಲಿಲ್ಲ.
ಮರಳಿದ ಬೂಮ್ರಾ
ಕೊಹ್ಲಿ ಬೆನ್ನು ನೋವಿಗೆ ತುತ್ತಾಗಿದ್ದರೆ, ಅಶ್ವಿನ್ ಮತ್ತು ಹಾರ್ದಿಕ್ ಪಾಂಡ್ಯ ಕೈಗಳಿಗೆ ಪೆಟ್ಟುಮಾಡಿಕೊಂಡಿದ್ದರು. ಈ ಮೂವರೂ ಫಿಟ್ ಆಗಿರುವುದು ತಂಡಕ್ಕೆ ಸಮಾಧಾನ ಮೂಡಿಸಿದೆ. ಮಿಗಿಲಾಗಿ ಗಾಯದ ಕಾರಣ ಸರಣಿಯಲ್ಲಿ ಇದುವರೆಗೂ ಆಡದ ವೇಗಿ ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳಿರುವುದು ಭಾರತದ ಪಾಳೆಯದಲ್ಲಿ ತುಸು ಉತ್ಸಾಹ ಮೂಡಿಸಿದೆ.
ತಿರುವು ಪಡೆಯುತ್ತಿದ್ದ ಎಡ್ಜ್ಬಾಸ್ಟನ್ನಲ್ಲಿ ಇಬ್ಬರು ಸ್ಪಿನ್ನರ್ಗಳನ್ನು ಆಡಿಸದೆ ತಪ್ಪು ಮಾಡಿದ್ದ ಕೊಹ್ಲಿ, ಲಾರ್ಡ್ಸ್ನ ವೇಗದ ಪಿಚ್ನಲ್ಲಿ ಇಬ್ಬರನ್ನು ಆಡಿಸಿ ಮತ್ತೆ ಪ್ರಮಾದ ಎಸಗಿದ್ದರು.
ಕೊಹ್ಲಿ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದು, ಕರುಣ್ ನಾಯರ್ ಅಭ್ಯಾಸದ ಅವಧಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.
|
ಆರಂಭಿಕರ ವೈಫಲ್ಯ
ತಂಡದ ಮೇಲಿನ ಕ್ರಮಾಂಕ ಕೂಡ ಪದೇ ಪದೇ ವಿಫಲವಾಗುತ್ತಿದೆ. ಮುರಳಿ ವಿಜಯ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ 10 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 128 ರನ್ ಮಾತ್ರ ಗಳಿಸಿದ್ದಾರೆ. ಆದರೆ, ತಂಡದ ಆಡಳಿತವು ಅವರಿಗೆ ಇನ್ನೊಂದು ಅವಕಾಶ ನೀಡುವ ಸಾಧ್ಯತೆ ಇದೆ.
ಏಕದಿನ ಸರಣಿಯಲ್ಲಿಯೂ ವೈಫಲ್ಯ ಕಂಡಿದ್ದ ಶಿಖರ್ ಧವನ್ ಅವರನ್ನು ಎರಡನೆಯ ಪಂದ್ಯದಲ್ಲಿ ಕೈಬಿಡಲಾಗಿತ್ತು. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯಗಳಲ್ಲಿ ಅವರ ಸರಾಸರಿ 17.75 ಮಾತ್ರ. ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ಒಟ್ಟು ನಾಲ್ಕು ಪಂದ್ಯಗಳಲ್ಲಿ ಅವರ ಸರಾಸರಿ 20.12.
ಕೆ.ಎಲ್. ರಾಹುಲ್ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಹೀಗಿದ್ದರೂ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಆರಂಭಿಕ ಜೋಡಿಯಾಗಿ ರಾಹುಲ್ ಮತ್ತು ಧವನ್ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.
ಕುಲದೀಪ್ ಬದಲು ಬೂಮ್ರಾ
ಇನ್ನು ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ಸ್ಥಾನಕ್ಕೆ ಜಸ್ಪ್ರೀತ್ ಬೂಮ್ರಾ ಆಡಲಿದ್ದಾರೆ. ಉಮೇಶ್ ಯಾದವ್ಗೆ ಈ ಪಂದ್ಯದಲ್ಲಿಯೂ ಅವಕಾಶ ಸಿಗುವ ಸಂಭವವಿಲ್ಲ.
2014ರಲ್ಲಿನ ಪಿಚ್ಗಿಂತಲೂ ಟ್ರೆಂಟ್ ಬ್ರಿಡ್ಜ್ ಪಿಚ್ ವಿಭಿನ್ನವಾಗಿ ಕಾಣಿಸುತ್ತಿದೆ. ಆಗ ಭಾರತ 457 ಮತ್ತು 391/9 (ಡಿ) ಗಳಿಸಿದ್ದರೆ, ಇಂಗ್ಲೆಂಡ್ 496 ರನ್ ಗಳಿಸಿತ್ತು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.
ಟ್ರೆಂಟ್ಬ್ರಿಡ್ಜ್ನಲ್ಲಿ ಮೋಡದ ವಾತಾವರಣ ಇದ್ದರೂ ಮೊದಲ ನಾಲ್ಕು ದಿನದ ಆಟಕ್ಕೆ ತೊಂದರೆಯಾಗಲಾರದು. ಭಾರತ ಏಕೈಕ ಸ್ಪಿನ್ನರ್ ಆಗಿ ಅಶ್ವಿನ್ ಅವರನ್ನು ಮಾತ್ರ ಆಡಿಸುವುದು ನಿಶ್ಚಿತ.
|
ಇಂಗ್ಲೆಂಡ್ಗೂ ಆಯ್ಕೆಯ ಚಿಂತೆ
ಎಲ್ಲರೂ ವಿಫಲರಾಗುತ್ತಿರುವುದರಿಂದ ಯಾರನ್ನು ಆಡಿಸುವುದು ಎಂಬುದು ಭಾರತಕ್ಕೆ ಚಿಂತೆಗೀಡುಮಾಡಿದ್ದರೆ, ಅತ್ತ ಇಂಗ್ಲೆಂಡ್ ತಂಡದಲ್ಲಿ ಎಲ್ಲರೂ ಅತ್ಯುತ್ತಮ ಫಾರ್ಮ್ನಲ್ಲಿರುವುದು ಸಹ ತಲೆನೋವಾಗಿದೆ. ನ್ಯಾಯಾಲಯದ ಪ್ರಕರಣದಲ್ಲಿ ದೋಷಮುಕ್ತಗೊಂಡು ತಂಡಕ್ಕೆ ಮರಳಿರುವ ಬೆನ್ಸ್ಟೋಕ್ಗೆ ಒಬ್ಬ ಆಟಗಾರ ದಾರಿ ಮಾಡಿಕೊಡಬೇಕಾಗಿದೆ.
ಸ್ಟೋಕ್ಸ್ ನೆಟ್ನಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನ ಕಠಿಣ ತಾಲೀಮು ನಡೆಸಿದ್ದರು. ಲಾರ್ಡ್ಸ್ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿದ್ದ ಓಲಿ ಪೋಪ್ ಅವರನ್ನು ಕೈಬಿಟ್ಟು ಸ್ಟೋಕ್ಸ್ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಸ್ಪಿನ್ನರ್ ಅಬ್ದುಲ್ ರಶೀದ್ ಅವರ ಸ್ಥಾನದಲ್ಲಿ ಬದಲಾದರೂ ಅಚ್ಚರಿಯಿಲ್ಲ. ಅವರ ಬದಲು ಮೋಯಿನ್ ಆಲಿ ಅವಕಾಶ ಗಿಟ್ಟಿಸಬಹುದು.
ಪಂದ್ಯದ ಆರಂಭ: ಮಧ್ಯಾಹ್ನ 3.30
ನೇರ ಪ್ರಸಾರ: ಸೋನಿ ನೆಟ್ವರ್ಕ್ಸ್