ಭಾರತಕ್ಕೆ ಗಾಯದ ಸಮಸ್ಯೆ
ಕಳೆದ ಜೂನ್ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಬಳಿಕ ಭಾರತ ತಂಡ ಒಂದಾದ ಮೇಲೊಂದರಂತೆ ಗಾಯದ ಸಮಸ್ಯೆಗೆ ಒಳಗಾಗುತ್ತಿದೆ. ಮೊದಲಿಗೆ ಭಾರತವ ಯುವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಗಾಯಕ್ಕೆ ತುತ್ತಾಗಿ ಇಂಗ್ಲೆಂಡ್ ವಿರುದ್ಧಧ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಅದಾದ ಬಳಿಕ ವಾಶಿಂಗ್ಟನ್ ಸುಂದರ್ ಹಾಗೂ ಆವೇಶ್ ಖಾನ್ ಕೂಡ ಗಾಯಗೊಂಡ ಕಾರಣ ಸಂಪೂರ್ಣ ಸರಣಿಯಿಂದ ಹೊರಗೆಬಿದ್ದಿದ್ದಾರೆ.
3ನೇ ಪಂದ್ಯದ ಬಳಿಕ ಸೂರ್ಯಕುಮಾರ್, ಪೃಥ್ವಿ ಲಭ್ಯ
ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಭಾರತೀಯ ಆಟಗಾರರ ಗಾಯಗೊಂಡು ಸರಣಿಯಿಂದ ಹೊರಬಿದ್ದ ಕಾರಣ ಈ ಆಟಗಾರರ ಬದಲಿಗೆ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ಬದಲಿ ಆಟಗಾರರಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಆದರೆ ಈ ಆಟಗಾರರ ಕ್ವಾರಂಟೈನ್ಗೆ ಒಳಗಾಗಬೇಕಾದ ಕಾರಣ ಮೊದಲ ಎರಡು ಟೆಸ್ಟ್ಗಳ ಆಯ್ಕೆಗೆ ಲಭ್ಯವಿರುವುದಿಲ್ಲ. ಮೂರನೇ ಪಂದ್ಯಕ್ಕೆ ಈ ಆಟಗಾರರು ಲಭ್ಯವಾಗಲಿದ್ದಾರೆ.
ವೈದ್ಯಕೀಯ ತಂಡದ ನಿಗಾದಲ್ಲಿ ಮಯಾಂಕ್
ಇನ್ನು ಮಯಾಂಕ್ ಅಗರ್ವಾಲ್ ತಲೆಗೆ ಚಂಡು ಬಡಿದಿರುವ ಕಾರಣ ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಗಳ ತಂಡ ಈಗಾಗಲೇ ಪರೀಕ್ಷೆಯನ್ನು ನಡೆಸಿದೆ. ಈಗಾಗಲೇ ಕನ್ಕುಶನ್ ಕೂಡ ನಡೆಸಲಾಗಿದೆ. 30ರ ಹರೆಯದ ಆಟಗಾರನ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ಆದರೆ ವೈದ್ಯಕೀಯ ಸಿಬ್ಬಂದಿಗಳ ತಂಡ ಮಯಾಂಕ್ ಗಾಯದ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಸಾಕಷ್ಟು ನಿಗಾವಹಿಸಿದೆ.
ಮೊದಲ ಪಂದ್ಯಕ್ಕೆ ಕ್ಷಣಗಣನೆ
ಇನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಬುಧವಾರ ಆರಂಭವಾಗಲಿದ್ದು ಎರಡು ತಂಡಗಳು ಕೂಡ ಸಜ್ಜಾಗುತ್ತಿದೆ. ನಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ನಲ್ಲಿ ಮೊದಲ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್ ತಂಡದ ವಿರುದ್ಧ ಜೂನ್ ತಿಂಗಳಿನ 18ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾಗವಹಿಸಿದ್ದ ಬಳಿಕ ಟೀಮ್ ಇಂಡಿಯಾ ಆಟಗಾರರು ಸುದೀರ್ಘ ಒಂದು ತಿಂಗಳಕಾಲ ಇಂಗ್ಲೆಂಡ್ನಲ್ಲಿಯೇ ಇದ್ದು ವಿರಾಮದಲ್ಲಿದ್ದರು. ಈಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಈ ಪಂದ್ಯದಲ್ಲಿ ಭಾರತೀಯ ತಂಡದ ಆರಂಭಿಕನಾಗಿ ರೋಹಿತ್ ಶರ್ಮಾಗೆ ಕೆಎಲ್ ರಾಹುಲ್ ಸಾಥ್ ನೀಡುವ ಸಾಧ್ಯತೆಯಿದೆ. ಶುಬ್ಮನ್ ಗಿಲ್ ಗಾಯದಿಂದಾಗಿ ಮಯಾಂಕ್ ಅಗರ್ವಾಲ್ ಮೊದಲ ಆಯ್ಕೆಯ ಆರಂಭಿಕನಾಗಿ ತಂಡದಲ್ಲಿದ್ದರು. ಆದರೆ ಅವರು ಅಲಭ್ಯವಾಗುತ್ತಿರುವ ಕಾರಣದಿಂದಾಗಿ ಕೆಎಲ್ ರಾಹುಲ್ಗೆ ಇನ್ನಿಂಗ್ಸ್ ಆರಂಭಿಸುವ ಹೊಣೆ ಸಿಗುವ ಸಾಧ್ಯತೆ ದಟ್ಟವಾಗಿದೆ.