ಲಂಡನ್, ಸೆಪ್ಟೆಂಬರ್ 2: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಆರಂಭವಾಗಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸತತ ನಾಲ್ಕನೇ ಪಂದ್ಯದಲ್ಲಿಯೂ ನಿರೀಕ್ಷೆಗೂ ಮೀರಿದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕನ ಈ ನಿರ್ಧಾರ ದಿಗ್ಗಜ ಕ್ರಿಕೆಟಿಗರನ್ನು ಕೂಡ ಅಚ್ಚರಿಗೀಡು ಮಾಡಿದೆ. ಈ ನಿರ್ಧಾರ ತಂಡದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯಗಳನ್ನು ಕೂಡ ಕ್ರಿಕೆಟ್ ಪಂಡಿತರು ವ್ಯಕ್ತಪಡಿಸಲು ಆರಂಭಿಸಿದ್ದಾರೆ.
ಟೀಮ್ ಇಂಡಿಯಾ ನಾಯಕನ ಈ ಅಚ್ಚರಿಯ ನಿರ್ಧಾರ ಬೇರೆ ಯಾವುದೂ ಆಡುವ ಬಳಗದಲ್ಲಿ ಅನುಭವಿ ಆರ್ ಅಶ್ವಿನ್ಗೆ ಸ್ಥಾನ ನೀಡದಿರುವುದು. ಸತತ ನಾಲ್ಕನೇ ಪಂದ್ಯದಲ್ಲಿಯೂ ಆರ್ ಅಶ್ವಿನ್ ಬೆಂಚ್ ಕಾಯುವ ಸ್ಥಿತಿ ಉಂಟಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ 2 ಬೌಲರ್ ಆಗಿರುವ ಆರ್ ಅಶ್ವಿನ್ಗೆ ತಂಡದಲ್ಲಿ ಕನಿಷ್ಠ ಒಂದು ಪಂದ್ಯವನ್ನೂ ಆಡಲು ಅವಕಾಶ ನೀಡದಿರುವುದು ಅಚ್ಚರಿ ಮೂಡಿಸಿದೆ. ಈ ಮೂಲಕ ನಾಯಕ ವಿರಾಟ್ ಕೊಹ್ಲಿಯ ನಿರ್ಧಾರಕ್ಕೆ ಅಚ್ಚರಿ ವ್ಯಕ್ತವಾಗುತ್ತಿದೆ.
ನಾಲ್ಕು ವೇಗಿಗಳು ಹಾಗೂ ಓರ್ವ ಸ್ಪಿನ್ನರ್: ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಜೊತೆಗೆ ಕಣಕ್ಕಿಳಿಯುವ ನಿರ್ಧಾರ ಮಾಡಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಎರಡು ಬದಲಾವಣೆ ಮಾಡಿಕೊಂಡಿದೆ. ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ಈ ಸ್ಥಾನಕ್ಕೆ ಉಮೇಶ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡಲಾಗಿದೆ. ತಂಡದ ಏಕೈಕ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾ ಅವರನ್ನು ಮುಂದುವರಿಸಲಾಗಿದೆ.
ಭಾರತ vs ಇಂಗ್ಲೆಂಡ್: ನಾಲ್ಕನೇ ಟೆಸ್ಟ್ ಮೊದಲ ದಿನ ಮಳೆ ಅಡ್ಡಿಯುಂಟು ಮಾಡುತ್ತಾ?
ಆರ್ ಅಶ್ವಿನ್ ಕಣಕ್ಕಿಳಿಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೊಹ್ಲಿ: ಇನ್ನು ಈ ಪಂದ್ಯದಲ್ಲಿಯೂ ಆರ್ ಅಶ್ವಿನ್ಗೆ ಆಡುವ ಬಳಗದಲ್ಲಿ ಸ್ಥಾನ ನೀಡದ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಾರಣವನ್ನು ನೀಡಿದ್ದಾರೆ. "ಇಂಗ್ಲೆಂಡ್ ತಡದಲ್ಲಿ ನಾಲ್ವರು ಎಡಗೈ ಆಟಗಾರರು ಇದ್ದಾರೆ. ಹೀಗಾಗಿ ಜಡೇಜಾಗೆ ಉತ್ತಮ ಹೊಂದಾಣಿಕೆಯಾಗಲಿದೆ. ಇದರೊಮದಿಗೆ ನಮ್ಮ ತಂಡದ ವೇಗಿಗಳು ಕೂಡ ದಾಳಿ ನಡೆಸಲಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ಮೂಲಕವೂ ಕೂಡ ಜಡೇಜಾ ತಂಡದ ಸಮತೋಲನಕ್ಕೆ ಕಾರಣವಾಗುತ್ತಾರೆ" ಎಂದು ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಓವಲ್ ಅಂಗಳದಲ್ಲಿ ಮಿಂಚಿದ್ದ ಅಶ್ವಿನ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಕಾರಣ ಈ ಪಂದ್ಯದಲ್ಲಿ ಆರ್ ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಬಹುದು ಎಂಬ ನಿರೀಕ್ಷೆಗೆ ಬಲವಾದ ಕಾರಣವೂ ಇತ್ತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಆರ್ ಅಶ್ವಿನ್ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸರ್ರೆ ತಂಡದ ಪರವಾಗಿ ಇದೇ ಓವಲ್ ಅಂಗಳದಲ್ಲಿ ಆಡಿದ್ದರು. ಈ ಪಂದ್ಯದಲ್ಲಿ ಆರ್ ಅಶ್ವಿನ್ ಅದ್ಭುತವಾದ ಬೌಲಿಂಗ್ ದಾಳಿ ನಡೆಸಿದ್ದರು. ಅದರಲ್ಲೂ ಎರಡನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ ಬರೊಬ್ಬರಿ ಆರು ವಿಕೆಟ್ ಕಬಳಿಸಿದ್ದರು. ಹೀಗಾಗಿ ಈ ಅಂಗಳದಲ್ಲಿ ಪಿಚ್ ವರ್ತನೆಯ ಬಗ್ಗೆ ಅಶ್ವಿನ್ ಉತ್ತಮ ಅನುಭವ ಹೊಂದಿದ್ದಾರೆ.
ಪೇಚಿಗೆ ಸಿಲುಕಿದ ದೊಡ್ಡ ಗಣೇಶ್: ಇನ್ನು ಓವಲ್ನಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಆರ್ ಅಶ್ವಿನ್ ಸ್ಥಾನ ಪಡೆಯುತ್ತಾರೆ ಎಂಬ ವಿಶ್ವಾಸವನ್ನು ಅನೇಕ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ವ್ಯಕ್ತಪಡಿಸಿದ್ದರು. ಹರ್ಭಜನ್ ಸಿಂಗ್, ದಿನೇಶ್ ಕಾರ್ತಿಕ್ ಹಾಗೂ ಕರ್ನಾಟಕದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಸೇರಿದಂತೆ ಅನೇಕರು ಈ ಅಭಿಪ್ರಾಯವನ್ನು ಹೇಳಿಕೊಂಡಿದ್ದರು. ಆದರೆ ಕರ್ನಾಟಕದ ಮಾಜಿ ವೇಗಿ ದೊಡ್ಡ ಗಣೇಶ್ ಒಂದು ಹೆಜ್ಜೆ ಮುಂದೆ ಹೋಗಿ ಟ್ವಿಟ್ಟರ್ನಲ್ಲಿ ಶಪಥವನ್ನೂ ಮಾಡಿಬಿಟ್ಟಿದ್ದರು. ಓವಲ್ ಪಂದ್ಯದಲ್ಲಿ ಆರ್ ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನ ಪಡೆಯದಿದ್ದರೆ ನಾನು ಟ್ವೀಟ್ ಮಾಡುವುದನ್ನೇ ನಿಲ್ಲಿಸುತ್ತೇನೆ ಎಂದು ದೊಡ್ಡ ಗಣೇಶ್ ಬರೆದುಕೊಂಡಿದ್ದರು. ಈ ಮೂಲಕ ಕರ್ನಾಟಕದ ಮಾಜಿ ವೇಗಿ ಪೇಚಿಗೆ ಸಿಲುಕಿದ್ದಾರೆ. ಟೀಮ್ ಇಂಡಿಯಾ ಆಡುವ ಬಳಗ ಘೋಷಣೆಯಾಗುತ್ತಲೇ ಈ ಟ್ವೀಟ್ಅನ್ನು ಮಾಜಿ ಕ್ರಿಕೆಟಿಗ ಡಿಲೀಟ್ ಮಾಡಿದರು.
ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದಲ್ಲಿ ಕೂಡ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ಆದರೆ ಅನುಭವಿ ಜೇಮ್ಸ್ ಆಂಡರ್ಸನ್ಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಜೇಮ್ಸ್ ಆಂಡರ್ಸನ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಪಂದ್ಯ ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಅನುಭವಿಯನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಲು ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಸರಣಿಯ ಉಳಿದ ಪಂದ್ಯದಿಂದ ಹೊರಗುಳಿದಿದ್ದಾರೆ. ಪಿತೃತ್ವದ ರಜೆ ಪಡೆದುಕೊಂಡಿರುವ ಬಟ್ಲರ್ ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ. ಹೀಗಾಗಿ ಈ ಸ್ಥಾನದಲ್ಲಿ ಇಲ್ಲೀ ಪೋಪ್ ಅವಕಾಶ ಪಡೆದಿದ್ದಾರೆ. ಇನ್ನು ಕ್ರಿಸ್ ವೋಕ್ಸ್ ಗಾಯದಿಂದ ಚೇತರಿಸಿಕೊಂಡಿದ್ದು ಈ ಪಂದ್ಯದಲ್ಲಿ ಆಡಲು ಇಳಿದಿದ್ದಾರೆ. ಸ್ಯಾಮ್ ಕರನ್ ವೋಕ್ಸ್ಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಆಲ್ಲಿ ಪೋಪ್, ಜಾನಿ ಬೈರ್ಸ್ಟೊ (ವಿಕೆಟ್ ಕೀಪರ್), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್ಟನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್