ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಈಗ ಎರಡು ತಂಡಗಳು ಕೂಡ ಸಜ್ಜಾಗುತ್ತಿವೆ. ಮೊದಲ ಟೆಸ್ಟ್ನ ಅಂತಿಮ ದಿನ ಸಂಪೂರ್ಣವಾಗಿ ಮಳೆಗೆ ಆಹುತಿಯಾದ ಕಾರಣದಿಂದಾಗಿ ಪಂದ್ಯ ನೀರಸ ಡ್ರಾ ನಲ್ಲಿ ಅಂತ್ಯವಾಗಿದೆ. ಈಗ ಎರಡನೇ ಪಂದ್ಯವನ್ನಾಡಲು ಭಾರತ ಕ್ರಿಕೆಟ್ ತಂಡದ ಆಟಗಾರರು ಲಂಡನ್ನತ್ತ ಪ್ರಯಾಣ ಬೆಳೆಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಲಂಡನ್ನ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಆಗಸ್ಟ್ 12ರಿಂದ ಆರಂಭವಾಗಲಿದೆ. ಟೀಮ್ ಇಂಡಿಯಾ ಆಟಗಾರರು ನಾಟಿಂಗ್ಹ್ಯಾಮ್ನಿಂದ ಲಂಡನ್ಗೆ ಪ್ರಯಾಣವನ್ನು ಬೆಳೆಸಿರುವ ಮಾಹಿತಿಯನ್ನು ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
"ಅವರಿಗೆ ಅದೊಂದು ಗೀಳು": ಭಾರತ ಮತ್ತು ಪಾಕ್ ವೇಗಿಗಳ ನಡುವಿನ ವ್ಯತ್ಯಾಸ ಹೇಳಿದ ಸಲ್ಮಾನ್ ಬಟ್
ಟೀಮ್ ಇಂಡಿಯಾದ ಸಹ ಆಟಗಾರರಾದ ಮೊಹಮ್ಮದ್ ಶಮಿ, ವೃದ್ಧಿಮಾನ್ ಸಾಹಾ, ಮೊಹಮ್ಮದ್ ಸಿರಾಜ್ ಮತ್ತು ತಂಡದ ಸಿಬ್ಬಂದಿಗಳೊಂದಿಗೆ ಬಸ್ನಲ್ಲಿ ಪ್ರಯಾಣಿಸುವಾಗ ತೆಗೆದ ಫೋಟೋವನ್ನು ಪೂಜಾರ ಹಂಚಿಕೊಂಡಿದ್ದಾರೆ. ಈ ಫೋಟೋದೊಂದಿಗೆ ಪೂಜಾರ "ದುರದೃಷ್ಟವಶಾತ್ ಸಂಪೂರ್ಣ ಪಂದ್ಯವನ್ನು ಆಡಲು ನಮ್ಮಿಂದ ಸಾಧ್ತವಾಗಲಿಲ್ಲ. ಆದರೆ ಈಗ ನಾವು ಮುಂದಿನ ಸವಾಲನ್ನು ಸ್ವೀಕರಿಸುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ ನಾಲ್ಕು ರನ್ಗಳನ್ನು ಗಳಿಸಿದ್ದಾಗ ಅನುಭವಿ ಜೇಮ್ಸ್ ಆಂಡರ್ಸನ್ ಪೂಜಾರಾಗೆ ಫೆವಿಲಿಯನ್ ಹಾದಿ ತೋರಿಸಿದ್ದರು. ದ್ವಿತೀಯ ಇನ್ನಿಂಗ್ಸ್ನಲ್ಲಿಯೂ ಬ್ಯಾಟಿಂಗ್ಗೆ ಇಳಿದಿದ್ದ ಪೂಜಾರ ಕೆಲ ಕಠಿಣ ಕ್ಷಣಗಳನ್ನು ಎದುರಿಸಿದರು. ಆದರೆ ಅಂತಿಮವಾಗಿ ನಾಲ್ಕನೇ ದಿನದಾಟದಲ್ಲಿ ವಿಕೆಟ್ ಉಳಿಸಿಕೊಂಡಿದ್ದ ಪೂಜಾರ 13 ಎಸೆತಗಳಲ್ಲಿ 12 ರನ್ಗಳಿಸಿ ಅಂತಿಮ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅಂತಿಮ ದಿನದಾಟದಲ್ಲಿ ಪಂದ್ಯ ಒಂದೇ ಒಂದು ಎಸೆತಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಗೆಲುವಿನ ಸನಿಹಕ್ಕೆ ತಲುಪಿದ್ದ ಭಾರತ ತಂಡ ಡ್ರಾಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತ ಭಾರತ ಆರಂಭದಲ್ಲಿ ಇಂಗ್ಲೆಂಡ್ ತಂಡವನ್ನು 183 ರನ್ಗಳಿಗೆ ಆಲೌಟ್ ಮಾಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಭಾರತದ ಪರವಾಗಿ ಕೆಎಲ್ ರಾಹುಲ್ ಅದ್ಭುತ ಆಟ ಪ್ರದರ್ಶಿಸಿದರು. ಇದರ ಪರಿಣಾಮವಾಗಿ ಭಾರತ 278 ರನ್ಗಳನ್ನು ಗಳಿಸುವ ಮೂಲಕ 95 ರನ್ಗಳ ಲೀಡ್ ಪಡೆದುಕೊಂಡಿತ್ತು.
ನಂತರ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಶತಕದ ಕೊಡುಗೆಯನ್ನು ನೀಡುವ ಮೂಲಕ ನೆರವಾದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 303 ರನ್ಗಳನ್ನು ಕಲೆಹಾಕಲು ಯಶಸ್ವಿಯಾಗಿತ್ತು. ಈ ಮೂಲಕ ಭಾರತ ತಂಡದ ಗೆಲುವಿಗೆ ಅಂತಿಮ ಇನ್ನಿಂಗ್ಸ್ನಲ್ಲಿ 209 ರನ್ಗಳ ಗುರಿಯನ್ನು ಪಡೆದುಕೊಂಡಿತ್ತು. ಇದನ್ನು ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡು 52 ರನ್ಗಳಿಸಿತ್ತು. ಆದರೆ ಕೊನೆಯ ದಿನದಾಟದಲ್ಲಿ ಒಂದೂ ಎಸೆತ ಸಾಧ್ಯವಾಗದ ಕಾರಣ ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ನಿರ್ಣಯಿಸಲಾಯಿತು.
ಒಲಿಂಪಿಕ್ಸ್ಗೆ ಸೇರ್ಪಡೆಯಾಗುತ್ತಾ ಕ್ರಿಕೆಟ್?: ಭಾರತದ ಭಾಗವಹಿಸುವಿಕೆ ಬಗ್ಗೆ ಜಯ್ ಶಾ ಸ್ಪಷ್ಟನೆ
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ನೀಡಿದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಮೊದಲ ಪಂದ್ಯದಲ್ಲಿ ಸಾಧಿಸಿದ ಯಶಸ್ಸು ತಂಡದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಬೂಮ್ರಾ ಮಂಕಾದಂತೆ ಕಂಡುಬರುತ್ತಿದ್ದರು. ಆದರೆ ಈಗ ಮತ್ತೆ ತಮ್ಮ ಹಿಂದಿನ ಫಾರ್ಮ್ಗೆ ಮರಳಿದ್ದಾರೆ.