ಬೆಂಗಳೂರು, ಜುಲೈ 7: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನವೇ ಭಾರತದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಗಾಯಗೊಂಡಿದ್ದು ಸರಣಿಯಿಂದ ಹೊರಗುಳಿಯುವುದು ಖಚಿತವಾಗಿದೆ. ಈ ಮಧ್ಯೆ ಶುಬ್ಮನ್ ಗಿಲ್ ಸ್ಥಾನಕ್ಕೆ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗದ ಪೃಥ್ವಿ ಶಾ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಸೇರ್ಪಡೆಗೊಳಿಸುವ ಬಗ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತನೆಯನ್ನು ನಡೆಸಿತ್ತು. ಈ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ಟೀಕೆಗಳು ಕೇಳಿ ಬಂದಿತ್ತು. ಈ ವಿಚಾರವಾಗಿ ಮಹತ್ವದ ಬೆಳವಣಿಗೆ ನಡೆದಿದೆ.
ಇಂಗ್ಲೆಂಡ್ನಲ್ಲಿರುವ ಭಾರತೀಯ ಟೆಸ್ಟ್ ತಂಡಕ್ಕೆ ಪೃಥ್ವಿ ಶಾ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಸೇರ್ಪಡೆಗೊಳಿಸಲು ಮನವಿಯನ್ನು ಮಾಡಲಾಗಿತ್ತು. ಇಂಡಿಯಾ ಟುಡೇ ವರದಿಯ ಪ್ರಕಾರ ಈ ಮನವಿಯನ್ನು ಭಾರತೀಯ ಕ್ರಿಕೆಟ್ನ ಆಯ್ಕೆಗಾರರು ತಿರಸ್ಕರಿಸಿದ್ದಾರೆ. ಹೀಗಾಗಿ ಈ ಚರ್ಚೆಗೆ ಅಂತ್ಯ ಸಿಕ್ಕಂತಾಗಿದೆ.
ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಭಾರತದ ನಾಯಕರಾಗಿ ಯಾರು ಮೇಲು ಗೊತ್ತಾ?!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತೆರಳಿರುವ ಭಾರತ ತಂಡದಲ್ಲಿ ಆರಂಭಿಕ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಕೆಎಲ್ ರಾಹುಲ್ ಜೊತೆಗೆ ಮೀಸಲು ಆರಂಭಿಕ ಆಟಗಾರನಾಗಿ ಅಭಿಮನ್ಯು ಈಶ್ವರನ್ ಕೂಡ ಇದ್ದಾರೆ. ವರದಿಗಳ ಪ್ರಕಾರ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಜೂನ್ 28ರಂದು ಆಯ್ಕೆಗಾರರಿಗೆ ಪತ್ರವನ್ನು ಬರೆದು ಪೃಥ್ವಿ ಶಾ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಇಂಗ್ಲೆಂಡ್ಗೆ ಕಳುಹಿಸುವಂತೆ ಮನವಿ ಮಾಡಿತ್ತು. ಆದರೆ ಇದಕ್ಕೆ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮಾಡಿಕೊಂಡಿರುವ ಈ ಮನವಿಗೆ ದಿಗ್ಗಜ ಕ್ರಿಕೆಟಿಗ ಕಪಿಲ್ದೇವ್ ಸಹಿತ ಹಲವಾರು ಕ್ರಿಕೆಟ್ ಪಂಡಿತರು ತೀವ್ರ ಟೀಕೆಯನ್ನು ಮಾಡಿದ್ದಾರೆ. ಮ್ಯಾಜೇಜ್ಮೆಂಟ್ನ ಈ ಮನವಿ ಆಯ್ಕೆಗಾರರಿಗೆ ಅಗೌರವ ಮೂಡಿಸುತ್ತದೆ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿರುವ ಉಳಿದ ಆಟಗಾರರಿಗೆ ಅವಮಾನ ಮಾಡಿದಂತಾಗುತ್ತದೆ ಎಮದು ಕಪಿಲ್ದೇವ್ ಹೇಳಿಕೆ ನೀಡಿದ್ದರು.
ಪೃಥ್ವಿ ಶಾ ಹಾಗೂ ದೇವದತ್ ಪಡಿಕ್ಕಲ್ ಇಬ್ಬರು ಕೂಡ ಶ್ರಿಲಂಕಾ ಪ್ರವಾಸಕ್ಕೆ ತೆರಳಿದ್ದಾರೆ. ಮುಂದಿನ ವಾರ ನಡೆಯುವ ಶ್ರಿಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಈ ಇಬ್ಬರು ಆಟಗಾರರು ಕೂಡ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಶಿಖರ್ ಧವನ್ ಈ ತಂಡವನ್ನು ಮುನ್ನಡೆಸುತ್ತಿದ್ದು ರಾಹುಲ್ ದ್ರಾವಿಡ್ ಕೋಚ್ ಆಗಿ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.