ರೋಹಿತ್ ಶರ್ಮಾ ರೀತಿಯ ಆಟಗಾರ ತನ್ನ ಉಳಿವಿಗಾಗಿ ಆಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದ ವಾನ್
ಭಾರತೀಯ ಆಟಗಾರರ ಕಳಪೆ ಪ್ರದರ್ಶನದ ಕುರಿತು ಮಾತನಾಡಿದ ಮೈಕಲ್ ವಾನ್ ವಿಶೇಷವಾಗಿ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಪ್ರದರ್ಶನದ ಕುರಿತು ಬೇಸರವನ್ನು ವ್ಯಕ್ತಪಡಿಸಿದರು. ರೋಹಿತ್ ಶರ್ಮಾ ಎಂತಹ ಅತ್ಯದ್ಭುತ ಆಟಗಾರ, ಆದರೆ ಇಂತಹ ಅತ್ಯದ್ಭುತ ಆಟಗಾರ ತಂಡಕ್ಕಾಗಿ ಆಡದೆ ತನ್ನ ಉಳಿವಿಗಾಗಿ ಬ್ಯಾಟ್ ಬೀಸಿದ್ದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ ಎಂದು ರೋಹಿತ್ ಶರ್ಮಾ ಆಟದ ಕುರಿತು ಮೈಕಲ್ ವಾನ್ ಬೇಸರ ವ್ಯಕ್ತಪಡಿಸಿದರು.
ತಂಡಕ್ಕಾಗಿ ಆಡಬೇಕೆಂಬ ತುಡಿತ ಯಾರಲ್ಲಿಯೂ ಕಾಣಿಸಲಿಲ್ಲ ಎಂದ ಮೈಕಲ್ ವಾನ್
ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಬ್ಯಾಟಿಂಗ್ ಪ್ರದರ್ಶನವನ್ನು ನೋಡಿದ ಮೈಕಲ್ ವಾನ್ ಟೀಮ್ ಇಂಡಿಯಾದ ಯಾವೊಬ್ಬ ಆಟಗಾರನೂ ಸಹ ತನ್ನ ತಂಡಕ್ಕಾಗಿ ಆಡಬೇಕೆಂಬ ತುಡಿತವನ್ನು ಹೊಂದಿರಲಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ರೀತಿಯ ಅದ್ಬುತ ಆಟಗಾರ ಉಳಿವಿಗಾಗಿ ಆಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಮೈಕಲ್ ವಾನ್ ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಕೂಡ ತಂಡಕ್ಕಾಗಿ ಆಡದೇ ತಮ್ಮ ವೈಯಕ್ತಿಕ ಉಳಿವಿಗಾಗಿ ಆಟವನ್ನಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಳ್ಳೆಯ ದಿನ ತಾನಾಗಿಯೇ ಹುಟ್ಟುವುದಿಲ್ಲ ಎಂದು ಭಾರತೀಯ ಆಟಗಾರರನ್ನು ಕುಟುಕಿದ ಮೈಕಲ್ ವಾನ್
ಸುಮ್ಮನೆ ಮೈದಾನಕ್ಕೆ ಬಂದು ಒಳ್ಳೆಯ ದಿನ ಸಿಗಲಿದೆ ಎಂದು ಬ್ಯಾಟ್ ಬೀಸಿದರೆ ಆಗುವುದಿಲ್ಲ, ಉತ್ತಮ ಆಟವನ್ನಾಡಿ ಒಳ್ಳೆಯ ಇನ್ನಿಂಗ್ಸ್ ಕಟ್ಟಿದರೆ ಒಳ್ಳೆಯ ದಿನ ನಿರ್ಮಾಣವಾಗುತ್ತದೆ ಎಂದು ವ್ಯಂಗ್ಯವಾಗಿ ಹೇಳುವುದರ ಮೂಲಕ ಟೀಮ್ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನದ ಕುರಿತು ಮೈಕಲ್ ವಾನ್ ಕಾಲೆಳೆದಿದ್ದಾರೆ.