ಕನ್ನಡಿಗ ಜೋಡಿಯ ಮೇಲೆ ಗಂಭೀರ್ಗೆ ಒಲವು
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕರ್ನಾಟಕದ ಜೋಡಿಯಾದ ಮಯಾಂಕ್ ಅಗರ್ವಾಲ್ ಗಾಗೂ ಕೆಎಲ್ ರಾಹುಲ್ ಜೋಡಿ ಆರಂಭಿಕರಾಗಿ ಕಣಕ್ಕಿಳಿಯಬೇಕೆಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಾ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿರುವ ಕಾರಣದಿಂದಾಗಿ ಈ ಜೊಡಿ ಆರಂಭಿಕರಾಗಿ ಕಣಕ್ಕಿಳಿಯುವುದು ಸೂಕ್ತ ಎಂದಿದ್ದಾರೆ ಗಂಭೀರ್.
ಗಾಯದಿಂದ ಚೇತರಿಸಿರುವ ಮಯಾಂಕ್, ಗಿಲ್
ಟೀಮ್ ಇಂಡಿಯಾದ ಆಟಗಾರರಾದ ಶುಬ್ಮನ್ ಗಿಲ್ ಹಾಗೂ ಮಯಾಂಕ್ ಅಗರ್ವಾಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ಗಾಯದ ಕಾರಣದಿಂದಾಗಿ ವಾಪಾಸಾಗಿದ್ದರು. ಈ ಇಬ್ಬರು ಕೂಡ ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲಿ ಆಡಿರಲಿಲ್ಲ. ಈ ಇಬ್ಬರು ಆರಂಭಿಕ ಆಟಗಾರರ ಅಲಭ್ಯತೆಯ ಹಿನ್ನೆಲೆಯಲ್ಲಿ ಅನುಭವಿ ರೋಹಿತ್ ಶರ್ಮಾ ಜೊತೆಗೆ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಇಂಗ್ಲೆಂಡ್ನ ಸವಾಲಿನ ಪರಿಸ್ಥಿತಿಯಲ್ಲಿ ಈ ಜೋಡಿಯಿಂದ ಅತ್ಯುತ್ತಮ ಪ್ರದರ್ಶನ ಬಂದಿತ್ತು.
ಇಂಗ್ಲೆಂಡ್ ಸರಣಿಯಲ್ಲಿ ಮಿಂಚಿದ ಕೆಎಲ್ ರಾಹುಲ್
ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ ತಂಡದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶವನ್ನು ಮತ್ತೊಂದು ಬಾರಿ ಅದ್ಭುತವಾಗಿ ಬಳಸಿಕೊಂಡ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಪಡೆದ ಮೈಲುಗೈಗೆ ಪ್ರಮುಖ ಕಾರಣವಾಗಿದ್ದರು. ಆಡಿದ 8 ಇನ್ನಿಂಗ್ಸ್ಗಳಲ್ಲಿ ರಾಹುಲ್ 39.8ರ ಸರಾಸರಿಯಲ್ಲಿ 315 ರನ್ಗಳಿಸಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ಭರ್ಜರಿ 129 ರನ್ಗಳಿಸುವ ಮೂಲಕ ಐತಿಹಾಸಿಕ ಮೈದಾನದಲ್ಲಿ ಶತಕದ ಸಾಧನೆ ಮಾಡಿದ್ದರು. ಹೀಗಾಗಿ ಅತ್ಯುತ್ತಮ ಫಾರ್ಮ್ನಲ್ಲಿರುವ ರಾಹುಲ್ ಕಿವೀಸ್ ವಿರುದ್ಧದ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವುದು ಬಹುತೇಕ ಪಕ್ಕಾ.
ಮಯಾಂಕ್ ಅಗರ್ವಾಲ್ ಮಧ್ಯೆ ಪೈಪೋಟಿ
ಈ ಸರಣಿಯಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿರುವ ಕಾರಣದಿಂದಾಗಿ ಆರಂಭಿಕನಾಗಿ ಕಣಕ್ಕಿಳಿಯಲು ಮೂವರ ಮಧ್ಯೆ ಎರಡು ಸ್ಥಾನಕ್ಕೆ ಸ್ಪರ್ಧೆಯಿದೆ. ಅದರಲ್ಲೂ ಕೆಎಲ್ ರಾಹುಲ್ ಒಂದು ತುದಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಹೀಗಾಗಿ ಮತ್ತೊಂದು ಸ್ಥಾನಕ್ಕಾಗಿ ಮಯಾಂಕ್ ಅಗರ್ವಾಲ್ ಹಾಗೂ ಶುಬ್ಮನ್ ಗಿಲ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರಕಾರ ಮಯಾಂಕ್ ಅಗರ್ವಾಲ್ ಆರಂಭಿಕನಾಗಿ ಕೆಎಲ್ ರಾಹುಲ್ ಜೊತೆಗೆ ಕಣಕ್ಕಿಳಿಯಲು ಸೂಕ್ತ ಆಯ್ಕೆಯಾಗಲಿದ್ದಾರೆ. ಶುಬ್ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಉತ್ತಮ ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಮುಂದಿವರಿದು ಮಾತನಾಡಿದ ಗಂಭೀರ್ ಟೀಮ್ ಇಂಡಿಯಾದ ನಾಯಕನಾಗಿ ಮೊದಲ ಟೆಸ್ಟ್ಗೆ ರಹಾನೆ ಆಯ್ಕೆಯಾಗಿರುವ ಕಾರಣದಿಮದಾಗಿ ಅವರಿಗೆ ಮತ್ತೊಂದು ಅವಕಾಶ ದೊರೆತಿದೆ. ಈ ಅವಕಾಶವನ್ನು ಅವರು ಅತ್ಯಂತ ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ. ಕಳೆದ ಹಲವು ಪಂದ್ಯಗಳಲ್ಲಿ ಅಜಿಂಕ್ಯಾ ರಹಾನೆ ಬ್ಯಾಟಿಂಗ್ನಲ್ಲಿ ಭಾರೀ ವೈಫಲ್ಯವನ್ನು ಅನುಭವಿಸಿದ್ದಾರೆ. ಹೀಗಾಗಿ ರಹಾನೆ ಬದಲಿಗೆ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಜೋರಾಗಿ ಕೇಳಿಬಂದಿತ್ತು.