ಜಡೇಜಾ ಅವರನ್ನು ತಂಡ ಮಿಸ್ ಮಾಡಿಕೊಳ್ಳಲಿದೆ
"ವಿರಾಟ್ ಕೊಹ್ಲಿ ಆಡುವ ಬಳಗಕ್ಕೆ ಸೇರಿಕೊಂಡರು ರಹಾನೆ ಹೊರಗುಳಿದರು. ಹೀಗಾಗಿ ಶ್ರೇಯಸ್ ಐಯ್ಯರ್ ತಂಡದಲ್ಲಿಯೇ ಉಳಿದಿದ್ದಾರೆ. ಆರಂಭಿಕರು ಇಬ್ಬರು ಕೂಡ ಮುಂದುವರಿದಿದ್ದಾರೆ ನಿಜಕ್ಕೂ ಇದು ಉತ್ತಮವಾದ ಸಂಗತಿ. ಆದರೆ ಜಡೇಜಾ ಅವರನ್ನು ಮಾತ್ರ ತಂಡ ಮಿಸ್ ಮಾಡಿಕೊಳ್ಳಲಿದೆ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಆರಂಭವನ್ನು ನೀಡುವ ಇಶಾಂತ್ ಶರ್ಮಾ ಕೂಡ ಹೊರಗುಳಿದಿದ್ದು ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಸೇರ್ಪಡೆಯಾಗಿದ್ದಾರೆ" ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.
ಜಡೇಜಾಗೆ ಪರ್ಯಾಯ ಆಟಗಾರನಿಲ್ಲ
"ರವೀಂದ್ರ ಜಡೇಜಾ ಅವರ ಬಗ್ಗೆ ಮಾತನಾಡುವುದಾದರೆ ಆತನ ರೀತಿ ವಿಶ್ವದಲ್ಲಿ ಯಾರೂ ಕೂಡ ಇಲ್ಲ. ಆತನಿಗೆ ನೀವು ಬದಲಿಯಾಗಿ ಇನ್ನೊಬ್ಬ ಆಟಗಾರನನ್ನು ನೀಡಲು ಸಾಧ್ಯವಿಲ್ಲ. ಆತನೋರ್ವ ಮೂರು ಆಯಾಮದ ಆಟಗಾರ, ಬ್ಯಾಟಿಂಗ್ ಬೌಲಿಂಗ್ ಜೊತೆಗೆ ಫೀಲ್ಡಿಂಗ್ನಲ್ಲಿಯೂ ಅಮೋಘ ಪ್ರದರ್ಶನ ನೀಡುತ್ತಾರೆ. ಅವರ ಅಲಭ್ಯತೆಯಲ್ಲಿ ನೀವು ನಿಮ್ಮಲ್ಲಿನ ಗರಿಷ್ಠ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಿದೆ. ಜಯಂತ್ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಅಲ್ಲದೆ ಎದುರಾಳಿ ತಂಡದಲ್ಲಿ ಎಡಗೈ ಆಟಗಾರರು ಹೆಚ್ಚಾಗಿರುವ ಸಂದರ್ಭದಲ್ಲಿ ಅವರ ಪ್ರದರ್ಶನ ತಂಡಕ್ಕೆ ಬಹಳ ಮುಖ್ಯವಾಗಲಿದೆ. ಆದರೆ ರವೀಂದ್ರ ಜಡೇಜಾ ಅವರ ಅಲಭ್ಯತೆ ಈ ಪಂದ್ಯದಲ್ಲಿ ತಂಡಕ್ಕೆ ಬಹಳ ಕಾಡಲಿದೆ" ಎಂದಿದ್ದಾರೆ ಮಾಜಿ ಆರಂಭಿಕ ಆಟಗಾರ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ.
ತಡವಾಗಿ ಆರಂಭವಾದ ಪಂದ್ಯ
ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ತಡವಾಗಿ ಆರಂಭವಾಯಿತು. ಮಳೆ ಸುರಿದ ಪರಿಣಾಮವಾಗಿ ಮೈದಾನ ತೇವದಿಂದ ಕೂಡಿತ್ತು. ಹೀಗಾಗಿ ಭೋಜನ ವಿರಾಮದ ಬಳಿಕ ಪಂದ್ಯವನ್ನು ಆರಂಭಿಸಲಾಗಿದೆ.
ಆಘಾತ ನೀಡಿದ ಅಜಾಜ್
ಇನ್ನು ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿತು. ಮೊದಲ ವಿಕೆಟ್ಗೆ ಮಯಾಂಕ್ ಅಗರ್ವಾಲ್ ಹಾಗೂ ಶುಬ್ಮನ್ ಗಿಲ್ 80 ರನ್ಗಳ ಕೊಡುಗೆ ನೀಡಿದರು. ಆದರೆ ಈ ಜೋಡಿ ಬೇರ್ಪಟ್ಟ ನಂತರ ಟೀಮ್ ಇಂಡಿಯಾ ಆಘಾತ ಅನುಭವಿಸಿತು. ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿದರು. ಈ ಮೂಲಕ ಭಾರತ 80 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ಶ್ರೇಯಸ್ ಐಯ್ಯರ್ ಕೂಡ 18 ರನ್ಗಳಿಸಿ ವಿಕೆಟ್ ಕಳೆದುಕೊಂಡರು. ಈ ನಾಲ್ಕುಯ ವಿಕೆಟ್ ಕೂಡ ಅಜೀಜ್ ಪಾಲಾಯಿತು.