ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇಂದು ( ಡಿಸೆಂಬರ್ 3 ) ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದ ಮೊದಲನೇ ದಿನ ಪಿಚ್ ಒದ್ದೆಯಾಗಿದ್ದ ಕಾರಣ ಮಧ್ಯಾಹ್ನ 12 ಗಂಟೆಯ ನಂತರ ಪಂದ್ಯ ಆರಂಭವಾಯಿತು. ಹೌದು, ಮುಂಬೈ ನಗರದಲ್ಲಿ ಕಳೆದೆರಡು ದಿನಗಳಲ್ಲಿ ಸುರಿದ ನಿರಂತರ ಮಳೆಯಿಂದ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಒದ್ದೆಯಾದ ಪರಿಣಾಮ ಪಂದ್ಯ ತಡವಾಗಿ ಆರಂಭವಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡರು.
SRH ಇಲ್ಲದಿದ್ದರೆ ವಾರ್ನರ್ ಕ್ರಿಕೆಟ್ನಲ್ಲಿಯೇ ಇರುತ್ತಿರಲಿಲ್ಲ; SRH ಮಾಡಿದ್ದ ಸಹಾಯ ಬಿಚ್ಚಿಟ್ಟ ಪಠಾಣ್
ಹೀಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಮಯಾಂಕ್ ಅಗರ್ವಾಲ್ ಮತ್ತು ಶುಬ್ ಮನ್ ಗಿಲ್ ಕಣಕ್ಕಿಳಿದರು. ಈ ಇಬ್ಬರೂ ಸಹ ಟೀಮ್ ಇಂಡಿಯಾಗೆ ಬೇಕಾಗಿದ್ದ ಉತ್ತಮ ಆರಂಭವನ್ನೇ ಕಟ್ಟಿಕೊಟ್ಟರು. 80 ರನ್ ಆಗುವ ತನಕ ಯಾವುದೇ ವಿಕೆಟ್ ಕಳೆದುಕೊಳ್ಳದೇ ಉತ್ತಮ ಸ್ಥಿತಿಯಲ್ಲಿದ್ದ ಟೀಮ್ ಇಂಡಿಯಾ ಮೊದಲಿಗೆ ಶುಬ್ ಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು. ಶುಬ್ ಮನ್ ಗಿಲ್ 44 ರನ್ ಗಳಿಸಿ ಅಜಜ್ ಪಟೇಲ್ ಎಸೆತದಲ್ಲಿ ರಾಸ್ ಟೇಲರ್ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿಕೊಂಡರೆ, ನಂತರ ಕಣಕ್ಕಿಳಿದ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಸಹ ಶೂನ್ಯ ಸುತ್ತುವ ಮೂಲಕ ವಿಕೆಟ್ ಒಪ್ಪಿಸಿದರು. ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಸಹ ಅಜಜ್ ಪಟೇಲ್ ಅವರಿಗೆ ವಿಕೆಟ್ ಒಪ್ಪಿಸುವ ಮೂಲಕ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ವಿಫಲತೆಯಿಂದ ಒತ್ತಡಕ್ಕೆ ಸಿಲುಕಿತು.
ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಬಿಟ್ಟದ್ದು ನೀತಿಗೆಟ್ಟ ಕೆಲಸ ಎಂದು ಕಿಡಿಕಾರಿದ ಮಾಲೀಕರು!
ನಂತರ ಕಣಕ್ಕಿಳಿದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಹೀರೋ ಶ್ರೇಯಸ್ ಅಯ್ಯರ್ 18 ರನ್ ಗಳಿಸಿ ಅಜಾಜ್ ಪಟೇಲ್ ಅವರಿಗೆ ವಿಕೆಟ್ ನೀಡಿದರು. ಹೀಗೆ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರು ಸಾಲುಸಾಲಾಗಿ ವಿಕೆಟ್ ಕಳೆದುಕೊಳ್ಳುತ್ತಾ ಇದ್ದರೆ ಅತ್ತ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಮಾತ್ರ ಅಮೋಘ ಶತಕ ಸಿಡಿಸಿ ಮೊದಲನೇ ದಿನದಾಟದಂತ್ಯಕ್ಕೆ ಅಜೇಯ 120 ರನ್ ಗಳಿಸಿದ್ದಾರೆ. ಇನ್ನು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ವೃದ್ಧಿಮಾನ್ ಸಹಾ 53 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದ್ದಾರೆ.
ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಮೊದಲನೇ ದಿನದಾಟದಂತ್ಯಕ್ಕೆ 246 ಎಸೆತಗಳನ್ನು ಎದುರಿಸಿ ಅಜೇಯ 120 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ಅವರ ಈ ಇನ್ನಿಂಗ್ಸ್ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ ಕೂಡ ಸೇರಿವೆ.
ಅತ್ತ ನ್ಯೂಜಿಲೆಂಡ್ ತಂಡದ ಪರ ಬೌಲಿಂಗ್ ಮಾಡಿದ 6 ಬೌಲರ್ಗಳ ಪೈಕಿ ಅಜಾಜ್ ಪಟೇಲ್ ಮಾತ್ರ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. 29 ಓವರ್ ಬೌಲಿಂಗ್ ಮಾಡಿದ ಅಜಾಜ್ ಪಟೇಲ್ 10 ಮೇಡನ್ ಓವರ್ ಸಹಿತ 73 ರನ್ ನೀಡಿ ಟೀಮ್ ಇಂಡಿಯಾದ 4 ವಿಕೆಟ್ ಪಡೆದರು. ಹೌದು, ಮೊದಲನೇ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ ಕಳೆದುಕೊಂಡ ಎಲ್ಲಾ ವಿಕೆಟ್ಗಳನ್ನೂ ಅಜಾಜ್ ಪಟೇಲ್ ಅವರೇ ಪಡೆದುಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಅಜಾಜ್ ಪಟೇಲ್ ಎಸೆತಕ್ಕೆ ವಿರಾಟ್ ಕೊಹ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಇದು ಔಟ್ ಅಲ್ಲ ನಾಟೌಟ್ ಎಂಬ ವಾದ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಚೆಂಡು ವಿರಾಟ್ ಕೊಹ್ಲಿ ಕಾಲಿನ ಪ್ಯಾಡ್ಗೆ ತಾಕುವ ಮುನ್ನ ಬ್ಯಾಟ್ ತಾಕಿತ್ತು ಎಂಬ ವಾದವನ್ನು ನೆಟ್ಟಿಗರು ಮಾಡುತ್ತಿದ್ದಾರೆ. ಹೌದು, ವಿರಾಟ್ ಕೊಹ್ಲಿಯ ವಿಕೆಟ್ ಕುರಿತಾಗಿ ಮೂರನೇ ಅಂಪೈರ್ ನೀಡಿರುವ ತೀರ್ಪು ಇದೀಗ ಭಾರೀ ವಿವಾದವನ್ನು ಎಬ್ಬಿಸುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಕೇಂದ್ರವಾಗಿದೆ.
ಅಂದು 1 ಕೋಟಿ, ಈಗ 12 ಕೋಟಿ; ಕಳೆದ ಆವೃತ್ತಿಗಿಂತ ಈ ಆವೃತ್ತಿಯಲ್ಲಿ ಹೆಚ್ಚು ಹಣ ಪಡೆದ 5 ಆಟಗಾರರು
ಹೀಗೆ ಮೊದಲನೇ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ. ತಂಡದ ಮಧ್ಯಮ ಕ್ರಮಾಂಕದ ಆಟಗಾರರು ಕೈ ಕೊಟ್ಟರೂ ಸಹ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರ ಅಮೋಘ ಶತಕದ ನೆರವಿನಿಂದ ಸದ್ಯ ಟೀಮ್ ಇಂಡಿಯಾ ಉತ್ತಮ ಹಂತದಲ್ಲಿದೆ ಎಂದೇ ಹೇಳಬಹುದು.