ರಾಹುಲ್ಗೆ ಸಾಥ್ ನೀಡಿದ ಮನೀಶ್:
ನಾಲ್ಕನೇ ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಕೆ.ಎಲ್ ರಾಹುಲ್ ಅವರನ್ನು ಮನೀಶ್ ಪಾಂಡೆ ಕೂಡಿಕೊಂಡರು. ಈ ವೇಳೆ ಈ ಇಬ್ಬರು ಆಟಗಾರರು ಕನ್ನಡದಲ್ಲೇ ಪರಸ್ಪರ ಮಾತನಾಡಿಕೊಂಡಿರುವುದು ಸ್ಟಂಪ್ ಮೈಕ್ನಲ್ಲಿ ದಾಖಲಾಗಿ ಟಿ.ವಿ ವೀಕ್ಷಕರಿಗೆ ತಲುಪಿದೆ.
'ಬೇಡ ಬೇಡ' ಎಂದ ರಾಹುಲ್:
ಮನೀಶ್ ಪಾಂಡೆ ಚೆಂಡನ್ನು ತಳ್ಳಿ ಒಂಟಿ ರನ್ಗೆ ಓಡಲು ಮುಂದಾಗುತ್ತಾರೆ. ಈ ವೇಳೆ ನಾನ್ ಸ್ಟ್ರೈಕ್ನಲ್ಲಿದ್ದ ಕೆ.ಎಲ್ ರಾಹುಲ್ ಮನೀಶ್ ಪಾಂಡೆಗೆ 'ಬೇಡ ಬೇಡ' ಎಂದು ಜೋರಾಗಿ ಕೂಗಿ ಹೇಳುತ್ತಾರೆ. ಇದು ಸ್ಟಂಪ್ ಮೈಕ್ನಲ್ಲಿ ದಾಖಲಾಗಿ ಕನ್ನಡಿಗರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ರಾಹುಲ್ ಮತ್ತು ಮನೀಶ್ ಆಪ್ತ ಸ್ನೇಹಿತರು:
ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಇಬ್ಬರೂ ಉತ್ತಮ ಸ್ನೇಹಿತರು. ಕರ್ನಾಟಕ ತಂಡದ ಆಧಾರಸ್ತಂಭವಾಗಿದ್ದ ಇಬ್ಬರೂ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಮನೀಶ್ ಪಾಂಡೆ ಈ ಹಿಂದೆಯೂ ಪಂದ್ಯದ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದಿದ್ದರು. ಮೊದಲೆರಡು ಪಂದ್ಯಗಳಲ್ಲಿ ಮನೀಶ್ ಪಾಂಡೆಯನ್ನು ತಂಡದಿಂದ ಹೊರಗಿಡಲಾಗಿತ್ತು.
ಮೂವರು ಕನ್ನಡಿಗರು ಕಣದಲ್ಲಿ:
ಮತ್ತೋರ್ವ ಆಟಗಾರ ಮಯಾಂಕ್ ಅಗರ್ವಾಲ್ ಟೀಮ್ ಇಂಡಿಯಾದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಮತ್ತೋರ್ವ ಆಟಗಾರ. ಸರಣಿಯ ಮೂರೂ ಪಂದ್ಯಗಳಲ್ಲಿ ಮಯಾಂಕ್ ಅಗರ್ವಾಲ್ ಪೃಥ್ವಿ ಶಾ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಶತಕ ಸಿಡಿಸಿದ ರಾಹುಲ್, ಅರ್ಧ ಶತಕದಂಚಿನಲ್ಲಿ ಎಡವಿದ ಮನೀಶ್:
ಇಂದಿನ ಪಂದ್ಯದ ಪ್ರಮುಖ ಆಕರ್ಷಣೆ ರಾಹುಲ್ ಮನಮೋಹಕ ಆಟ. ಮೊದಲಿಗೆ ಶ್ರೇಯಸ್ ಅಯ್ಯರ್ ಜೊತೆ ಉತ್ತಮ ಆಟವಾಡಿದ ರಾಹುಲ್ ಬಳಿಕ ಮನೀಶ್ ಪಾಂಡೆ ಜೊತೆ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಕೆ.ಎಲ್ ರಾಹುಲ್ 112 ರನ್ ದಾಖಲಿಸಿದರೆ, ಮನೀಶ್ ಪಾಂಡೆ 42 ರನ್ಗೆ ವಿಕೆಟ್ ಒಪ್ಪಿಸಿದರು.