ನಾಟಿಂಗ್ಹ್ಯಾಮ್, ಜೂನ್ 14 : ಇಡೀ ರಾತ್ರಿ ಸೂರ್ಯ ನಿಗಿನಿಗಿ ಬೆಳಗಿದ್ದರೆ ಮಾತ್ರ ಟ್ರೆಂಟ್ ಬ್ರಿಜ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯುವ ಸಾಧ್ಯತೆ ಇತ್ತು. ಪಂದ್ಯ ನಡೆಯುವ ಸಾಧ್ಯತೆ ಇರದಿದ್ದರಿಂದ ಎರಡೂ ತಂಡಗಳು ಅಂಕವನ್ನು ಇಬ್ಭಾಗಿಸಿಕೊಳ್ಳಬೇಕಾಯಿತು. ಇದರಿಂದಾಗಿ ಸದ್ಯಕ್ಕೆ ಇವೆರಡೇ ತಂಡಗಳು ಸೋಲು ಕಾಣದೆ ಉಳಿಯುವಂತಾಯಿತು.
ಮಳೆ ಈಗ ನಿಲ್ಲಬಹುದಾ, ಆಗ ನಿಲ್ಲಬಹುದಾ ಎಂದು ಜಿಟಿಜಿಟಿ ಮಳೆಯ ನಡುವೆ ತಳೆಯ ಮೇಲೆ ಛತ್ರಿ ಹಿಡಿದು ಸುದೀರ್ಘ ಕಾಲ ಕಾಯದೆ, ಇಂಥ ಮಳೆಯ ದಿನಗಳಲ್ಲಿ ಬೇರೆ ವಿಧಿಯೇ ಇರುವುದಿಲ್ಲ. ನಿಲ್ಲದ ಮಳೆಯಿಂದಾಗಿ ಪಂದ್ಯ ನಡೆಯುವುದು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ, ಸಾಧ್ಯಾಸಾಧ್ಯತೆಗಳನ್ನು ಪರಿಗಣಿಸಿ, ಕೆಲ ಪ್ರೊಟೋಕಾಲ್ ಗಳನ್ನು ಪಾಲಿಸುವ ಅವಶ್ಯಕತೆ ಇದ್ದಿದ್ದರಿಂದ ಪಂದ್ಯ ರದ್ದುಪಡಿಸುವುದು ಕೂಡ ತಡವಾಯಿತು.
ವಿಶ್ವಕಪ್: ಮಳೆಗೆ ಕೊಚ್ಚಿಹೋದ ಭಾರತ vs ನ್ಯೂಜಿಲೆಂಡ್ ಪಂದ್ಯ
ಅಂಪಾಯರುಗಳಾದ ಮರೈಸ್ ಎರ್ಸ್ಮಸ್ ಮತ್ತು ಪೌಲ್ ರೀಫೆಲ್ ಕನಿಷ್ಠ ಆರು ಬಾರಿಯಾದರೂ ತಮ್ಮ ಕೋಣೆಯಿಂದ ಮೈದಾನಕ್ಕಿಳಿದು ಪರಿಸ್ಥಿತಿ ಅವಲೋಕನೆ ಮಾಡಿದರು. ಮೋಡ ಕವಿದ ವಾತಾವರಣದಲ್ಲಿಯೂ ಕ್ರಿಕೆಟ್ ಆಟ ನಡೆಯುವುದೆಂಬ ಕ್ಷೀಣ ಆಸೆ ಇಟ್ಟುಕೊಂಡು ಬಂದಿದ್ದ ವೀಕ್ಷಕರು ಇವರಿಬ್ಬರೂ ಟ್ರೆಂಟ್ ಬ್ರಿಜ್ ಮೈದಾನಕ್ಕಿಳಿದಾಗಲೆಲ್ಲ ಹರ್ಷೋದ್ಘಾರ ಮಾಡುತ್ತಿದ್ದರು. ಆದರೆ, ಪ್ರತಿಬಾರಿ ಮೈದಾನಕ್ಕಿಳಿದಾಗಲೆಲ್ಲ ಕಾಲಡಿಯ ನೀರಿನ ತೆರೆ ನಿರಾಶೆ ಮೂಡಿಸುತ್ತಿದ್ದವು. ಮತ್ತೊಂದು ಗಂಟೆಯ ನಂತರ ಪರಿಶೀಲಿಸುವುದಾಗಿ ಘೋಷಿಸಿ ಅಂಪಾಯರ್ ಗಳಿಬ್ಬರೂ ವಾಪಸ್ ತೆರಳುತ್ತಿದ್ದುದು ಸಹಜವಾಗಿತ್ತು.
ಬೆಳಿಗ್ಗೆ 9.30ರಿಂದ ಆರಂಭವಾಗಿದ್ದ ಅರ್ಧ ಗಂಟೆ, ಗಂಟೆಗೊಂದರ ಪರಿಶೀಲನೆಯನ್ನು ಸಮಾಪ್ತಿ ಮಾಡಿ, ಕಡೆಗೂ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ರದ್ದಾಗಿದೆ ಎಂದು ಅಧಿಕೃತವಾಗಿ ಘೋಷಿಸಿದರು. ಇದು ಕಳೆದ ನಾಲ್ಕು ದಿನಗಳಲ್ಲಿ ರದ್ದಾಗಿರುವ ಮೂರನೇ ಪಂದ್ಯ. ಇದರಿಂದಾಗಿ ಟೂರ್ನಿಯ ಮೇಲೆಯೇ ಕಾರ್ಮೋಡ ಕವಿದಂತಾಗಿದೆ. ಬೇಸಿಗೆಯಲ್ಲಿಯೂ ಆದಷ್ಟು ಬೇಗ ಸೂರ್ಯ ಬೆಳಗಲಿ ಎಂದು ಆಶಿಸುವಂತಾಗಿದೆ.
ಜುಲೈ 14ರಂದು ಕಪ್ ನನ್ ಕೈಲಿರ್ಬೇಕ್: ಹಾರ್ದಿಕ್ ಪಾಂಡ್ಯ ಹುಮ್ಮಸ್ಸಿನ ನುಡಿ
ಇದರಿಂದಾಗಿ ಆಟಗಾರರೂ ಯಾವುದೇ ಉಪಾಯವಿಲ್ಲದೆ ವಿಶ್ರಮಿಸುವಂತಾಗಿದೆ. ಮೈದಾನವನ್ನು ಸ್ಕೇಟಿಂಗ್ ಆವರಣಕ್ಕೆ ಹೋಲಿಸಿರುವ, ಭಾರತದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರು, ಭಾರತದ ಕ್ರಿಕೆಟ್ ಆಟಗಾರರು ಪರಿಸ್ಥಿತಿಯನ್ನು ತೀರ ಹಗುರವಾಗಿ ತೆಗೆದುಕೊಳ್ಳದಂತೆ, ಒಂದು ವೇಳೆ ಯಾವುದೇ ಕ್ಷಣದಲ್ಲಿ ಪಂದ್ಯ ಆರಂಭವಾದರೂ ತಕ್ಷಣ ಹೊಂದಿಕೊಳ್ಳುವ ರೀತಿಯಲ್ಲಿ ಎಂಗೇಜ್ ಆಗಿ ಇಟ್ಟಿದ್ದರು.
"ಇಂಥ ಮಳೆ ಸುರಿಯುವ ದಿನ ಆಟವಿಲ್ಲದೆ ಸುಮ್ಮನೆ ಕೂಡುವುದು ಬಲು ಕಷ್ಟಕರ. ಪಂದ್ಯಕ್ಕಾಗಿ ತುಡಿಯುತ್ತಿರುವ ಆಟಗಾರರು ಸಂಪೂರ್ಣವಾಗಿ ಸ್ವಿಚ್ ಆಫ್ ಆಗದಂತೆ ನೋಡಿಕೊಳ್ಳುವುದು ಇನ್ನು ಕಷ್ಟಕರ. ಯಾಕೆಂದರೆ, ಯಾವ ಸಮಯದಲ್ಲಿ ಸೂರ್ಯ ಬೆಳಗಿ ಆಟ ಆರಂಭವಾಗುವುದೋ ಯಾರು ಬಲ್ಲರು? ಆದ್ದರಿಂದ ಮಾನಸಿಕವಾಗಿ ಆಟಕ್ಕಾಗಿ ಯಾವುದೇ ಕ್ಷಣ ಸನ್ನದ್ಧರಾಗಿಯೇ ಇರಬೇಕು. ಇದೇ ಸಮಯದಲ್ಲಿ, ಪಂದ್ಯದ ಬಗ್ಗೆ ಅನವಶ್ಯಕವಾದಿ ಚಿಂತೆ ಮಾಡದೆ, ಇಷ್ಟವಾದದ್ದನ್ನು ಓದುತ್ತಲೋ, ಸಂಗೀತ ಕೇಳುತ್ತಲೋ, ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಲೋ ಕಳೆಯಬೇಕಾಗುತ್ತದೆ. ನಾವು ಇದಕ್ಕೆಲ್ಲ ಮಾನಸಿಕವಾಗಿ ಸಿದ್ಧರಾಗಿಯೇ ಇರುತ್ತೇವೆ" ಎಂದು ಹೈದರಾಬಾದ್ ನ ಮಾಜಿ ಎಡಗೈ ಸ್ಪಿನ್ನರ್ ಅಭಿಪ್ರಾಯಪಟ್ಟರು.
ವಿಶ್ವಕಪ್ನಲ್ಲಿ ಆಸೀಸ್ ವೇಗಿ ಕಮಿನ್ಸ್ ಯಶಸ್ಸು ಗಳಿಸುತ್ತಿರುವುದು ಇದರಿಂದ!
ಶ್ರೀಧರ್ ಅವರಂತೆಯೇ ನ್ಯೂಜಿಲೆಂಡ್ ನ ಕೋಚ್ ಗ್ಯಾರಿ ಸ್ಟೆಡ್ ಅವರು, ಇದೇ ರೀತಿ ಅಸಹಾಯಕತೆಯ ಬಗ್ಗೆ ಅನಿಸಿಕೆ ಹಂಚಿಕೊಂಡರು. "ಆಟ ನಡೆದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ಆದರೆ, ಆಟವಾಡಲು ಸಂಪೂರ್ಣವಾಗಿ ಮಾನಸಿಕವಾಗಿ ಸಿದ್ಧರಾಗಿ ಬಂದಿದ್ದಾಗ ಆಟ ನಡೆಯದಿದ್ದರೆ ಬೇಸರವಾಗುತ್ತದೆ. ಆದರೆ, ಯಾವುದೂ ನಮ್ಮ ಕೈಯಲ್ಲಿ ಇರುವುದಿಲ್ಲ. ನಾವು ಏನನ್ನೂ ಮಾಡಲು ಸಾಧ್ಯವಿರುವುದಿಲ್ಲ" ಎಂದು ಗ್ಯಾರಿ ಸ್ಟೆಡ್ ಅನಿಸಿಕೆ ಹಂಚಿಕೊಂಡರು.
ವಿಶ್ವಕಪ್ ಆವೇಗ ಪಡೆಯುತ್ತಿದ್ದ ಹಂತದಲ್ಲಿಯೇ ಆಟಗಾರರ, ಕ್ರಿಕೆಟ್ ಪ್ರೇಮಿಗಳ ಮತ್ತು ಕ್ರಿಕೆಟಿಗೆ ಸಂಬಂಧಿಸಿದ ಎಲ್ಲ ಸಿಬ್ಬಂದಿಗಳ ಆಶೆಗೆ ತಣ್ಣೀರು ಎರಚಿದಂತಾಗಿದೆ. ಕಳೆದ 11 ಆವೃತ್ತಿಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಮಳೆಯಿಂದಾಗಿ ಒಂದು ಚೆಂಡನ್ನೂ ಎಸೆಯದಿದ್ದರಿಂದ ರದ್ದು ಮಾಡಲಾಗಿದೆ. ಈ ವರ್ಷದಲ್ಲಿ ಎದುರಾಳಿಗಳ ನಾಯಕರು ಟಾಸ್ ಗೆ ಕೂಡ ಹೋಗದಂತೆ ಪಂದ್ಯ ರದ್ದಾಗಿರುವುದು ನಿನ್ನೆಯದು ಮೂರನೇಯದು. ಮಂಗಳವಾರ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದಿದ್ದ ಪಂದ್ಯವನ್ನು 7.3 ಓವರ್ ಎಸೆದ ನಂತರ ರದ್ದು ಮಾಡಲಾಗಿತ್ತು. ಈ ವಿಶ್ವಕಪ್ ನಲ್ಲಿ ನಡೆದ 18 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಈಗಾಗಲೆ ಮಳೆಗೆ ಆಹುತಿಯಾಗಿವೆ.
ಆದರೆ, ಅಂಕ ಕಳೆದುಕೊಂಡ ತಂಡಗಳು ಈಗಲೇ ನಿರಾಶರಾಗಬೇಕಿಲ್ಲ. ಇನ್ನೂ ಬೇಕಾದಷ್ಟು ಪಂದ್ಯಗಳು ಬಾಕಿಯಿವೆ. ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಪ್ರತಿಯೊಂದು ತಂಡಗಳು 9 ಪಂದ್ಯಗಳನ್ನು ಆಡಲಿವೆ. ಆದರೆ, ಈಗಾಗಲೆ ಅಂಕ ಕಳೆದುಕೊಂಡ ತಂಡಗಳಿಗೆ ಇದು ಕಡೆಗೆ ಮುಳುವಾದರೂ ಅಚ್ಚರಿಯಿಲ್ಲ. ಏನೇ ಆದರೂ ಈಬಾರಿ ಮಳೆಯ ಆರ್ಭಟ ಜೋರಾಗಿದೆ. ಮುಂದೆ ಕೂಡ ಕೆಲವಾರು ಪಂದ್ಯಗಳು ಮಳೆಗೆ ಆಹುತಿಯಾದರೂ ಅಚ್ಚರಿಪಡಬೇಕಿಲ್ಲ. ಮುಂದಿನ ದಿನಗಳಲ್ಲಿ ವಾತಾವರಣ ತಿಳಿಯಾಗಿ ಎಲ್ಲ ಪಂದ್ಯಗಳೂ ನಡೆದು, ಕ್ರಿಕೆಟ್ ಪ್ರೇಮಿಗಳಿ ರಸದೌತಣ ಬಡಿಸಲು ಎಂದು ಎಲ್ಲರೂ ಆಶಿಸುತ್ತಿದ್ದಾರೆ.
(ಅಂಕಣಕಾರ ಆರ್ ಕೌಶಿಕ್ ಅವರು ಕಳೆದೆರಡು ದಶಕಗಳಿಂದ ಕ್ರೀಡಾ ವರದಿಗಾರಿಕೆಯಲ್ಲಿ ತೊಡಗಿದ್ದು, 7ನೇ ವಿಶ್ವಕಪ್ ಅನ್ನು ಕವರ್ ಮಾಡುತ್ತಿದ್ದಾರೆ.)