1. ಭುವನೇಶ್ವರ್ ಕುಮಾರ್
ಟೀಮ್ ಇಂಡಿಯಾದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಈ ವರ್ಷ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ 11 ಪಂದ್ಯಗಳನ್ನಾಡಿದ ಭುವನೇಶ್ವರ್ ಕುಮಾರ್ ಕೇವಲ 6 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು. ಹಾಗೂ ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಕ್ಕರೂ ಸಹ ಭುವನೇಶ್ವರ್ ಕುಮಾರ್ ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗೆ ಈ ವರ್ಷ ಕಳಪೆ ಪ್ರದರ್ಶನ ನೀಡುತ್ತಾ ಬಂದಿರುವ ಭುವನೇಶ್ವರ್ ಕುಮಾರ್ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಆಯ್ಕೆಯಾಗಿದ್ದು ಈ ಸರಣಿಯಲ್ಲಿಯೂ ಕಳಪೆ ಪ್ರದರ್ಶನ ನೀಡಿದರೆ ತಂಡದಲ್ಲಿ ಅವಕಾಶ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಹಾಗೂ ಭುವನೇಶ್ವರ್ ಕುಮಾರ್ ಬದಲು ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ರೀತಿಯ ಆಟಗಾರರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಭುವನೇಶ್ವರ್ ಕುಮಾರ್ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾಗಿದೆ.
2. ಅಕ್ಷರ್ ಪಟೇಲ್
ಈ ವರ್ಷ ಅಕ್ಷರ್ ಪಟೇಲ್ ಸಿಕ್ಕ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಪ್ರದರ್ಶನವನ್ನು ನೀಡಿ ಮಿಂಚಿದ್ದರು. ವರ್ಷದ ಆರಂಭದಲ್ಲಿ ಭಾರತ ಪ್ರವಾಸವನ್ನು ಕೈಗೊಂಡಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಹಾಗೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಮಿಂಚಿದ ಅಕ್ಷರ್ ಪಟೇಲ್ 12 ಪಂದ್ಯಗಳನ್ನಾಡಿ 15 ವಿಕೆಟ್ ಪಡೆದಿದ್ದರು. ಹೀಗೆ ಸಾಲುಸಾಲಾಗಿ ಉತ್ತಮ ಪ್ರದರ್ಶನವನ್ನು ನೀಡಿದರೂ ಸಹ ಅಕ್ಷರ್ ಪಟೇಲ್ ಅವರಿಗೆ ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಮಾತ್ರ ಸಿಗುತ್ತಿಲ್ಲ. ಇದಕ್ಕೆ ಕಾರಣ ತಂಡದಲ್ಲಿರುವ ಮತ್ತೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ. ಹೌದು, ರವೀಂದ್ರ ಜಡೇಜಾ ತಂಡದಲ್ಲಿರುವಾಗ ಅಕ್ಷರ್ ಪಟೇಲ್ ಸ್ಥಾನ ಗಿಟ್ಟಿಸಿಕೊಳ್ಳುವುದು ತೀರಾ ಕಷ್ಟದ ಕೆಲಸವಾಗಿದೆ. ಇನ್ನು ಈಗಾಗಲೇ ಈ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಕೂಡ ಪೈಪೋಟಿಗಿಳಿದಿದ್ದು, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಒಂದುವೇಳೆ ಕಳಪೆ ಪ್ರದರ್ಶನ ನೀಡಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿವೆ.
3. ಅಜಿಂಕ್ಯ ರಹಾನೆ
ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಜಿಂಕ್ಯ ರಹಾನೆ ಟೆಸ್ಟ್ ಪಂದ್ಯಗಳಲ್ಲಿ ತೀರಾ ಮಂಕಾಗಿರುವುದು ಸತ್ಯ. ಕಳೆದೆರಡು ವರ್ಷಗಳಲ್ಲಿ ಅಜಿಂಕ್ಯ ರಹಾನೆ ನೀಡಿರುವ ಉತ್ತಮ ಪ್ರದರ್ಶನದ ಆಧಾರದ ಮೇಲೆ ಪದೇ ಪದೇ ಅವಕಾಶಗಳನ್ನು ನೀಡಲಾಗುತ್ತಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಅಜಿಂಕ್ಯಾ ರಹಾನೆ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದರೆ ತಂಡದಿಂದ ಹೊರಗುಳಿಯುವ ಸಾಧ್ಯತೆಗಳು ಎದುರಾಗಲಿವೆ. ಹೌದು ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು ಅಜಿಂಕ್ಯ ರಹಾನೆ ಕಳಪೆ ಫಾರ್ಮ್ ಮುಂದುವರಿಸಿದರೆ ಆಯ್ಕೆಗಾರರು ಶುಬ್ ಮನ್ ಗಿಲ್ ಮತ್ತು ಹನುಮ ವಿಹಾರಿ ರೀತಿಯ ಯುವ ಕ್ರಿಕೆಟಿಗರಿಗೆ ಮಣೆ ಹಾಕುವುದಂತೂ ಖಚಿತ. ಹೀಗಾಗಿ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಅಜಿಂಕ್ಯ ರಹಾನೆ ಭದ್ರಪಡಿಸಿಕೊಳ್ಳಬೇಕಾದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
4. ವೃದ್ದಿಮಾನ್ ಸಹಾ
ಎಂಎಸ್ ದೋನಿ ನಿವೃತ್ತಿಯ ನಂತರ ವೃದ್ಧಿಮನ್ ಸಹಾ ಟೀಮ್ ಇಂಡಿಯಾದ ಮುಂದಿನ ಖಾಯಂ ವಿಕೆಟ್ ಕೀಪರ್ ಎಂದೇ ಹೇಳಲಾಗುತ್ತಿತ್ತು. ಆದರೆ ರಿಷಭ್ ಪಂತ್ ಆಗಮನದ ನಂತರ ಈ ಊಹೆಗಳೆಲ್ಲಾ ತಲೆಕೆಳಗಾಯಿತು. ವೃದ್ಧಿಮಾನ್ ಸಹಾ ಅವಕಾಶಗಳಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಆಗಾಗ ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ವೃದ್ದಿಮಾನ್ ಸಹಾ ಸದ್ಯ ಯುವ ಆಟಗಾರರ ಆಗಮನದಿಂದ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವೃದ್ಧಿಮಾನ್ ಸಹಾ ಜತೆಗೆ ಯುವ ಆಟಗಾರ ಕೆ ಎಸ್ ಭರತ್ ಕೂಡ ಅವಕಾಶವನ್ನು ಪಡೆದುಕೊಂಡಿದ್ದಾರೆ. ಕೆ ಎಸ್ ಭರತ್ ವಿಕೆಟ್ ಕೀಪರ್ ಆಗಿರುವ ಕಾರಣದಿಂದಾಗಿ ವೃದ್ಧಿಮಾನ್ ಸಹಾ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಿದೆ. ಇಲ್ಲದಿದ್ದರೆ ಮುಂದಿನ ಸರಣಿಗಳಲ್ಲಿ ವೃದ್ಧಿಮಾನ್ ಸಹಾ ಬದಲು ಕೆಎಸ್ ಭರತ್ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆಗಳು ದೊಡ್ಡ ಮಟ್ಟದಲ್ಲಿವೆ.
5. ರವಿಚಂದ್ರನ್ ಅಶ್ವಿನ್
2017ರ ಚಾಂಪಿಯನ್ಸ್ ಟ್ರೋಫಿ ನಂತರ ರವಿಚಂದ್ರನ್ ಅಶ್ವಿನ್ ನಿಯಮಿತ ಓವರ್ಗಳ ಕ್ರಿಕೆಟ್ನಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ. ಆದರೆ ವಾಷಿಂಗ್ಟನ್ ಸುಂದರ್ ಗಾಯಕ್ಕೊಳಗಾಗಿರುವ ಕಾರಣದಿಂದಾಗಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರವಿಚಂದ್ರನ್ ಅಶ್ವಿನ್ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಹಾಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರವಿಚಂದ್ರನ್ ಅಶ್ವಿನ್ ದೊಡ್ಡ ಮಟ್ಟದ ಪ್ರದರ್ಶನವನ್ನೇನೂ ನೀಡದೆ ಮಂಕಾಗಿದ್ದರು ಹಾಗೂ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕೂಡ ಅಶ್ವಿನ್ ಹೆಚ್ಚಾಗಿ ಮಿಂಚಲಿಲ್ಲ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಉತ್ತಮ ಪ್ರದರ್ಶನ ನೀಡಲೇಬೇಕಾಗಿದೆ. ಇನ್ನು ತಂಡದಲ್ಲಿ ಸ್ಪಿನ್ ಬೌಲರ್ಗಳಾದ ಯುಜುವೇಂದ್ರ ಚಹಲ್ ಮತ್ತು ಅಕ್ಷರ್ ಪಟೇಲ್ ಇದ್ದು, ರವಿಚಂದ್ರನ್ ಅಶ್ವಿನ್ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.