ದುಬೈ, ಸೆಪ್ಟೆಂಬರ್ 19: ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಟದ 5ನೇ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 8 ವಿಕೆಟ್ ಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮ ಅರ್ಧ ಶತಕ (52) ಮತ್ತು ಶಿಖರ್ ಧವನ್ 46 ರನ್ ನೆರವಿನಿಂದ ಭಾರತ ಏಷ್ಯಾ ಕಪ್ ದ್ವಿತೀಯ ಸೆಣಸಾಟದಲ್ಲಿ ಮುನ್ನಡೆ ಪಡೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿದ್ದ ಪಾಕಿಸ್ತಾನ 43.1 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 162 ರನ್ ಪೇರಿಸಿ ಭಾರತಕ್ಕೆ 163 ರನ್ ಗುರಿ ನೀಡಿತ್ತು. ಬಾಬರ್ ಅಝಮ್ 47, ಶೋಯೆಬ್ ಮಲ್ಲಿಕ್ 43 ರನ್ ಪೇರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ ಗಳ ಬೆಂಬಲ ಪಾಕ್ ಗೆ ದೊರೆಯಲಿಲ್ಲ.
ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಪಾಕಿಸ್ತಾನ ನೀಡಿದ 163 ಸಾಧಾರಣ ರನ್ ಗುರಿ ಬೆನ್ನಟ್ಟಿದ ಭಾರತ 29 ಓವರ್ ನಲ್ಲಿ 2 ವಿಕೆಟ್ ಕಳೆದು 164 ರನ್ ಪೇರಿಸಿ ಗೆಲುವನ್ನಾಚರಿಸಿತು. ಪಾಕಿಸ್ತಾನ ಇನ್ನಿಂಗ್ಸ್ ವೇಳೆ 18ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಗಾಯಕ್ಕೀಡಾಗಿ ಮೈದಾನದಿಂದ ಹೊರ ನಡೆಯಬೇಕಾಗಿ ಬಂತು.
ಪಾಕಿಸ್ತಾನದ ಇನ್ನಿಂಗ್ಸ್ ವೇಳೆ ಭಾರತದ ಭುವನೇಶ್ವರ್ ಕುಮಾರ್ ಮತ್ತು ಕೆದಾರ್ ಜಾಧವ್ ತಲಾ ಮೂರು ವಿಕೆಟ್ ಮತ್ತು ಜಸ್ ಪ್ರೀತ್ ಬೂಮ್ರಾ ಎರಡು ವಿಕೆಟ್ ಉರುಳಿಸಿ ಕಾಡಿದರು.
ಲಂಡನ್ ನ ಓವಲ್ ಸ್ಟೇಡಿಯಂನಲ್ಲಿ 18 ಜೂನ್ 2017ರಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಕೊನೆಯ ಬಾರಿ ಪರಸ್ಪರ ಸೆಣಸಾಟ ನಡೆಸಿದ್ದವು. ಅದಾಗಿ ಮತ್ತೆ ಬುಧವಾರ (ಸೆಪ್ಟೆಂಬರ್ 19) ಇತ್ತಂಡಗಳು ಸವಾಲು ಸ್ವೀಕರಿಸಿದ್ದವು.
ಈ ಏಷ್ಯಕಪ್ ನಲ್ಲಿ ಹಾಕಾಂಗ್ ಎದುರು ಮೊದಲ ಪಂದ್ಯವಾಡಿದ್ದ ಭಾರತ ಹೊಸ ತಂಡದೆದುರು ಕಷ್ಟದಲ್ಲಿ (26 ರನ್ ಜಯ) ಪಂದ್ಯ ಗೆದ್ದುಕೊಂಡಿತ್ತು. ಕ್ರಿಕೆಟ್ ಶಿಶು ಹಾಂಕಾಂಗ್ ಎದುರು ಸುಲಭ ಜಯ ಸಾಧಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಭಾರತವನ್ನು ಹಾಂಕಾಂಗ್ ನ ದಿಟ್ಟ ಆಟ ಕಂಗೆಡಿಸಿತ್ತು.
ಬಹು ದಿನಗಳ ನಂತರ ಇಂದು ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಈ ಪಂದ್ಯದೊಂದಿಗೆ ಏಷ್ಯಾಕಪ್ ನಲ್ಲಿ ಈವರೆಗಿನ ಇತ್ತಂಡಗಳ 12 ಮುಖಾಮುಖಿಯಲ್ಲಿ ಭಾರತ 7 ಸಾರಿ, ಪಾಕಿಸ್ತಾನ 4 ಸಾರಿ ಜಯ ಸಾಧಿಸಿದಂತಾಗಿದೆ. ಒಂದು ಪಂದ್ಯ ಮಳೆಯ ಕಾರಣ ರದ್ದಾಗಿತ್ತು.