ಕೊಹ್ಲಿ ಮತ್ತು ರಾಹುಲ್ ನಡುವೆ ವೈಮನಸ್ಸು ಮೂಡಿದಂತಿದೆ ಎಂದ ಕನೇರಿಯಾ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಹಲವು ವರ್ಷಗಳ ನಂತರ ವಿರಾಟ್ ಕೊಹ್ಲಿ ತಂಡದ ಓರ್ವ ಆಟಗಾರನಾಗಿ ಕಣಕ್ಕಿಳಿದರು. ಅತ್ತ ಕೆ ಎಲ್ ರಾಹುಲ್ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದರು. ಈ ಪಂದ್ಯದ ವೇಳೆ ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ನಲ್ಲಿ ತಂಡ ಇಬ್ಭಾಗವಾಗಿತ್ತು ಎಂದು ಕನೇರಿಯಾ ಹೇಳಿದ್ದಾರೆ. ವಿರಾಟ್ ಕೊಹ್ಲಿ ಬಳಗ ಒಂದೆಡೆ ಕುಳಿತಿದ್ದರೆ ರಾಹುಲ್ ಬಳಗ ಮತ್ತೊಂದೆಡೆ ಕುಳಿತಿತ್ತು, ಒಟ್ಟಿನಲ್ಲಿ ಟೀಮ್ ಇಂಡಿಯಾ ಇಬ್ಭಾಗವಾಗಿದೆ ಹಾಗೂ ಕೊಹ್ಲಿ ಈ ವೇಳೆ ನಾಯಕ ರಾಹುಲ್ ಪಕ್ಕವೂ ಕೂಡ ಸುಳಿಯಲಿಲ್ಲ ಎಂದು ದನೀಶ್ ಕನೇರಿಯಾ ಅನುಮಾನ ಪಟ್ಟಿದ್ದಾರೆ.
ಕೊಹ್ಲಿ ನಾಯಕನಾಗಿದ್ದಾಗ ತೋರಿಸುತ್ತಿದ್ದ ಆಸಕ್ತಿಯನ್ನು ತೋರಲಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ದನೀಶ್ ಕನೇರಿಯಾ ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ತೋರಿಸುತ್ತಿದ್ದ ಆಸಕ್ತಿ ಆಟಗಾರನಾಗಿ ಕಣಕ್ಕಿಳಿದ ನಂತರ ಕಾಣ ಸಿಗಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಕೊಹ್ಲಿ ನಾಯಕನಾಗಿದ್ದಾಗ ಮೈದಾನದಲ್ಲಿ ಮಾತ್ರವಲ್ಲದೇ ಪೆವಿಲಿಯನ್ ಒಳಗೂ ಕೂಡ ಉತ್ಸುಕರಾಗಿ ಇತರೆ ಆಟಗಾರರನ್ನು ಹುರಿದುಂಬಿಸುತ್ತಿದ್ದರು ಆದರೆ ಈ ಪಂದ್ಯದಲ್ಲಿ ಅದು ಕಾಣ ಸಿಗಲಿಲ್ಲ ಎಂದು ದನೀಶ್ ಕನೇರಿಯಾ ಹೇಳಿದ್ದಾರೆ.
ರಾಹುಲ್ ನಾಯಕತ್ವದಲ್ಲಿ ಎನರ್ಜಿ ಇಲ್ಲ
ಇನ್ನು ಕೆಎಲ್ ರಾಹುಲ್ ನಾಯಕತ್ವದ ಕುರಿತು ಮಾತನಾಡಿರುವ ದನೀಶ್ ಕನೇರಿಯಾ ರಾಹುಲ್ ನಾಯಕತ್ವದಲ್ಲಿ ಸ್ಪಾರ್ಕ್ ಇಲ್ಲ ಎಂದಿದ್ದಾರೆ. ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲನ್ನು ಕಂಡಿರುವ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಗೆದ್ದು ಕಮ್ ಬ್ಯಾಕ್ ಮಾಡಬೇಕಿದೆ. ಅದರೆ ಕೆಎಲ್ ರಾಹುಲ್ ಇದಕ್ಕೆ ಬೇಕಾದಂತಹ ನಾಯಕತ್ವವನ್ನು ನಿರ್ವಹಿಸುತ್ತಿಲ್ಲ ಎಂದು ದನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.