ಒಮಿಕ್ರಾನ್ ಗೊಂದಲ ನಡುವೆ ಭಾರತದ ಟೆಸ್ಟ್ ತಂಡ ಪ್ರಕಟ
ಕೋವಿಡ್-19 ರೂಪಾಂತರ ವೈರಸ್ ಒಮಿಕ್ರಾನ್ ಗೊಂದಲದ ನಡುವೆ ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದಾಗಿ ದೃಢಪಡಿಸಿದೆ. ಡಿಸೆಂಬರ್ 26ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಟೆಸ್ಟ್ ತಂಡವನ್ನ ಪ್ರಕಟಿಸಲಾಗಿದೆ.
ದಕ್ಷಿಣ ಆಫ್ರಿಕಾಗೆ ಆಯ್ಕೆ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್ ಹೀಗಿದೆ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
ಸ್ಟ್ಯಾಂಡ್ ಬೈ ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜಾನ್ ನಾಗ್ವಾಸ್ವಾಲ್ಲಾ
ಸೂರ್ಯಕುಮಾರ್ ಯಾದವ್ಗೆ ತಂಡದಲ್ಲಿ ಸಿಗಲಿಲ್ಲ ಅವಕಾಶ
ಉದಯೋನ್ಮುಕ ಭಾರತದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸ್ಕ್ವಾಡ್ನಲ್ಲಿ ಭಾರತದಲ್ಲಿ ಅವಕಾಶ ಪಡೆದರು. ಆದ್ರೆ ಅವರಿಗೆ ಟೆಸ್ಟ್ ಫಾರ್ಮೆಟ್ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. ಆದ್ರೆ ಮೂರು ವರ್ಷಗಳಿಂದ ಬೆಂಚ್ ಕಾದಿದ್ದ ಶ್ರೇಯಸ್ ಅಯ್ಯರ್ಗೆ ಸಿಕ್ಕ ಚೊಚ್ಚಲ ಅವಕಾಶದಲ್ಲೇ ಸೆಂಚುರಿ ಸಿಡಿಸಿ ಮಿಂಚಿದ್ರು.
ದಕ್ಷಿಣ ಆಫ್ರಿಕಾ ಸರಣಿಗಾದ್ರೂ ಆಯ್ಕೆಯಾಗಬಹುದು ಎಂದು ಕಾದಿದ್ದ ಸೂರ್ಯಕುಮಾರ್ ಯಾದವ್ಗೆ ನಿರಾಸೆಯಾಗಿದೆ. ಮಧ್ಯಮ ಕ್ರಮಾಂಕದ ಇತರ ಆಟಗಾರರಾದ ಶ್ರೇಯಸ್ ಅಯ್ಯರ್, ರಹಾನೆ ಮತ್ತು ವಿಹಾರಿ ಅವರ ಲಭ್ಯತೆಯು ಸೂರ್ಯಕುಮಾರ್ ಅವರ ಅವಕಾಶಗಳನ್ನು ಕಡಿಮೆ ಮಾಡಿದೆ.
ಮಹಾರಾಷ್ಟ್ರದ ಮೂಲದ ಸೂರ್ಯಕುಮಾರ್ 77 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 44.01 ರ ಅದ್ಭುತ ಸರಾಸರಿಯೊಂದಿಗೆ 5,326 ರನ್ ಗಳಿಸಿದ್ದಾರೆ. 14 ಶತಕ ಮತ್ತು 26 ಅರ್ಧ ಶತಕಗಳನ್ನು ಹೊಂದಿರುವ ಸೂರ್ಯಕುಮಾರ್ ಭವಿಷ್ಯದಲ್ಲಿ ಟೆಸ್ಟ್ ತಂಡದಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ.
ಕೊಹ್ಲಿಯನ್ನು ನಾಯಕತ್ವದಿಂದ ಹೊರಹಾಕಿದ ಬೆನ್ನಲ್ಲೇ ರೋಹಿತ್ ಜೊತೆ ಕೈಜೋಡಿಸಲು ರಾಹುಲ್ ರೆಡಿ
ಅಭಿಮನ್ಯು ಈಶ್ವರನ್
ಮತ್ತೋರ್ವ ಉದಯೋನ್ಮುಕ ಆಟಗಾರ ದೇಶೀಯ ಕ್ರಿಕೆಟ್ನಲ್ಲಿ ಮಿಂಚು ಹರಿಸುತ್ತಿರುವ ಸೊಗಸಾದ ಬ್ಯಾಟ್ಸ್ಮನ್ ಅಭಿಮನ್ಯು ಈಶ್ವರನ್ ಟೀಂ ಇಂಡಿಯಾ ಆಯ್ಕೆಗೆ ಕಾದು ಕಾದು ಬೇಸರಗೊಂಡಿದ್ದಾರೆ. ಭಾರತದ ದೇಶೀಯ ಕ್ರಿಕೆಟ್ ಸರ್ಕ್ಯೂಟ್ನಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಬಂಗಾಳದ ಬಲಗೈ ಆರಂಭಿಕ ಬ್ಯಾಟ್ಸ್ಮನ್ ಆದ ಈತ ಭಾರತ ಎ ತಂಡದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಡುತ್ತಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎ ತಂಡದ ವಿರುದ್ಧ ಶತಕ ಬಾರಿಸಿರುವ ಈತ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿದ್ದಾರೆ. 66 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಈಶ್ವರನ್ 43.83 ಸರಾಸರಿಯೊಂದಿಗೆ 4,559 ರನ್ ಬಾರಿಸಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 14 ಶತಕ ಮತ್ತು 19 ಅರ್ಧ ಶತಕಗಳನ್ನು ಹೊಂದಿದ್ದಾರೆ.
ಕೆ.ಎಸ್ ಭರತ್
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ದಿಮಾನ್ ಸಾಹಾ ತಂಡದಲ್ಲಿ ಗಾಯಾಳುವಾಗಿ ಹೊರಗುಳಿದ ಸಂದರ್ಭದಲ್ಲಿ ವಿಕೆಟ್ ಕೀಪಿಂಗ್ ಗ್ಲೌಸ್ ತೊಟ್ಟು ಕಣಕ್ಕಿಳಿದಿದ್ದ ಭರತ್ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗುವ ಕನಸು ಕಂಡಿದ್ದರು.
ಕಿವೀಸ್ ವಿರುದ್ಧ ಸಹಾ ಅವರ ಗಾಯವು ಭರತ್ ಅವರ ಕೀಪಿಂಗ್ ಕೌಶಲ್ಯವನ್ನು ಪ್ರದರ್ಶಿಸಲು ದಾರಿ ಮಾಡಿಕೊಟ್ಟಿತು ಮತ್ತು ಸಹಾ ಅನುಪಸ್ಥಿತಿಯಲ್ಲಿ ಅವರ ಕೀಪಿಂಗ್ ವೇಗವು ಎಲ್ಲರಿಂದ ಹೆಚ್ಚು ಮೆಚ್ಚುಗೆ ಪಡೆಯಿತು. ಆದರೆ ಆತನಿಗೆ ಭಾರತ ತಂಡದಲ್ಲಿ ಆಡಬೇಕು ಎನ್ನುವ ಕನಸು ಇನ್ನೂ ಈಡೇರಿಲ್ಲ.
28 ವರ್ಷದ ಕೀಪರ್ ಈಗ ಸಾಕಷ್ಟು ಸಮಯದಿಂದ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. 78 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಅವರು 37.24 ಸರಾಸರಿಯಲ್ಲಿ 4,283 ರನ್ಗಳನ್ನು ಹೊಡೆದಿದ್ದಾರೆ ಮತ್ತು ಒಂಬತ್ತು ಶತಕ ಮತ್ತು 23 ಅರ್ಧಶತಕಗಳನ್ನು ಹೊಂದಿದ್ದಾರೆ. ರಿಷಬ್ ಪಂತ್ ಲಭ್ಯತೆಯಿಂದಾಗಿ, ಭರತ್ ಸ್ಟ್ಯಾಂಡ್ ಬೈ ವಿಕೆಟ್ ಕೀಪಿಂಗ್ ಅನ್ನು ಕಳೆದುಕೊಂಡಿದ್ದು, ಭಾರತ ತಂಡಕ್ಕೆ ಎಂಟ್ರಿ ಕೊಡಲು ಇನ್ನೂ ಕಾಯಬೇಕಾಗಿದೆ.