ಕೊಲಂಬೋ, ಜುಲೈ 28: ಭಾರತ ಹಾಗೂ ಶ್ರೀಲಂಕಾ ತಂಡಗಳು ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಂದು ಕಣಕ್ಕಿಳಿದಿದೆ. ಕೊರೊನಾವೈರಸ್ನ ಕಾರಣದಿಂದಾಗಿ ತಂಡದ ಬಹುತೇಕ ಆಟಗಾರರು ಕ್ವಾರಂಟೈನ್ನಲ್ಲಿರುವ ಹಿನ್ನೆಲೆಯಲ್ಲಿ ಭಾರತ ಇಂದು 7 ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತೀಯ ತಂಡ 132 ರನ್ಗಳನ್ನು ಗಳಿಸಿ ಶ್ರೀಲಂಕಾ ತಂಡಕ್ಕೆ ಸಾಧಾರಣ ಗುರಿಯನ್ನು ಮುಂದಿಟ್ಟಿದೆ.
ಭಾರತ ಇಂದು ಐದು ಮಂದಿ ಸ್ಪೆಶಲಿಸ್ಟ್ ಬ್ಯಾಟ್ಸ್ಮನ್ಗಳು ಹಾಗೂ ಆರು ಮಂದಿ ಸ್ಪೆಶಲಿಸ್ಟ್ ಬೌಲರ್ಗಳೊಂದಿಗೆ ಕಣಕ್ಕಿಳಿದಿದೆ. ನಾಲ್ವರು ಆಟಗಾರರು ಇಂದು ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡುತ್ತಿದ್ದಾರೆ. ಆದರೆ ಭಾರತದ ಯುವ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಾರದೆ ತಂಡ ಸವಾಲಿನ ಗುರಿ ನೀಡುವಲ್ಲಿ ವಿಫಲವಾಗಿದೆ.
ಭಾರತ vs ಶ್ರೀಲಂಕಾ: ಈ 9 ಭಾರತೀಯ ಆಟಗಾರರು ಟೂರ್ನಿಯಿಂದಲೇ ಔಟ್!
ಟೀಮ್ ಇಂಡಿಯಾದ ಆರಂಬಿಕರಾಗಿ ಶಿಖರ್ ಧವನ್ಗೆ ಋತುರಾಜ್ ಗಾಯಕ್ವಾಡ್ ಸಾಥ್ ನೀಡಿದರು. ಮೊದಲ ವಿಕೆಟ್ಗೆ ಈ ಜೋಡಿ 49 ರನ್ಗಳ ಉತ್ತಮ ಜೊತೆಯಾಟವನ್ನು ನೀಡಿತು. ಋತಿರಾಜ್ ಗಾಯಕ್ವಾಡ್ 21 ರನ್ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ದೇವದತ್ ಪಡಿಕ್ಕಲ್ ಶಿಖರ್ ಧವನ್ಗೆ ಜೊತೆಯಾದರು. ಆದರೆ ಈ ಸಂದರ್ಭದಲ್ಲಿ ಧವನ್ 42 ಎಸೆತಗಳಲ್ಲಿ 40 ರನ್ಗಳಿಸಿ ನಿರಾಸೆ ಮೂಡಿಸಿದರು.
ದೇವದತ್ ಪಡಿಕ್ಕಲ್ ಆತ್ಮವಿಶ್ವಾಸದ ಪ್ರದರ್ಶನದ ಮೂಲಕ ಉತ್ತಮ ಮೊತ್ತವನ್ನು ಗಳಿಸುವ ನಿರೀಕ್ಷೆ ಮೂಡಿಸಿದರೂ 23 ಎಸೆತಗಳಲ್ಲಿ 29 ರನ್ಗಳಿಸಲಷ್ಟೇ ಸಾಧ್ಯವಾಗಿತ್ತು. ಸ್ವೀಪ್ ಮಾಡುವ ಭರದಲ್ಲಿ ಬೌಲ್ಡ್ ಆಗಿ ವಿಕೆಟ್ ಕಳೆದುಕೊಂಡರು ಪಡಿಕ್ಕಲ್. ಇನ್ನು ಮತ್ತೊಂದೆಡೆ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಮತ್ತೊಂದು ವೈಫಲ್ಯವನ್ನು ಅನುಭವಿಸಿದ್ದಾರೆ. 13 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ 9 ರನ್ಗಳಿಸಲಷ್ಟೇ ಶಕ್ತರಾದರು. ನಿತೀಶ್ ರಾಣಾ 9 ರನ್ಗಳಿಸಿ ಔಟಾದರು.
ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ ಟೀಮ್ ಇಂಡಿಯಾ ಐದು ವಿಕೆಟ್ ಕಳೆದುಕೊಂಡು 132 ರನ್ಗಳಿಸಿದೆ. ಶ್ರಿಲಂಕಾ ತಂಡದ ಪರವಾಗಿ ಅಖಿಲ ಧನಂಜಯ 2 ವಿಕೆಟ್ ಪಡೆದರೆ ಚಮೀರಾ, ನಾಯಕ ಶನಕ ಹಾಗೂ ಹಸರಂಗ ತಲಾ 1 ವಿಕೆಟ್ ಪಡೆದರು.