ಯುವ ಆಟಗಾರರ ಸಾಮರ್ಥ್ಯ ಪರೀಕ್ಷೆ
ಶ್ರೀಲಂಕಾಗೆ ತೆರಳುವ ಈ ತಂಡದಲ್ಲಿ ಬಹುತೇಕ ಯುವ ಆಟಗಾರರೇ ತುಂಬಿದ್ದಾರೆ. ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ 20 ಆಟಗಾರರ ಪೈಕಿ 14 ಮಂದಿ ಈ ಹಿಂದೆ ಭಾರತ ತಂಡವನ್ನು ಪ್ರತಿನಿಧಿಸಿರುವ ಅನುಭವ ಹೊಂದಿದ್ದರೆ ಉಳಿದ ಆಟಗಾರರು ಮೊದಲ ಬಾರಿಗೆ ಭಾರತ ತಂಡದ ಕರೆಯನ್ನು ಸ್ವೀಕರಿಸಿದ್ದಾರೆ. ಟೀಮ್ ಇಂಡಿಯಾವನ್ನು ಈ ಹಿಂದೆ ಪ್ರತಿನಿಧಿಸಿದ್ದರೂ ಕೆಲ ಆಟಗಾರರನ್ನು ಹೊರತು ಪಡಿಸಿದರೆ ಉಳಿದ ಆಟಗಾರರು ಹೆಚ್ಚಿನ ಪಂದ್ಯಗಳ ಅನುಭವವನ್ನು ಹೊಂದಿಲ್ಲ. ಹೀಗಾಗಿ ಒತ್ತಡದ ಸಂದರ್ಭದಲ್ಲಿ ಈ ಎಲ್ಲಾ ಆಟಗಾರರು ತಂಡವಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದು ಬಹಳ ಮುಖ್ಯವಾಗಿದೆ. ಈ ಮೂಲಕ ತಂಡದ ಬೆಂಚ್ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದಂತಾಗುತ್ತದೆ.
'ಬಿ' ತಂಡ ಹಣೆಪಟ್ಟಿಯನ್ನು ಕಳಚಬೇಕಿದೆ
ಇನ್ನು ಶ್ರೀಲಂಕಾ ವಿರುದ್ಧದ ಪ್ರವಾಸಕ್ಕೆ ಶಿಖರ್ ಧವನ್ ನೇತೃತ್ವದ ತಂಡವನ್ನು ಬಿಸಿಸಿಐ ಕಳುಹಿಸಿದ ನಂತರ ಶ್ರೀಲಂಕಾ ಕ್ರಿಕೆಟ್ ತಂಡದ ಕೆಲ ಮಾಜಿ ಆಟಗಾರರು ಭಾರತ ತಂಡದ ಬಗ್ಗೆ ಟೀಕೆಯನ್ನು ಮಾಡಿದ್ದಾರೆ. ಅದರಲ್ಲೂ ಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಭಾರತ ತಂಡವನ್ನು ಬಿ ತಂಡ ಎಂದಿದ್ದಾರೆ. ಹೀಗಾಗಿ ಶ್ರೀಲಂಕಾ ತಂಡದ ವಿರುದ್ಧ ಭಾರತ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಜಗಜ್ಜಾಹೀರುಗಿಳಿಸಬೇಕಿದೆ. ಈ ದೃಷ್ಟಿಕೋನದಿಂದಲೂ ಭಾರತಕ್ಕೆ ಈ ಪ್ರವಾಸ ಪ್ರಮುಖವಾಗಿದೆ.
ಬಿಸಿಸಿಐಗೂ ಇದು ಸವಾಲು
ಇನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತದ ಯುವ ಆಟಗಾರರ ಸಾಮರ್ಥ್ಯದ ಮೇಲೆ ಭರವಸೆಯಿಟ್ಟು ಈ ಸವಾಲನ್ನು ಸ್ವೀಕರಿಸಿದೆ. ಈ ಹಿಂದೆ ಯಾವುದೇ ತಂಡದಿಂದ ಸಾಧ್ಯವಾಗದ ಪ್ರಯತ್ನ ಇದಾಗಿದೆ. ಈಗಾಗಲೇ ಆರ್ಥಿಕವಾಗಿ ಅತ್ಯಂತ ಬಲಾಢ್ಯ ಎನಿಸಿರುವ ಬಿಸಿಸಿಐ ಪ್ರತಿಬೆಯ ವಿಚಾರದಲ್ಲೂ ತಾನು ಬಲಿಷ್ಟ ಎಂಬುದನ್ನು ಸಾಬೀತುಪಡಿಸಲು ಈ ಪ್ರವಾಸವನ್ನು ಮಹತ್ವದ ವೇದಿಕೆಯಾಗಿ ಬಳಸಿಕೊಳ್ಳಲಿದೆ.
ಸನಿಹದಲ್ಲಿದೆ ಟಿ20 ವಿಶ್ವಕಪ್
ಇನ್ನು ಮತ್ತೊಂದು ಮಹತ್ವದ ಸಂಗತಿಯೆಂದರೆ ಇನ್ನೇನು ಕೆಲವೇ ತಿಂಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಕೆಲ ಪ್ರತಿಭಾವಂತ ಆಟಗಾರರು ತಮ್ಮ ಸಾಮರ್ಥ್ಯವನ್ನು ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ನಂತಾ ವೇದಿಕೆಯಲ್ಲಿ ಸಾಬೀತುಪಡಿಸಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಹೆಚ್ಚಿನ ಅವಕಾಶಗಳು ದೊರೆತಿಲ್ಲ. ಹೀಗಾಗಿ ಕೆಲ ಪ್ರತಿಭಾವಂತ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಬಹಿರಂಗಪಡಿಸುವ ಮೂಲಕ ವಿಶ್ವಕಪ್ನ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಯುವ ಆಟಗಾರರು ಮಾತ್ರವಲ್ಲದೆ ನಾಯಕ ಶಿಖರ್ ಧವನ್, ಮನೀಶ್ ಪಾಂಡೆ ಕುಲ್ದೀಪ್ ಯಾದವ್ರಂತಾ ಆಟಗಾರರಿಗೂ ಈ ಪ್ರವಾಸ ವಿಶ್ವಕಪ್ ದೃಷ್ಟಿಯಿಂದ ಮಹತ್ವದ್ದಾಗಲಿದೆ.