ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಇಂದು ನಡೆಯುತ್ತಿದೆ. ಎರಡು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿರುವ ಎರಡು ತಂಡಗಳಿಗೂ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಹೊಸ ಆಟಗಾರರೊಂದಿಗೆ ಕಣಕ್ಕಿಳಿದಿರುವ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾಗೆ ಈ ಪಂದ್ಯ ಮತ್ತಷ್ಟು ಕಠಿಣ ಸವಾಲಾಗಿರಲಿದೆ.
ಭಾರತ ತಂಡಕ್ಕೆ ಕೊರೊನಾವೈರಸ್ ಆಘಾತ ನೀಡಿದ ಕಾರಣ ತಂಡದ ಬಹುತೇಕ ಪ್ರಮುಖ ಆಟಗಾರರು ಅಂತಿಮ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಹಾಗಿದ್ದರೂ ಎರಡನೇ ಪಂದ್ಯದಲ್ಲಿ ಭಾರತ ತೀವ್ರ ಪೈಪೋಟಿಯನ್ನು ನೀಡಿದ್ದು ಗೆಲುವಿನ ಸನಿಹಕ್ಕೆ ಬಂದು ನಿಂತಿತ್ತಾದರೂ ಕೊನೆ ಕ್ಷಣದಲ್ಲಿ ಗೆಲುವು ಭಾರತದ ಕೈಜಾರಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಭಾರತ ತನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.
ಭಾರತ vs ಶ್ರೀಲಂಕಾ: 3ನೇ ಟಿ20 ಪಂದ್ಯ, Live ಸ್ಕೋರ್, ಆಡುವ ಬಳಗ
ಭಾರತ ದ್ವಿತೀಯ ಪಂದ್ಯದಲ್ಲಿ ಐವರು ಬ್ಯಾಟ್ಸ್ಮನ್ಗಳು ಹಾಗೂ ಆರು ಮಂದಿ ಸ್ಪೆಶಲಿಸ್ಟ್ ಬೌಲರ್ಗಳೊಂದಿಗೆ ಕಣಕ್ಕಿಳಿದಿತ್ತು. ಭಾರತ ತಂಡದ ಬಹುತೇಕ ಆಟಗಾರರು ಕ್ವಾರಂಟೈನ್ನಲ್ಲಿರುವ ಕಾರಣ ಆಉವ ಬಳಗಕ್ಕೆ ಸೇರಿಸಿಕೊಳ್ಳಲು ಬೇರೆ ಆಯ್ಕೆಗಳು ಇಲ್ಲ. ಹಾಗಿದ್ದರೂ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಭಾರತದ ಬೌಲಿಂಗ್ ವಿಭಾಗ ನೀಡಿದ ಪ್ರದರ್ಶನ ಶ್ರೀಲಂಕಾದ ದಾಂಡಿಗರನ್ನು ಅಕ್ಷರಶಃ ಕಂಗೆಡಿಸಿತ್ತು.
ಈಗಾಗಲೇ ಎರಡನೇ ಪಂದ್ಯದಲ್ಲಿ ಗೆಲುವಿನ ಸನಿಹಕ್ಕೆ ತಲುಪಿದ್ದ ಭಾರತ ತಂಡ ತನ್ನ ಆಟದ ಯೋಜನೆಯನ್ನು ಉತ್ತಮ ಪಡಿಸಿಕೊಳ್ಳಲು ಉತ್ತಮ ಅವಕಾಶ ದೊರೆತಿದೆ. ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಅವರಿಂದ ಇಂದು ಉತ್ತಮ ಪ್ರದರ್ಶನ ಹೊರಬಂದರೆ ಭಾರತದ ಪಾಲಿಗೆ ಈ ಪಂದ್ಯ ನಿಜಕ್ಕೂ ಆಶಾದಾಯಕವಾಗಿರುತ್ತದೆ.
ಟೀಮ್ ಇಂಡಿಯಾ ಬೌಲಿಂಗ್ ಪಡೆ ಸಾಕಷ್ಟು ಬಲಿಷ್ಟವಾಗಿದೆ. ಅದರಲ್ಲೂ ಭಾರತದ ಸ್ಪಿನ್ ಬಳಗ ಶ್ರೀಲಂಕಾ ಪಾಲಿಗೆ ಅಂತಿಮ ಪಂದ್ಯದಲ್ಲಿಯೂ ತಲೆನೋವಾಗಿರಲಿದೆ. ನಾಯಕ ಶಿಖರ್ ಧವನ್ ಬೌಲಿಂಗ್ ವಿಭಾಗದ ಮೇಲೆ ಹೆಚ್ಚಿನ ನಿರೀಕ್ಷೆಯಿಟ್ಟಿದ್ದು ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅಂತಿಮ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವತ್ತ ತಂಡ ತನ್ನ ಎಲ್ಲಾ ಶ್ರಮವನ್ನು ಹಾಕಲಿದೆ.
ಅಂತಿಮ ಪಂದ್ಯದಲ್ಲಿ ಭಾರತದ ಆಡುವ ಬಳಗ ಹೀಗಿದೆ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರಾಹುಲ್ ಚಹರ್, ಸಂದೀಪ್ ವಾರಿಯರ್, ಚೇತನ್ ಸಕರಿಯಾ, ವರುಣ್ ಚಕ್ರವರ್ತಿ
ಶ್ರೀಲಂಕಾ ಆಡುವ ಬಳಗ:
ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಸದೀರಾ ಸಮರವಿಕ್ರಮ, ಪಾತುಮ್ ನಿಸ್ಸಂಕಾ, ದಸುನ್ ಶನಕ (ನಾಯಕ), ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನ, ಅಕಿಲಾ ದನಂಜಯ, ದುಷ್ಮಂತ ಚಮೀರಾ