ಯುವ ಆಟಗಾರರಲ್ಲಿ ಪೈಪೋಟಿ
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರರು ನೀಡಿದ ಆಕ್ರಮಣಕಾರಿ ಆಟ ಆಶಾದಾಯಕವಾಗಿದೆ. ಟಿ20 ವಿಶ್ವಕಪ್ನಂತಾ ಪ್ರಮುಖ ಟೂರ್ನಿ ಸಮೀಪಿಸುತ್ತಿರುವ ಕಾರಣ ಈ ಮಹತ್ವದ ಟೂರ್ನಿಯಲ್ಲಿ ಭಾಗಿಯಾಗಲು ಆಟಗಾರರ ಮಧ್ಯೆ ಸಕಾರಾತ್ಮಕ ಪೈಪೋಟಿಗೆ ಇದು ಕಾರಣವಾಗಲಿದೆ. ಯುವ ಆಟಗಾರರು ಸಿಕ್ಕ ಅವಕಾಶವನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಬಹಳ ಪ್ರಮುಖ ಸಂಗತಿಯಾಗಿದೆ.
ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ
ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿರುವ ಭಾರತ ತಂಡವನ್ನು ಎರಡನೇ ಪಂದ್ಯದಲ್ಲಿ ಬದಲಾವಣೆ ಮಾಡುವ ಯಾವುದೇ ಸಾಧ್ಯತೆಗಳು ಕಾಣಿಸುತ್ತಿಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ಆಡಿದ ಆಟಗಾರರರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.
ಮನೀಶ್ ನೀರಸ ಪ್ರದರ್ಶನ
ಆದರೆ ಭಾರತ ತಂಡದ ಪಾಲಿಗೆ ಮನೀಶ್ ಪಾಂಡೆ ಬ್ಯಾಟಿಂಗ್ ಪ್ರದರ್ಶನ ಸಣ್ಣ ಕಳವಳವನ್ನುಂಟು ಮಾಡಿದೆ. ಮೊದಲ ಏಕದಿನ ಪಂದ್ಯದಲ್ಲಿ ಉಳಿದ ಎಲ್ಲಾ ಬ್ಯಾಟ್ಸ್ಮನ್ಗಳು ಅಬ್ಬರಿಸುತ್ತಿದ್ದರೆ ಮನೀಶ್ ಪಾಂಡೆ ಅತ್ಯಂತ ನಿಧಾನಗತಿಯ ಬ್ಯಾಟಿಂಗ್ಗೆ ಮುಂದಾಗಿದ್ದರು. 40 ಎಸೆತಗಳನ್ನು ಎದುರಿಸಿದ ಪಾಂಡೆ 26 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಲಯಕಂಡುಕೊಂಡ ಕುಲ್ದೀಪ್-ಚಾಹಲ್
ಇನ್ನು ಬೌಲಿಂಗ್ನಲ್ಲಿ ಸುದೀರ್ಘ ಕಾಲದ ನಂತರ ಜೊತೆಯಾಗಿ ಕಣಕ್ಕಿಳಿದು ಲಯಕ್ಕೆ ಮರಳಿದ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಬಹಳ ಕಾಲದ ಬಳಿಕ ಬೌಲಿಂಗ್ ಮಾಡಿದ್ದು ಯಶಸ್ಸು ಪಡೆದುಕೊಂಡಿದ್ದಾರೆ. ಇನ್ನು ಉಪನಾಯಕ ಭುವನೇಶ್ವರ್ ಕುಮಾರ್ ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಅನುಭವಿ ಭುವಿಗೆ ಲಯವನ್ನು ಮತ್ತೆ ಕಂಡುಕೊಳ್ಳುವುದು ಕಷ್ಟವಾಗಲಾರದು ಎಂಬುದು ತಜ್ಞರ ಅಬಿಮತ.