ಭಾರತದ ಯುವ ಸಾಮರ್ಥ್ಯ
ಭಾರತೀಯ ಕ್ರಿಕೆಟ್ನಲ್ಲಿನ ಯುವ ಆಟಗಾರರ ಸಾಮರ್ಥ್ಯ ಈಗಾಗಲೇ ಹಲವು ಸಂದರ್ಭಗಳಲ್ಲಿ ಜಗಜ್ಜಾಹೀರಾಗಿದೆ. ಅದರಲ್ಲಿ ಪ್ರಮುಖವಾಗಿದ್ದು ಕಳೆದ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿನ ಪ್ರದರ್ಶನ. ಈಗ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿಯೂ ಭಾರತೀಯ ಯುವ ಆಟಗಾರರ ಸಾಮರ್ಥ್ಯ ನಿರೀಕ್ಷೆಯಂತೆಯೇ ಪ್ರದರ್ಶನವಾಗಿದೆ. ಸಿಕ್ಕ ಅವಕಾಶವನ್ನು ಯುವ ಆಟಗಾರರು ಬಳಸಿಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಿರ್ಭೀತ ಆಟ
ಭಾರತೀಯ ಕ್ರಿಕೆಟ್ ತಂಡ ಕಳೆದ ಕೆಲ ವರ್ಷಗಳಿಂದ ಈ ನಿರ್ಭೀತ ಆಟವನ್ನು ಪ್ರದರ್ಶಿಸಿಕೊಂಡು ಬಂದಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ದೇಶ ವಿದೇಶಗಳ ನೆಲದಲ್ಲಿಯೂ ಭಾರತೀಯ ತಂಡದ ಪ್ರದರ್ಶನ ಅತ್ಯುನ್ನತ ಮಟ್ಟದಲ್ಲಿದೆ. ಆದರೆ ಶ್ರೀಲಂಕಾ ತಂಡದ ವಿರುದ್ಧ ಕಣಕ್ಕಿಳಿದಿರುವ ತಂಡದಲ್ಲಿ ಬಹುತೇಕ ಯುವ ಆಟಗಾರರಿದ್ದಾರೆ. ಪ್ರಮುಖವಾಗಿ ವಿರಾಟ್ ಕೊಹ್ಲಿಯಂತಾ ಹುರುಪಿನ ನಾಯಕ ಈ ಪ್ರವಾಸದಲ್ಲಿಲ್ಲ. ಆದರೆ ಇದ್ಯಾವುದು ಕೂಡ ಭಾರತೀಯ ಯುವ ಆಟಗಾರರ ಪಾಲಿಗೆ ಸಂಗತಿಯೇ ಆಗಲಿಲ್ಲ. ಭಾರತೀಯ ಕ್ರಿಕೆಟ್ನ ಬ್ರ್ಯಾಂಡ್ನಂತಿರುವ ನಿರ್ಭೀತ ಆಟವನ್ನು ಶ್ರೀಲಂಕಾ ವಿರುದ್ಧವೂ ಪ್ರದರ್ಶಿಸಿದರು. ಈ ಪ್ರದರ್ಶನದಿಂದಾಗಿಯೇ ಭಾರತ ಮೊದಲ ಪಂದ್ಯವನ್ನು ಅರ್ಹವಾಗಿ ಗೆದ್ದುಕೊಂಡಿದೆ.
ಸರ್ವಾಂಗೀಣ ಪ್ರದರ್ಶನ
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತೀಯ ತಂಡದ ಎಲ್ಲಾ ವಿಭಾಗದಲ್ಲಿಯೂ ಪ್ರಮುಖ ಆಟಗಾರರು ಅಲಭ್ಯವಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸಕೈಗೊಂಡ ತಂಡದಲ್ಲಿ ಈ ಆಟಗಾರರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಇದು ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಯಾವುದೇ ರೀತಿಯಿಂದಲೂ ಪರಿಣಾಮ ಬೀರಿಲ್ಲ. ಮೊದಲಿಗೆ ಭಾರತ ಬೌಲಿಂಗ್ ಹಾಗೂ ಫಿಲ್ಡಿಂಗ್ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರೆ ನಂತರ ಬ್ಯಾಟಿಂಗ್ನಲ್ಲಿಯೂ ಶ್ರೀಲಂಕಾ ತಂಡಕ್ಕೆ ಸಣ್ಣ ಅವಕಾಶವನ್ನೂ ನೀಡದಂತೆ ಅಬ್ಬರಿಸಿತ್ತು. ಈ ಮೂಲಕ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ.
ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಮತ್ತಷ್ಟು ಪ್ರತಿಭಾವಂತರು
ಶ್ರೀಲಂಕಾ ತಂಡದ ಮೊದಲ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆದ ಬಹುತೇಕ ಆಟಗಾರರ ಪ್ರದರ್ಶನ ಅದ್ಭುತವಾಗಿತ್ತು. ಆದರೆ ಇಷ್ಟೇ ಪ್ರತಿಭಾವಂತರ ಆಟಗಾರರು ಶ್ರೀಲಂಕಾ ಪ್ರವಾಸಕೈಗೊಂಡಿರುವ ತಂಡದಲ್ಲಿ ಬೆಂಚ್ ಕಾಯುತ್ತಿದ್ದಾರೆ. ಒಟ್ಟು ಆರು ಪಂದ್ಯಗಳ ಸರಣಿಯಲ್ಲಿ ಎಲ್ಲಾ ಆಟಗಾರರಿಗೂ ಅವಕಾಶವನ್ನು ನೀಡುವ ಗುರಿಯನ್ನು ಕೋಚ್ ರಾಹುಲ್ ದ್ರಾವಿಡ್ ಹೊಂದಿದ್ದಾರೆ. ಹೀಗಾಗಿ ಈ ಎಲ್ಲಾ ಆಟಗಾರರ ಪ್ರದರ್ಶನದ ಮೇಲೆ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ.