ಸರಣಿಯಿಂದ ಹೊರಗುಳಿಯುವ 9 ಆಟಗಾರರು ಯಾರು?
ಕೃನಾಲ್ ಪಾಂಡ್ಯಗೆ ಕೊರೋನಾ ಸೋಂಕು ಪಾಸಿಟಿವ್ ವರದಿ ಬಂದ ನಂತರ ಆತನ ಸಂಪರ್ಕದಲ್ಲಿದ್ದ ಇತರ 8 ಆಟಗಾರರಿಗೂ ಕೊರೋನಾ ಪರೀಕ್ಷೆ ನಡೆಸಲಾಯಿತು ಮತ್ತು ಎಲ್ಲರಿಗೂ ವರದಿ ನೆಗೆಟಿವ್ ಬಂದಿದೆ. ಆದರೂ ಸಹ ಈ 9 ಆಟಗಾರರಿಗೆ ಲಂಕಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುವುದಿಲ್ಲ ಎನ್ನಲಾಗುತ್ತಿದೆ. ಹೀಗೆ ಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿರುವ 9 ಆಟಗಾರರೆಂದರೆ: ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ಕೃಷ್ಣಪ್ಪ ಗೌತಮ್, ಇಶಾನ್ ಕಿಶನ್ ಹಾಗೂ ಇನ್ನೋರ್ವ ಆಟಗಾರ ಎಂದು ಹೇಳಲಾಗುತ್ತಿದೆ.
ಧವನ್ ಸರಣಿಯಿಂದ ಹೊರ ಬಿದ್ದರೆ ಪರ್ಯಾಯ ನಾಯಕ ಯಾರು?
ಕೃನಾಲ್ ಪಾಂಡ್ಯ ಸಂಪರ್ಕದಲ್ಲಿ ನಾಯಕ ಶಿಖರ್ ಧವನ್ ಕೂಡ ಇದ್ದರು ಎಂದು ಹೇಳಲಾಗುತ್ತಿದ್ದು, ಸರಣಿಯಿಂದ ಹೊರಗುಳಿಯುವ ಆಟಗಾರರಲ್ಲಿ ಅವರು ಕೂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಒಂದುವೇಳೆ ಶಿಖರ್ ಧವನ್ ಸರಣಿಯಿಂದ ಹೊರ ಬಿದ್ದರೆ ತಂಡದ ಅನುಭವಿ ಆಟಗಾರರಾದ ಭುವನೇಶ್ವರ್ ಕುಮಾರ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಬೀಳಬಹುದು.
ತಂಡಕ್ಕೆ ಬ್ಯಾಟಿಂಗ್ ಸಮಸ್ಯೆ ಕಾಡಬಹುದು
ಸದ್ಯ ತಂಡದಿಂದ ಹೊರ ಬೀಳಲಿದ್ದಾರೆ ಎನ್ನಲಾಗುತ್ತಿರುವ ಆಟಗಾರರ ಪಟ್ಟಿಯನ್ನು ನೋಡಿದರೆ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳು ಅಲಭ್ಯರಾಗಲಿದ್ದಾರೆ ಎಂಬುದು ನಿಖರವಾಗಿ ತಿಳಿಯುತ್ತಿದೆ. ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಶಿಖರ್ ಧವನ್ ಹಾಗೂ ಇಶಾನ್ ಕಿಶನ್ ರೀತಿಯ ಬ್ಯಾಟ್ಸ್ಮನ್ಗಳೇ ಅಲಭ್ಯರಾಗಲಿದ್ದಾರೆ ಎನ್ನಲಾಗುತ್ತಿದ್ದು ಒಂದು ವೇಳೆ ಈ ಆಟಗಾರರಿಲ್ಲದೆ ಸರಣಿಯನ್ನು ಆಡಿದರೆ ಬ್ಯಾಟಿಂಗ್ ಸಮಸ್ಯೆ ಖಂಡಿತವಾಗಿಯೂ ತಲೆದೋರಲಿದೆ.