ಕೊಲಂಬೋ, ಜುಲೈ 26: ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಮಂಗಳವಾರ ನಡೆಯಲಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿಯೇ ಈ ಪಂದ್ಯ ಕೂಡ ನಡೆಯಲಿದೆ. ಭಾರತ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿದ್ದು ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ವಶಕ್ಕೆ ಪಡೆಯಲು ಹವಣಿಸುತ್ತಿದೆ. ಸರಣಿ ಗೆಲ್ಲುವವರೆಗೆ ಭಾರತ ಯಾವುದೇ ಪ್ರಯೋಗಕ್ಕೆ ಇಳಿಯುವುದಿಲ್ಲ ಎಂಬ ಮಾತನ್ನು ನಾಯಕ ಶಿಖರ್ ಧವನ್ ಹೇಳಿದ್ದಾರೆ.
ನಾಯಕ ಧವನ್ ಅವರ ಈ ಮಾತುಗಳ ಹೊರತಾಗಿಯೂ ಭಾರತ ತಂಡದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕನ್ನಡಿಗ ದೇವದತ್ ಪಡಿಕ್ಕಲ್ ತಾನು ಎಂತಾ ಸಾಮರ್ಥ್ಯದ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಸರಣಿಯ ಇಲ್ಲಿಯವರೆಗಿನ ಎಲ್ಲಾ ಪಂದ್ಯಗಳಲ್ಲಿಯೂ ಪೃಥ್ವಿ ಶಾ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಪೃಥ್ವಿ ಶಾ ಅವರಷ್ಟೇ ತಾನೂ ಕೂಡ ಸಮರ್ಥ ಆಟಗಾರ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ಸಾಬೀತುಪಡಿಸಿರುವ ಪಡಿಕ್ಕಲ್ಗೆ ದ್ವಿತೀಯ ಟಿ20 ಪಂದ್ಯದಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ.
ಟೋಕಿಯೋ ಒಲಿಂಪಿಕ್ಸ್: ಸಾತ್ವಿಕ್ಸಾಯ್ರಾಜ್-ಚಿರಾಗ್ ಜೋಡಿಗೆ ಸೋಲು
ಇನ್ನು ಮಧ್ಯಮ ಕ್ರಮಾಂಕದಲ್ಲಿ ಪ್ರಥಮ ಟಿ20 ಪಂದ್ಯದಲ್ಲಿ ಕಣಕ್ಕಿಳಿದ ತಂಡವನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಆಟವನ್ನು ಪ್ರದರ್ಶಿಸಿದರು. ಸೂರ್ಯಕುಮಾರ್ ಯಾದವ್ ತಮ್ಮ ಅದ್ಭುತ ಫಾರ್ನ್ಅನ್ನು ಮುಂದವರಿಸಿದ್ದು ಅಮೋಘ ಅರ್ಧ ಶತಕ ಬಾರಿಸಿದರು. ಇಶಾನ್ ಕಿಶನ್ ಮೊದಲ ಚುಟುಕು ಪಂದ್ಯದಲ್ಲಿ ಎಡವಿದರೂ ಎರಡನೇ ಪಂದ್ಯದಲ್ಲಿ ಅವಕಾಶ ಗಳಿಸುವ ಸಾಧ್ಯತೆ ಹೆಚ್ಚಿದೆ.
ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಕೃನಾಲ್ ಪಾಂಡ್ಯ ಕೂಡ ಆಲ್ರೌಂಡರ್ ಆಗಿ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ಈ ಸೋದರರಿಬ್ಬರಲ್ಲಿ ಯಾರಿಗಾದರೂ ವಿಶ್ರಾಂತಿ ನೀಡಿದರೂ ಅಚ್ಚರಿಯಿಲ್ಲ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯುಜುವೇಂದ್ರ ಚಾಹಲ್ ಹಾಗೂ ವರುಣ್ ಚಕ್ರವರ್ತಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಭಾರತದ ಸಂಭಾವ್ಯ ತಂಡ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ/ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್/ಮನೀಶ್ ಪಾಂಡೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯುಜುವೇಂದ್ರ ಚಾಹಲ್, ವರುಣ್ ಚಕ್ರವರ್ತಿ