ನಾಗಪುರ, ನವೆಂಬರ್ 25 : ಶ್ರೀಲಂಕಾ ವಿರುದ್ಧ ನಾಗಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯರು ಸ್ಪಷ್ಟ ಮೇಲುಗೈ ಸಾಧಿಸುವತ್ತ ಮುನ್ನಡೆದಿದ್ದಾರೆ.
ಮೊದಲ ದಿನ ಭಾರತೀಯ ಬೌಲರ್ ಗಳು ತಮ್ಮ ಕರಾರುವಾಕ್ ದಾಳಿಯಿಂದ ಶ್ರೀಲಂಕಾವನ್ನು 205 ರನ್ಗಳಿಗೆ ಆಲ್ ಔಟ್ ಮಾಡಿದ್ದರು, ಇಂದು (ನವೆಂಬರ್ 25) ಭಾರತದ ಬ್ಯಾಟ್ಸ್ ಮನ್ಗಳು ಎದುರಾಳಿ ಬೌಲರ್ ಗಳ ಮೇಲೆ ಸವಾರಿ ಮಾಡಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ 205 ರನ್ ಗಳಿಗೆ ಸರ್ವಪತನ ಕಂಡ ಲಂಕಾ
11 ರನ್ ಗೆ 1 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಪ್ರಾರಂಭಿಸಿದ ಭಾರತ ಎಲ್ಲೂ ಎಡವಲೇ ಇಲ್ಲ. ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ ಆರಂಭಿಕ ಬ್ಯಾಟ್ಸಮನ್ ಮುರಳಿ ವಿಜಯ್ 221 ಚೆಂಡು ಎದುರಿಸಿ 128 ಪೇರಿಸಿದರು. ರಂಗನಾ ಹೆರಾತ್ ಅವರ ಬೌಲಿಂಗ್ ನಲ್ಲಿ ಪೆರೆರಾಗೆ ಕ್ಯಾಚಿತ್ತು ಹೊರನಡೆಯುವ ಮುನ್ನ ಅವರು 11 ಬೌಂಡರಿ, 1 ಸಿಕ್ಸರ್ ಬಾರಿಸಿದ್ದರು.
ಮುರಳಿ ವಿಜಯ್ ಅವರೊಂದಿಗೆ ಶತಕದ ಜೊತೆಯಾಟ ಕಟ್ಟಿದ ಚೆತೇಶ್ವರ್ ಪುಜಾರ ನಿಧಾನ ಗತಿಯ ಆಟಕ್ಕೆ ಮೊರೆಹೋದರು. 284 ಚೆಂಡು ಎದುರಿಸಿದ ಪುಜಾರಾ 121 ರನ್ ಗಳಿಸಿ ಆಡುತ್ತಿದ್ದಾರೆ. ಪೂಜಾರಾ ಖಾತೆಯಲ್ಲಿ 13 ಬೌಂಡರಿಗಳು ನಮೂದಾದವು.
ಏಕದಿನ ಕ್ರಿಕೆಟ್: 2 ರನ್ನಿಗೆ ಆಲೌಟ್, ಒಂದೇ ಎಸೆತದಲ್ಲಿ ಪಂದ್ಯ ಫಿನಿಶ್
ಮುರಳಿ ವಿಜಯ್ ನಿರ್ಗಮನದ ನಂತರ ಕ್ರೀಸ್ ಗೆ ಬಂದ ನಾಯಕ ವಿರಾಟ್ ಕೋಹ್ಲಿ ಬೇಗ ಬೇಗನೇ ರನ್ ಗಳಿಸುವ ಆಟ ಆಡುತ್ತಿದ್ದಾರೆ. ಪ್ರತಿ ಬಾಲಿಗೆ ರನ್ ಹೊಡೆದು ಸ್ಟ್ರೈಕ್ ರೊಟೆಟ್ ಮಾಡುವ ತಂತ್ರಕ್ಕೆ ಮೊರೆ ಹೋದ ಕೋಹ್ಲಿ 70 ಬಾಲಿಗೆ 54 ರನ್ ಗಳಿಸಿ ಆಟ ಮುಂದುವರೆಸಿದ್ದಾರೆ.
ದಿನಪೂರ್ತಿ ಬೆವರಿಳಿಸಿ ಬೌಲಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಇಂದು ದೊರಕಿದ್ದು ಕೇವಲ ಒಂದು ವಿಕೆಟ್ ಅಷ್ಟೆ.
ದಿನದಾದ್ಯಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 312 ರನ್ ಕಲೆ ಹಾಕಿ, 107 ರನ್ ಮುನ್ನಡೆ ಪಡೆದಿದ್ದಾರೆ. ಮೂರನೇ ದಿನ ಪೂರ್ತಿ ಬ್ಯಾಟಿಂಗ್ ನಡೆಸಿ ಸಂಜೆ ಹೊತ್ತಿಗೆ ಲೀಡ್ ಅನ್ನು 300 ಕ್ಕೆ ಹೆಚ್ಚಿಸಿಕೊಂಡು ಶ್ರೀಲಂಕಾಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟು ಕಟ್ಟಿಹಾಕುವ ಯೋಚನೆ ಕೋಹ್ಲಿ ಅವರದ್ದು.