ಮೊದಲನೇ ಏಕದಿನ ಪಂದ್ಯ ಅನುಮಾನ!
ಟೀಮ್ ಇಂಡಿಯಾದ ಕೆಲ ಆಟಗಾರರಲ್ಲಿ ಕೊರೋನಾವೈರಸ್ ಕಾಣಿಸಿಕೊಂಡ ನಂತರ ಮಾತನಾಡಿರುವ ಬಿಸಿಸಿಐ ಅಧಿಕಾರಿಯೋರ್ವರು ಈಗಲೂ ಕೂಡ ಸರಣಿ ನಿಗದಿಪಡಿಸಿದ ದಿನಾಂಕಗಳಂದು ನಡೆಯಲಿದೆ ಎಂದಿದ್ದಾರೆ. ಆದರೆ, ನಾಳೆ ಅಥವಾ ನಾಡಿದ್ದು ಟೀಮ್ ಇಂಡಿಯಾದ ಇತರೆ ಯಾವುದೇ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಸರಣಿ ಆರಂಭವಾಗುವುದರಲ್ಲಿ ಒಂದೆರಡು ದಿನಗಳ ವಿಳಂಬವಾಗಬಹುದು ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಪ್ರಥಮ ಏಕದಿನ ಪಂದ್ಯದ ಸಲುವಾಗಿ ಟೀಮ್ ಇಂಡಿಯಾ ಆರಂಭಿಸಿದ್ದ ಅಭ್ಯಾಸವೂ ಕೂಡ ಇದೀಗ ರದ್ದಾಗಿದೆ.
ಮಯಾಂಕ್ ಅಗರ್ವಾಲ್ ಏಕದಿನ ತಂಡಕ್ಕೆ ಸೇರ್ಪಡೆ
ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕೊರೊನಾ ಸೋಂಕಿಗೆ ಒಳಗಾದ ನಂತರ ಭಾರತದ ಆಯ್ಕೆ ಸಮಿತಿ ಮಯಾಂಕ್ ಅಗರ್ವಾಲ್ ಅವರನ್ನು ಭಾರತ ಏಕದಿನ ತಂಡಕ್ಕೆ ಆಯ್ದುಕೊಂಡಿದೆ. ಒಟ್ಟಿನಲ್ಲಿ ಸದ್ಯಕ್ಕೆ ಕೊರೊನ ಸೋಂಕಿಗೆ ಒಳಗಾಗಿರುವ ಆಟಗಾರರು ಇಲ್ಲದೇ ಇದ್ದರೂ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯ ನಡೆಯಲಿದೆ ಎಂದಿರುವ ಬಿಸಿಸಿಐ ಇದರ ಮೇಲೂ ಬೇರೆ ಆಟಗಾರರಿಗೆ ಕೊರೋನಾ ಸೋಂಕು ತಗುಲಿದರೆ ಪಂದ್ಯ ಆರಂಭದಲ್ಲಿ ವಿಳಂಬವಾಗುವುದು ಖಚಿತ ಎಂದಿದೆ.
ಕೊರೊನಾ ಸೋಂಕು ತಗುಲಿರುವುದು ಯಾರಿಗೆ?
ಇನ್ನು ಬುಧವಾರದಂದು ಟೀಮ್ ಇಂಡಿಯಾದ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಶ್ರೇಯಸ್ ಅಯ್ಯರ್, ಶಿಖರ್ ಧವನ್, ರುತುರಾಜ್ ಗಾಯಕ್ವಾಡ್ ಮತ್ತು ನವದೀಪ್ ಸೈನಿ ಈ 4 ಆಟಗಾರರಿಗೆ ಸೋಂಕು ತಗುಲಿದೆ. ಅತ್ತ ಅಹಮದಾಬಾದ್ ತಲುಪಬೇಕಿರುವ ಅಕ್ಷರ್ ಪಟೇಲ್ ಅವರಿಗೂ ಕೂಡ ಕೊರೊನ ಸೋಂಕು ತಗುಲಿದೆ. ಹೀಗೆ ಆಟಗಾರರು ಸೇರಿದಂತೆ ಟೀಮ್ ಇಂಡಿಯಾದ ಒಟ್ಟು 8 ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಇದೀಗ ಭೀತಿಯನ್ನು ಹುಟ್ಟಿಸಿದೆ.