ತಿರುವನಂತಪುರಂನಲ್ಲಿ ನಡೆದ ಎರಡನೇ ಟಿ20 ಕಾದಾಟದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ಗೆ ತಲೆಬಾಗಿದೆ. ಟೀಮ್ ಇಂಡಿಯಾ ನೀಡಿದ 171 ರನ್ಗಳ ಸವಾಲಿನ ಮೊತ್ತವನ್ನು ವೆಸ್ಟ್ ಇಂಡೀಸ್ 18.3 ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ಮೂಲಕ ಸರಣಿಯನ್ನು 1-1ರಲ್ಲಿ ವಿಂಡಿಸ್ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಳೆದ ಪಂದ್ಯದಲ್ಲಿ ಮಾಡಿದ ತಪ್ಪನ್ನೇ ಟೀಮ್ ಇಂಡಿಯಾ ಈ ಪಂದ್ಯದಲ್ಲೂ ಮಾಡಿದೆ. ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದ ಭಾರತ ಪ್ರಮುಖ ವಿಕೆಟ್ ಕೀಳುವ ಅವಕಾಶವನ್ನು ಕಳೆದುಕೊಂಡಿತು. ಇದರ ಲಾಭ ಪಡೆದ ವಿಂಡಿಸ್ ಈ ಪಂದ್ಯವನ್ನು ಗೆದ್ದುಕೊಂಡಿದೆ.
ಭಾರತ ನೀಡಿದ 171 ರನ್ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ವಿಂಡಿಸ್ ಪರವಾಗಿ ಆರಂಭಿಕ ಆಟಗಾರರಾದ ಲೆಂಡ್ಲ್ ಸಿಮನ್ಸ್(ಅಜೇಯ 67) ಮತ್ತು ಎವಿನ್ ಲಿವಿಸ್(40) ಉತ್ತಮ ಆರಂಭವನ್ನು ನೀಡಿದರು. ಬಳಿಕ ಬಂದ ಹೇಟ್ಮೆರ್ ಮತ್ತು ನಿಕೋಲಸ್ ಪೂನ್ ಕೂಡ ಅದ್ಭುತ ಆಟ ಪ್ರದರ್ಶಿಸಿ ಗೆಲುವಿಗೆ ಕಾರಣರಾದರು.
ಭಾರತ ನೀಡಿದ ಗುರಿಯನ್ನು ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ವೆಸ್ಟ್ ಇಂಡೀಸ್ ಗೆದ್ದುಕೊಂಡಿತು. ಭಾರತದ ಪರವಾಗಿ ವಾಶಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜ ಮಾತ್ರ ತಲಾ ಒಂದು ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುನ್ನ ಟಾಸ್ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿತು. ಭಾರತದ ಪರವಾಗಿ ವನ್ಡೌನ್ ಸ್ಥಾನದಲ್ಲಿ ಬಂದ ಯುವ ಕ್ರಿಕೆಟಿಗ ಶಿವಂ ದುಬೆ ಅದ್ಭುತ ಆಟ ಪ್ರದರ್ಶಿಸಿದರು. 30 ಎಸೆತ ಎದುರಿಸಿದ ಶಿವಂ ದುಬೆ ಸ್ಪೋಟಕ 54 ರನ್ ಸಿಡಿಸಿದರು. ದುಬೆ ಇನ್ನಿಂಗ್ಸ್ನಲ್ಲಿ ನಾಲ್ಕು ಸಿಕ್ಸರ್ ಮೂರು ಬೌಂಡರಿಗಳು ಇತ್ತು. ಫಾರ್ಮ್ ಕಳೆದುಕೊಂಡು ಸಾಕಷ್ಟು ಟೀಕೆಗೆ ಗುರಿಯಾಗಿದ್ದ ರಿಷಬ್ ಪಂತ್ ಸಮಯೋಚಿತ ಆಟ ಪ್ರದರ್ಶಿಸಿದರು. 22 ಎಸೆತಗಳನ್ನು ಎದುರಿಸಿದ ಪಂತ್ 33 ರನ್ ಬಾರಿಸಿದರು.
ನಾಯಕ ವಿರಾಟ್ ಕೋಹ್ಲಿ(19ರನ್), ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ(15ರನ್) ಮತ್ತು ರಾಹುಲ್(11ರನ್) ನಿರಾಸೆ ಮೂಡಿಸಿದರು. ವಿಂಡಿಸ್ ಪರವಾಗಿ ಹೇಡಿನ್ ವಾಲ್ಶ್ ಮತ್ತು ಕೆಸ್ರಿಕ್ ವಿಲಿಯಮ್ಸ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್ಗಳಿಸಿತ್ತು.